ಕಾರ್ಗಿಲ್ ಯುದ್ಧದಲ್ಲಿ ಪಾಪಿ ಪಾಕಿಗಳ ಹುಟ್ಟಡಗಿಸಿದ ಭಾರತೀಯ ಸೈನಿಕರ ವಿಜಯೋತ್ಸವದ ಅಂಗವಾಗಿ ಜು. 26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸುತ್ತಿರುವುದು ತಿಳಿದಿದೆಯಷ್ಟೆ. ಗಡಿಕಾಯುವ ವೀರಯೋಧರಿಗೆ ವಿಜಯದ ಸಂಭ್ರಮಾಚರಣೆಯ ಹೆಚ್ಚು ಮಾಡಲು ಆಗಾದ ಬಾಲಿವುಡ್ ನಟ ನಟಿಯರು ಡ್ರಾಸ್, ಕಾರ್ಗಿಲ್ ಕ್ಯಾಂಪ್ ಗೆ ಹೋಗಿ ಬರುವುದು ವಾಡಿಕೆಯಾಗಿ ಹೋಗಿದೆ. ಬಾಲಿವುಡ್ ತಾರೆಯರನ್ನು ಯೋಧರ ಬಳಿಗೆ ಕರೆದೊಯ್ಯುವ ಕಾರ್ಯವನ್ನು ಎನ್ ಡಿಟಿವಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಇತ್ತೀಚೆಗೆ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಕೂಡ ಎನ್ ಡಿ ಟಿವಿಯ ಪ್ರಧಾನ ಸಂಪಾದಕಿ ಬರ್ಖಾ ದತ್ ಜತೆ ಕಾರ್ಗಿಲ್ ಗೆ ಭೇಟಿ ಕೊಟ್ಟಿದ್ದರು. ವಿಜಯ್ ದಿವಸ್ ಅಚರಣೆಯ ಸಂಭ್ರಮದಲ್ಲಿರುವ ಯೋಧರಿಗೆ ಒಂದಷ್ಟು ಮನರಂಜನೆ, ಹರ್ಷ ನೀಡಿಬಂದರು. ಇಷ್ಟಲ್ಲದೇ ತಮ್ಮ ತಾತಾ ಕವಿ ಹರಿವಂಶ್ ರಾಯ್ ಬಚ್ಚನ್ ಅವರು ಯೋಧರಿಗಾಗಿ ಬರೆದಿರುವ ಕವನ ಸಂದೇಶವನ್ನು ಯೋಧರ ಮುಂದೆ ಓದಿ ಯೋಧರ ಕಣ್ಣಾಲಿಗಳು ತುಂಬುವಂತೆ ಅಭಿಷೇಕ್ ಮಾಡಿದರು.ಯೋಧರ ದಿರಿಸು ತೊಟ್ಟು ತಮ್ಮನ್ನು ತಾವು ಮೈಮರೆತು ನಿಜ ಯೋಧರೊಡನೆ ಹಾಡಿ ನಲಿದಾಡಿದರು.