ಮತ್ತೆ ಇಕ್ಕಟ್ಟಿನಲ್ಲಿ ಆಮಿರ್ ಖಾನ್: ಹಿಂದು ವಿವಾಹ ಪದ್ಧತಿ ಪ್ರಶ್ನಿಸಿದ ಆರೋಪ
ಬಾಯ್ಕಾಟ್ ಮಾಡುವುದು, ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಧರ್ಮ ವಿರೋಧಿ ಅಂಶಗಳನ್ನು ಹುಡುಕಿ ಹುಡುಕಿ ತೆಗೆಯುವುದು ಇತ್ತೀಚೆಗೆ ಟ್ರೆಂಡ್ ಆಗಿಬಿಟ್ಟಿದೆ.
ಅದರಲ್ಲಿಯೂ ಕೆಲವು ಸ್ಟಾರ್ ನಟರ ಮೇಲೆ ಅವರ ಸಿನಿಮಾ, ಜಾಹೀರಾತುಗಳ ಮೇಲೆ ಕೋಟ್ಯಂತರ ಕಣ್ಣುಗಳು ಕೇವಲ ತಪ್ಪು ಹುಡುಕಲೆಂದೇ ಸ್ಥಿತವಾಗಿರುತ್ತವೆ.
ಈಗಾಗಲೇ ನೆಟ್ಟಿಗರಿಂದ ಸತತ ಟ್ರೋಲ್, ಬಾಯ್ಕಾಟ್, ಬೆದರಿಕೆ, ವಿವಾದಗಳಿಗೆ ಗುರಿಯಾಗಿರುವ ಬಾಲಿವುಡ್ನ ಸ್ಟಾರ್ ನಟ ಆಮಿರ್ ಖಾನ್ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಆಮಿರ್ ಖಾನ್ರ ಹೊಸ ಜಾಹೀರಾತೊಂದನ್ನು ನೆಟ್ಟಿಗರು ಗುರಿ ಮಾಡಿಕೊಂಡಿದ್ದಾರೆ.
ಖಾಸಗಿ ಬ್ಯಾಂಕ್ ಒಂದರ ಜಾಹೀರಾತಿನಲ್ಲಿ ಆಮಿರ್ ಖಾನ್ ನಟಿಸಿದ್ದು, ಈ ಜಾಹೀರಾತು ಹಿಂದು ವಿರೋಧಿಯಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಹಿಂದು ವಿವಾಹದ ಪದ್ಧತಿಗಳನ್ನು ಪ್ರಶ್ನಿಸುವ ಜಾಹೀರಾತಿನಲ್ಲಿ ಆಮಿರ್ ಖಾನ್ ನಟಿಸಿದ್ದಾರೆ ಎನ್ನಲಾಗುತ್ತಿದ್ದು, ಮಧ್ಯಪ್ರದೇಶದ ಗೃಹ ಮಂತ್ರಿ ಸಹ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?
ಜಾಹೀರಾತು ಹೀಗಿದೆ, ಆಮಿರ್ ಖಾನ್ ಹಾಗೂ ಕಿಯಾರಾ ಅಡ್ವಾಣಿ ಮದುವೆಯಾಗಿ ಕಾರಿನಲ್ಲಿ ಹೋಗುತ್ತಿರುತ್ತಾರೆ. ಆಗ ಆಮಿರ್ ಖಾನ್, ಇದೇ ಮೊದಲ ಬಾರಿಗೆ 'ವಿದಾಯಿ' (ವಧುವನ್ನು ಕಳಿಸಿಕೊಡುವ ಪದ್ಧತಿ) ಸಮಯ ಯಾರು ಅಳಲಿಲ್ಲ ಎನ್ನುತ್ತಾರೆ. ಅದಕ್ಕೆ ವಧುವಿನ ಪಾತ್ರದಲ್ಲಿದ್ದ ಕಿಯಾರಾ ನೀವು ಸಹ ಅಳಲಿಲ್ಲ ಎನ್ನುತ್ತಾರೆ. ನಂತರ ಮನೆ ತಲುಪಿದ ನೂತನ ವಧು-ವರರನ್ನು ಆರತಿ ಮಾಡಿ ಸ್ವಾಗತಿಸಲಾಗುತ್ತದೆ. ಆಗ ಆಮಿರ್ ಖಾನ್ ಮೊದಲ ಹೆಜ್ಜೆ ಯಾರಿಡುತ್ತಾರೆ ಎಂದು ಕೇಳುತ್ತಾರೆ. ಆಗ ಈ ಮನೆಯಲ್ಲಿ ನೀವೇ ಹೊಸಬರು ಹಾಗಾಗಿ ನೀವೇ ಮೊದಲ ಹೆಜ್ಜೆ ಇಡಿ ಎಂದಾಗ, ಆಮಿರ್ ಖಾನ್ ಬಲಗಾಲಿಟ್ಟು ಮನೆ ಪ್ರವೇಶ ಮಾಡುತ್ತಾರೆ. ಆಗ ವಧುವಿನ ತಾಯಿ, 'ಅಳಿಯಂದಿರೇ ನಿಮಗೆ ಸ್ವಾಗತ' ಎನ್ನುತ್ತಾರೆ.

ಜಾಹೀರಾತಿನಲ್ಲಿರುವುದೇನು?
ಸಾಮಾನ್ಯವಾಗಿ ಮದುವೆಯಾದ ಬಳಿಕ ವಧು, ವರನ ಮನೆಗೆ ಹೋಗುವ ರೂಢಿ ಇದೆ. ಆದರೆ ಈ ಜಾಹೀರಾತಿನಲ್ಲಿ ವರ, ವಧುವಿನ ಮನೆಗೆ ಹೋಗುತ್ತಾನೆ. ಜಾಹೀರಾತಿನ ಕೊನೆಗೆ, ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯಗಳೇ ಈಗಲೂ ನಡೆದುಕೊಂಡು ಬರುತ್ತಿವೆ, ಅದೇಕೆ ಹಾಗೆ? ಹಾಗಾಗಿಯೇ ನಾವು ಬ್ಯಾಂಕಿಂಗ್ನ ಪ್ರತಿ ಪದ್ಧತಿಗಳನ್ನು ಪ್ರಶ್ನೆ ಮಾಡುತ್ತೇವೆ ಹಾಗೂ ನಿಮಗೆ ಅತ್ಯುತ್ತಮ ಸೇವೆಯನ್ನು ನೀಡುತ್ತೇವೆ ಎನ್ನುತ್ತಾರೆ ಆಮಿರ್. ಆದರೆ ಈ ಜಾಹೀರಾತಿನ ಮೂಲಕ ಆಮಿರ್ ಖಾನ್ ಅವರು ಹಿಂದು ವಿವಾಹ ಪದ್ಧತಿಯನ್ನು ಪ್ರಶ್ನೆ ಮಾಡಿದ್ದಾರೆ ಎಂಬ ಆರೋಪವನ್ನು ಈಗ ಹೊರಿಸಲಾಗಿದೆ.

ಜಾಹೀರಾತಿನ ಪರವಾಗಿಯೂ ನಿಂತವರಿದ್ದಾರೆ
ಆದರೆ ಹಲವರು ಜಾಹೀರಾತಿನ ಪರವಾಗಿಯೂ ನಿಂತಿದ್ದಾರೆ. ಜಾಹೀರಾತು ಬಹಳ ಸುಂದರವಾಗಿದೆ. ಹೊಸ ಪದ್ಧತಿಗೆ ನಾಂದಿ ಹಾಡುವ ಯೋಚನೆಯನ್ನು ಹೊಂದಿದೆ. ತಮ್ಮ ಉತ್ಪನ್ನದ ಪ್ರಚಾರಕ್ಕೆ ಉತ್ತಮ ಸಾಮಾಜಿಕ ಸಂದೇಶವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹಲವರು ಬೆಂಬಲ ಸಹ ಸೂಚಿಸಿದ್ದಾರೆ. ಹಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಆಮಿರ್ ಖಾನ್ ಜಾಹೀರಾತನ್ನು ತೀವ್ರ ವಿರೋಧ ಮಾಡಿದ್ದಾರೆ.

ಸಚಿವ ನರೋತ್ತಮ ಮಿಶ್ರಾ ಹೇಳಿಕೆ
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಚಿವ ನರೋತ್ತಮ ಮಿಶ್ರಾ, ''ಈ ರೀತಿಯ ಹಿಂದು ವಿರೋಧಿ ಜಾಹೀರಾತುಗಳಲ್ಲಿ ನಟಿಸಬಾರದೆಂದು ನಾನು ಆಮಿರ್ ಖಾನ್ ಬಳಿ ಮನವಿ ಮಾಡುತ್ತೇನೆ. ಈ ರೀತಿಯ ಕಾರ್ಯಗಳಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆ ಆಗುತ್ತದೆ. ನಿಮಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ಹಕ್ಕಿಲ್ಲ'' ಎಂದಿದ್ದಾರೆ. ಇದರ ಬೆನ್ನಲ್ಲೆ ಆಮಿರ್ ಖಾನ್ ನಟಿಸಿರುವ ಜಾಹೀರಾತನ್ನು ಬ್ಯಾನ್ ಮಾಡುವಂತೆ ಹಾಗೂ ಜಾಹೀರಾತು ನೀಡಿರುವ ಬ್ಯಾಂಕ್ ಅನ್ನು ಬಾಯ್ಕಾಟ್ ಮಾಡುವಂತೆ ಟ್ರೆಂಡ್ ಆಗುತ್ತಿದೆ.


Click it and Unblock the Notifications











