ಸುಶಾಂತ್ ಸಾವಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ
ಸುಶಾಂತ್ ಸಿಂಗ್ ಸಾವು ರಾಜಕೀಯ ತಿರುವು ತೆಗೆದುಕೊಂಡು ತಿಂಗಳುಗಳೇ ಆಗಿದೆ. ಬಿಹಾರ ವಿಧಾನಸಭೆ ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ ಸುಶಾಂತ್ ಸಾವು.
ಸುಶಾಂತ್ ಪ್ರಕರಣವು ಬಿಜೆಪಿ-ಶಿವಸೇನೆ ನಡುವಿನ ಯುದ್ಧವೆಂದೇ ಬಿಂಬಿಸಲಾಗಿತ್ತು, ನಂತರ ಬಿಹಾರ ಚುನಾವಣೆಯಲ್ಲೂ ಸುಶಾಂತ್ ಪ್ರಕರಣವನ್ನು ಎಳೆದು ತರಲಾಗಿತ್ತು. ಸುಶಾಂತ್ ಸಾವನ್ನು ರಾಜಕೀಯಗೊಳಿಸುವ ಹಿಂದೆ ಬಿಜೆಪಿ ಹಾಗೂ ಮಿತ್ರ ಪಕ್ಷದ ಪಾಲಿದೆ ಎಂಬ ಆರೋಪವನ್ನು ವಿಪಕ್ಷಗಳು ಮಾಡಿವೆ.
ಇದೀಗ ಸುಶಾಂತ್ ಸಾವು ಹಾಗೂ ಪ್ರಕರಣದ ಕುರಿತು ಮಾಧ್ಯಮಗಳ ವರ್ತನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಮೊದಲ ದಿನದಿಂದಲೇ ಸಿಬಿಐ ತನಿಖೆ ಮಾಡಬೇಕಿತ್ತು: ಅಮಿತ್ ಶಾ
'ಸುಶಾಂತ್ ಸಾವಿನ ಬಗ್ಗೆ ಮೊದಲ ದಿನದಿಂದಲೂ ಅನುಮಾನಗಳು ಎದ್ದಿದ್ದವು, ಆ ಪ್ರಕರಣವನ್ನು ಮೊದಲ ದಿನದಿಂದಲೇ ಸಿಬಿಐ ತನಿಖೆ ನಡೆಸಬೇಕಿತ್ತು' ಎಂದಿದ್ದಾರೆ ಅಮಿತ್ ಶಾ, ಆ ಮೂಲಕ ಮುಂಬೈ ಪೊಲೀಸರು ಪ್ರಕರಣವನ್ನು ತಿರುಚಿರಬಹುದಾದ ಅನುಮಾನವನ್ನು ಪರೋಕ್ಷವಾಗಿ ಎತ್ತಿದ್ದಾರೆ.

ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದು ಸರ್ಕಾರವಲ್ಲ: ಅಮಿತ್ ಶಾ
ಸುಶಾಂತ್ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದು ನಾವಲ್ಲ ಬದಲಿಗೆ ಸುಪ್ರೀಂ ಕೋರ್ಟ್. ಸುಶಾಂತ್ ಆಗಲಿ ಮತ್ತೋರ್ವರೇ ಆಗಲಿ, ಅಸಹಜ ಸಾವಿನ ತನಿಕೆ ಆಗಲೇ ಬೇಕು, ತನಿಖೆಯು ನಿಷ್ಪಕ್ಷಪಾತವಾಗಿಯೇ ನಡೆಯಬೇಕು ಎಂದಿದ್ದಾರೆ ಅಮಿತ್ ಶಾ.

ಪ್ರಕರಣವನ್ನು ರಾಜಕೀಯ ವಿಷಯವಾಗಿಸಿದ್ದು ಬಿಜೆಪಿ ಅಲ್ಲ: ಅಮಿತ್ ಶಾ
'ಸುಶಾಂತ್ ಪ್ರಕರಣವು ಎಷ್ಟರ ಮಟ್ಟಿಗೆ ರಾಜಕೀಯ ವಿಷಯ ಆಗಿದೆ ಎಂಬುದು ಗೊತ್ತಿಲ್ಲ, ಹಾಗೊಮ್ಮೆ ರಾಜಕೀಯ ವಿಷಯವಾಗಿದ್ದರೆ ಅದಕ್ಕೆ ಕಾರಣ ನಾವಲ್ಲ(ಬಿಜೆಪಿ). ಸಿಬಿಐ ಮೊದಲ ದಿನದಿಂದಲೇ ಈ ಪ್ರಕರಣದ ತನಿಖೆ ನಡೆಸಿದ್ದರೆ, ಇದು ರಾಜಕೀಯ ವಿಷಯವಾಗುತ್ತಿರಲಿಲ್ಲ' ಎಂದಿದ್ದಾರೆ ಶಾ.
Recommended Video

'ಟಿಆರ್ಪಿಗಾಗಿ ಮೂಗಿನ ನೇರಕ್ಕೆ ವಾದ ಹರಿಬಿಡುವುದು ಸರಿಯಲ್ಲ'
ಮಾಧ್ಯಮಗಳ ವರ್ತನೆ ಬಗ್ಗೆಯೂ ಮಾತನಾಡಿರುವ ಶಾ, 'ಮಾಧ್ಯಮಗಳು ಟಿಆರ್ಪಿ ಗಾಗಿ ತಮ್ಮ ಮೂಗಿನ ನೇರಕ್ಕೆ ಪ್ರಕರಣವನ್ನು ವಿಶ್ಲೇಷಿಸುವುದು ಸರ್ವತಾ ಸರಿಯಲ್ಲ, ಒಂದೊಮ್ಮೆ, ತನಿಖೆಯಲ್ಲಿ ಲೋಪದೋಷಗಳು ಕಂಡು ಬಂದರೆ ಮಾಧ್ಯಮಗಳು ಪ್ರಶ್ನೆ ಮಾಡಲಿ, ಆದರೆ ಅವರೇ ಪ್ರಕರಣವನ್ನು ನಿರ್ಣಯಿಸುವುದು ಸರಿಯಾದ ಕ್ರಮವಲ್ಲ, ಹಾಗೆ ಆಗ ಬಾರದು' ಎಂದಿದ್ದಾರೆ.


Click it and Unblock the Notifications











