ಜಿಮ್ನಲ್ಲಿ ಯುವಕರ ಸಾವು: ಅದೇ ಕಾರಣ ಎಂದ ಸುನಿಲ್ ಶೆಟ್ಟಿ
ಇತ್ತೀಚೆಗೆ ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ನಡು ವಯಸ್ಸೂ ದಾಟದ ಯುವಕರು ಹೃದಯಾಘಾತದಿಂದ ಜೀವ ಬಿಡುತ್ತಿದ್ದಾರೆ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಾ ಫಿಟ್ ಆಗಿರುವವರಿಗೂ ಹಠಾತ್ತನೆ ಹೃದಯಾಘಾತವಾಗುತ್ತಿದೆ. ಜಿಮ್ ಮಾಡುತ್ತಾ ಮಾಡುತ್ತಾ ಜೀವ ಬಿಡುವವರ ಸಂಖ್ಯೆಯೂ ಏರುತ್ತಿರುವುದು ಇನ್ನಷ್ಟು ಆತಂಕ ತಂದಿದೆ.
ಇತ್ತೀಚೆಗಷ್ಟೆ ಯುವ ನಟ ಸಿದ್ಧಾರ್ಥ್ ವೀರ್ ಸಿದ್ಧಾಂತ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಲೇ ಜೀವ ಬಿಟ್ಟಿದ್ದರು. ಇದು ಚಿತ್ರಜಗತ್ತಿನವರಿಗೆ ಆತಂಕ ತಂದಿತ್ತು. ಏಕೆಂದರೆ ಸಿನಿಮಾದಲ್ಲಿ ನಟಿಸುವ ಬಹುತೇಕ ನಟ-ನಟಿಯರು ಜಿಮ್ ಫ್ರೀಕ್ಗಳಾಗಿದ್ದಾರೆ. ಉತ್ತಮ ಅಂಗಸೌಷ್ಟವಕ್ಕಾಗಿ ಪ್ರತಿನಿತ್ಯ ಜಿಮ್ ಮಾಡುವುದು ಅತ್ಯವಶ್ಯಕ ಎಂಬಂತಾಗಿದೆ.
ಇದೀಗ ಬಾಲಿವುಡ್ನ ಹಿರಿಯ ನಟ ಸುನಿಲ್ ಶೆಟ್ಟಿ, ಈ ಬಗ್ಗೆ ಮಾತನಾಡಿದ್ದು, ಜಿಮ್ ಮಾಡುವುದರಿಂದ ಆಗುತ್ತಿರುವ ಸರಣಿ ಸಾವುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸುನಿಲ್ ಶೆಟ್ಟಿ, ಜಿಮ್ನಿಂದಾಗಿ ಆಗುತ್ತಿರುವ ಸಾವಿಗೆ ವರ್ಕೌಟ್ ಮಾಡುತ್ತಿರುವುದು ಕಾರಣವಲ್ಲ ಬದಲಿಗೆ ಬೇಗನೆ ಬಾಡಿ ಬಿಲ್ಡ್ ಮಾಡಲು ತೆಗೆದುಕೊಳ್ಳುವ ಔಷಧಗಳಿಂದ ಸಾವಾಗುತ್ತಿದೆ ಎಂದಿದ್ದಾರೆ.
ಜಿಮ್ನಲ್ಲಿ ಆಗುತ್ತಿರುವ ಸಾವುಗಳಿಗೆ ಹೃದಯ ವಿಫಲತೆ ಕಾರಣ ಹೃದಯಾಘಾತವಲ್ಲ. ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇವಿಸುವುದು, ಸರಿಯಾಗಿ ನಿದ್ದೆ ಮಾಡುವುದರಿಂದ ಈ ರೀತಿಯ ಸಾವುಗಳನ್ನು ತಡೆಯಬಹುದು. ಸರಿಯಾದ ಆಹಾರ ಎಂದ ಕೂಡಲೇ ಡಯೆಟ್ ಪ್ರಾರಂಭಿಸಬೇಕು ಎಂದೇನೂ ಇಲ್ಲ. ಸರಿಯಾದ ಪ್ರಮಾಣದಲ್ಲಿ ನ್ಯೂಟ್ರಿಷನ್ ಹಾಗೂ ಕಾರ್ಬೊಹೈಡ್ರೇಟ್ಗಳನ್ನು ದೇಹಕ್ಕೆ ಸೇರಿಸಿಕೊಳ್ಳುವುದಾಗಿದೆ'' ಎಂದಿದ್ದಾರೆ ಸುನಿಲ್ ಶೆಟ್ಟಿ.

''ಕೋವಿಡ್ ಬಳಿಕ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ನಮ್ಮ ರಕ್ತ ಸರಿಯಾಗಿ ಇದೆಯೇ, ಶುದ್ಧವಾಗಿದೆಯೇ ಎಂಬುದನ್ನು ಸಹ ನಾವೂ ಡಿ-ಡೈಮರ್ ಟೆಸ್ಟ್ ಮೂಲಕ ಪರೀಕ್ಷಿಸಿಕೊಳ್ಳಬೇಕು ಅದೂ ಸಹ ಬಹಳ ಮುಖ್ಯ'' ಎಂದಿದ್ದಾರೆ ಸುನಿಲ್ ಶೆಟ್ಟಿ.
ಕರ್ನಾಟಕ ಮೂಲದ ಸುನಿಲ್ ಶೆಟ್ಟಿ, ಹಲವು ದಶಕಗಳಿಂದ ಬಾಲಿವುಡ್ನಲ್ಲಿ ನಾಯಕ ನಟರಾಗಿ ಗುರಿತಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಸಹ ನೀಡಿದ್ದಾರೆ. ಕನ್ನಡದ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಇನ್ನೂ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸುನಿಲ್ ಶೆಟ್ಟಿ ನಟಿಸಿದ್ದಾರೆ. ಇದೀಗ ಅವರ ನಟನೆಯ 'ಧಾರಾವಿ ಬ್ಯಾಂಕ್' ವೆಬ್ ಸರಣಿ ಮ್ಯಾಕ್ಸ್ ಪ್ಲೇಯರ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











