ಶಾರುಕ್ ಗೆ ಬಾಳಾ ಠಾಕ್ರೆಯ ಎಚ್ಚರಿಕೆ
ಮುಂಬೈ, ಸೆ. 9 : ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್ ಹೇಳಿಕೆಯ ತೀವ್ರ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಕಿಂಗ್ ಖಾನ್ ಶಾರೂಕ್ ಖಾನ್ ವಿವಾದ ಸುಳಿಯಲ್ಲಿ ಸಿಲುಕಿದ್ದಾರೆ. 'ನಾನು ದಿಲ್ಲಿಯವನು' ಎಂದು ಹೇಳಿಕೆ ನೀಡಿರುವುದನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ತಮ್ಮ ಪತ್ರಿಕೆ ಸಾಮ್ನಾದ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ನಾವು ಉತ್ತರ ಪ್ರದೇಶವದರು, ಆದರಿಂದ ಹಿಂದೆ ಮಾತ್ರ ಮಾತನಾಡುತ್ತೇವೆ ಎನ್ನುವ ಮೂಲಕ ಮರಾಠಿ ಭಾಷೆಯನ್ನು ಅವಮಾನಿಸಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರು ಜಯಾಬಚ್ಚನ್ ವಿರುದ್ಧ ಕಿಡಿಕಾರಿದ್ದರು. ಜಯಾ ಬಚ್ಚನ್ ಕ್ಷಮೆಯಾಚಿಸುವವರೆಗೂ ಅಮಿತಾಭ್ ಕುಟುಂಬ ನಟಿಸಿದ ಚಿತ್ರಗಳು ಹಾಗೂ ಜಾಹೀರಾತುಗಳ ಪ್ರಸಾರವನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಮಂಗಳವಾರ ಜಯಾ ಬಚ್ಚನ್ ಮರಾಠಿ ಭಾಷೆ ಹಾಗೂ ಜನರನ್ನು ಅವಮಾನಿಸುವ ದುರುದ್ದೇಶದಿಂದ ಮಾತನಾಡಿಲ್ಲ. ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದು ಮಹಾರಾಷ್ಟ್ರ ಜನರಲ್ಲಿ ಮನವಿ ಮಾಡಿಕೊಂಡಿದ್ದರು.
ಇದರ ಬೆನ್ನಲ್ಲೇ, ನಟ ಶಾರೂಕ್ ಖಾನ್ 'ನಾನು ದಿಲ್ಲಿಯವನು' ಎಂದಿರುವುದು ಸರಿಯಲ್ಲ ಎಂದು ಬಾಳಾ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಜನರಿಗೆ ಜೀವನ ರೂಪಿಸಿರುವುದು ಮಹಾರಾಷ್ಟ್ರ, ಹೊಟ್ಟೆ ಪಾಡಿಗಾಗಿ ಬಂದು ಪ್ರಸಿದ್ಧಿ, ಹಣ, ಎಲ್ಲವನ್ನೂ ಗಳಿಸಿದ ನಂತರ ತವರಿನ ನೆನಪಾಗುತ್ತದೆ. ತವರಿನ ನೆನಪಾಗುವುದು ತಪ್ಪಲ್ಲ. ಆದರೆ ಉಂಡ ಮನೆಗೆ ದ್ರೋಹ ಎಸಗುವುದು ಎಷ್ಟು ಸರಿ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











