ಅಳಿಲು, ವಾನರರಾಗೋಣ: ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿ ಎಂದ ಅಕ್ಷಯ್
ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನ ನಂತರ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಸಲುವಾಗಿ 'ಸಮರ್ಪಣಾ ಅಭಿಯಾನ' ದೇಶದಾದ್ಯಂತ ನಡೆಯುತ್ತಿದ್ದು, ಹಲವಾರು ಮಂದಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಸಹ ದೇಣಿಗೆ ನೀಡುತ್ತಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದು, ಸರ್ವರೂ ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ಅಕ್ಷಯ್ ಕುಮಾರ್, ರಾಮ ಸೇತು ನಿರ್ಮಾಣ ಸಮಯದಲ್ಲಿ ಅಳಿಲು ಮಾಡಿದ ಸೇವೆಯ ಕತೆ ಹೇಳಿ. ವಾನರರು ಕಲ್ಲು ತಂದು ಸೇತುವೆ ಕಟ್ಟುವ ಸಮಯದಲ್ಲಿ ಅಳಿಲು ತನ್ನ ಕೈಲಾದ ಮಟ್ಟಿಗೆ ಮರಳು ಹೊತ್ತು ತಂದು ರಾಮಸೇತು ಕಟ್ಟಲು ನೆರವಾಯ್ತು, ಹಾಗೆಯೇ ನಾವು ಸಹ ವಾನರರಾಗೋಣ, ಅಳಿಲಾಗೋಣ ರಾಮ ಮಂದಿರ ನಿರ್ಮಾಣದಲ್ಲಿ ನಮ್ಮ ಕೈಜೋಡಿಸೋಣ ಎಂದು ಹೇಳಿದ್ದಾರೆ.
ಕನ್ನಡತಿ, ನಟಿ ಪ್ರಣಿತಾ ಸುಭಾಷ್ ಸಹ ರಾಮ ಮಂದಿರ ನಿರ್ಮಾಣಕ್ಕೆ ಕೆಲವು ದಿನಗಳ ಹಿಂದಷ್ಟೆ 1 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದರು. ಉಳ್ಳವರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.
ಮಾಧ್ಯಮ ಸಂಸ್ಥೆ ಎಎನ್ಐ ಹೇಳಿರುವಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ 100 ಕೋಟಿ ರೂಪಾಯಿ ಹಣ ಕ್ರೂಡೀಕರಣ ಆಗಿದೆಯಂತೆ.


Click it and Unblock the Notifications











