ವಿಶ್ವದಾದ್ಯಂತ 'ಐಶ್ವರ್ಯ'ದ ಹೊಳೆ ಹರಿಸಿದ ರಾವಣ್
ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರ 'ರಾವಣ್' ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದೆ. ರಾವಣನ ಬಾಕ್ಸಾಫೀಸ್ ಜೋಳಿಗೆ ತುಂಬಿ ತುಳುಕುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ರು.20 ಕೋಟಿ ಬಾಚಿಕೊಂಡಿದ್ದಾನೆ ರಾವಣ. ಹಿಂದಿಯಲ್ಲಿ ರಾವಣ್, ತಮಿಳಿನಲ್ಲಿ ರಾವಣನ್ ಹಾಗೂ ತೆಲುಗಿನಲ್ಲಿ ವಿಲನ್ ರೂಪದಲ್ಲಿ ತೆರೆಕಂಡಿರುವ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ರಿಲಯನ್ಸ್ ಬಿಗ್ ಪಿಕ್ಚರ್ಸ್ ಪ್ರಕಟಿಸಿದೆ.
'ರಾವಣ' ಚಿತ್ರ ಪರ್ವಾಗಿಲ್ಲ. ಚಿತ್ರದಲ್ಲಿ ಹೇಳಿಕೊಳ್ಳುವಂತಹ ವಿಶೇಷಗಳೇನಿಲ್ಲ. ಮಣಿರತ್ನಂ ನಿರಾಸೆ ಪಡಿಸಿದ್ದಾರೆ ಎಂಬ ಅಭಿಪ್ರಾಯ ಚಿತ್ರ ವಿಮರ್ಶಕರಿಂದ ವ್ಯಕ್ತವಾಗಿತ್ತು. ಆದರೆ ಪ್ರೇಕ್ಷಕರಿಂದ ಚಿತ್ರ ಅಮೋಘವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ 'ಅಪೂರ್ವ ಕಲಾಕೃತಿ' ಎಂದು ರಾವಣನನ್ನು ವಿಮರ್ಶಿಸಿದೆ.
ಮೂರು ಭಾಷೆಗಳ 2200 ಕೇಂದ್ರಗಳಲ್ಲಿ 'ರಾವಣ್' ಚಿತ್ರ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ರಾವಣನ ಗಳಿಕೆ ಹುಬ್ಬೇರಿಸಿದೆ. ತಮಿಳುನಾಡಿನಲ್ಲಂತೂ 'ರಾವಣನ್' ಚಿತ್ರ 15 ದಿನಗಳವರೆಗೆ ಹೌಸ್ ಫುಲ್ ಆಗಿದೆ.
ಹೊಗೇನಕಲ್ ನ ರಮಣೀಯ ಸೌಂದರ್ಯ, ಕಣ್ಮನ ತಣಿಸುವ ಸುಂದರ ತಾಣಗಳು, ಚಿತ್ರಕತೆಗಿಂತಲೂ ಛಾಯಾಗ್ರಹಣ ಹಾಗೂ ಮಣಿರತ್ನಂ ನಿರ್ದೇಶನ, ಐಶ್ವರ್ಯ ರೈ ಅಂದ ಚೆಂದಗಳು ಪ್ರೇಕ್ಷಕರನ್ನು ಹಿಡಿದಿಡುತ್ತಿರುವ ಅಂಶಗಳು. ಸಂತೋಷ್ ಶಿವನ್ ಅವರ ಛಾಯಾಗ್ರಹಣ, ಆಸ್ಕರ್ ಪುರಸ್ಕೃತ ಎ ಆರ್ ರೆಹಮಾನ್ ಸಂಗೀತ ಪ್ರೇಕ್ಷಕರ ಕಣ್ಣು ಕಿವಿಗಳಿಗೆ ಪರಮಾನಂದ ಉಂಟು ಮಾಡುತ್ತಿದೆ.


Click it and Unblock the Notifications











