ಆರ್ಯನ್ಗೆ 'ಗಾಂಜಾ ಕೊಡಿಸುವೆ' ಎಂದಿದ್ದ ಅನನ್ಯಾ: 'ತಮಾಷೆ ಮಾಡಿದ್ದೆ' ಎಂದ ನಟಿ
ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಬಂಧಿಸಿದ್ದು, ಇದೀಗ ಅದೇ ಪ್ರಕರಣ ನಟಿ ಅನನ್ಯಾ ಪಾಂಡೆ ಕಾಲಿಗೂ ಸುತ್ತಿಕೊಂಡಿದೆ.
ಆರ್ಯನ್ ಖಾನ್ ಪ್ರಕರಣ ತನಿಖೆ ವೇಳೆ ಸಿಕ್ಕ ಲೀಡ್ ಹಿಡಿದುಕೊಂಡು ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್ಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದರು. ನಟಿಯ ವಿಚಾರಣೆಯನ್ನೂ ಮಾಡಿದ್ದರು. ನಂತರ ಇಂದೂ ಸಹ ಅನನ್ಯಾ ಪಾಂಡೆಯವರನ್ನು ವಿಚಾರಣೆ ನಡೆಸಿದೆ ಎನ್ಸಿಬಿ.
ಆರ್ಯನ್ ಖಾನ್ ಹಾಗೂ ಅನನ್ಯಾ ಪಾಂಡೆ ನಡುವೆ ವಾಟ್ಸ್ಆಪ್ನಲ್ಲಿ ನಡೆದಿರುವ ಸಂಭಾಷಣೆ ಎನ್ಸಿಬಿ ಅಧಿಕಾರಿಗಳಿಗೆ ಅನನ್ಯಾ ಸಹ ಮಾದಕ ವಸ್ತು ಸೇವಿಸಿರುವ ಹಾಗೂ ಖರೀದಿಸಿರುವ ಅನುಮಾನ ಮೂಡಲು ಕಾರಣವಾಗಿದೆ.

ಆರ್ಯನ್ ಖಾನ್ ಜೊತೆಗಿನ ವಾಟ್ಸ್ಆಪ್ ಸಂಭಾಷಣೆಯಲ್ಲಿ, ಗಾಂಜಾ ಕೊಡಿಸುವುದಾಗಿ ಅನನ್ಯಾ ಪಾಂಡೆ ಹೇಳಿದ್ದರು ಎನ್ನಲಾಗಿದೆ. ವಿಚಾರಣೆ ವೇಳೆ ಈ ಬಗ್ಗೆ ಉತ್ತರಿಸಿದ ಅನನ್ಯಾ ಪಾಂಡೆ, ''ಆ ಮಾತನ್ನು ನಾನು ಕೇವಲ ತಮಾಷೆಗಾಗಿ ಆಡಿದ್ದೆ'' ಎಂದು ಹೇಳಿದ್ದಾರೆ.
ಅನನ್ಯಾ ಪಾಂಡೆ ಅವರ ಮೊಬೈಲ್, ಲ್ಯಾಪ್ಟಾಪ್ಗಳನ್ನು ಎನ್ಸಿಬಿ ವಶಕ್ಕೆ ಪಡೆದುಕೊಂಡಿದ್ದು ಅನನ್ಯಾ ಪಾಂಡೆ ಮಾದಕ ವಸ್ತು ಸೇವಿಸಿದ್ದರೆ ಅಥವಾ ಖರೀದಿಸಿದ್ದರೆ ಎಂಬ ಬಗ್ಗೆ ವಿವರವಾದ ತನಿಖೆ ಆರಂಭಿಸಿದ್ದಾರೆ. ಈ ತನಿಖೆಯಿಂದ ಬಾಲಿವುಡ್ನ ಇನ್ನಷ್ಟು ಸೆಲೆಬ್ರಿಟಿಗಳ 'ಡ್ರಗ್ ಲಿಂಕ್' ಹೊರಗೆ ಬರಬಹುದಾ ಎಂಬ ಅನುಮಾನ ಆರಂಭವಾಗಿದೆ.
ಅನನ್ಯಾ ಪಾಂಡೆ ಹಾಗೂ ಶಾರುಖ್ ಖಾನ್ರ ಇಬ್ಬರು ಮಕ್ಕಳು ಬಹಳ ಆತ್ಮೀಯ ಗೆಳೆಯರು. ಪಾರ್ಟಿಗಳಲ್ಲಿ, ಟ್ರಿಪ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ''ಶಾರುಖ್ ಖಾನ್ ನನಗೆ ಎರಡನೇ ತಂದೆ ಇದ್ದಂತೆ'' ಎಂದು ಹೇಳಿಕೆ ಕೊಟ್ಟಿದ್ದರು ಅನನ್ಯಾ, ಈ ಹೇಳಿಕೆಯಿಂದಾಗಿ ಸಾಕಷ್ಟು ಟ್ರೋಲ್ಗೆ ಸಹ ಗುರಿಯಾಗಿದ್ದರು.
ಆರ್ಯನ್ ಖಾನ್ ಅನ್ನು ಎನ್ಸಿಬಿಯು ಅಕ್ಟೋಬರ್ 03 ರಂದು ಬಂಧಿಸಿದೆ. ಆರ್ಯನ್ ಖಾನ್ ಜೊತೆಗೆ ಅವರ ಗೆಳೆಯ ಅರ್ಬಾಜ್ ಸೇಠ್ ಮತ್ತು ಮುನ್ಮುನ್ ಧಮೇಚಾ ಸಹ ಬಂಧನಕ್ಕೆ ಒಳಗಾಗಿದ್ದರು. ಆ ನಂತರ ಇನ್ನೂ ಐದು ಮಂದಿಯನ್ನು ಎನ್ಸಿಬಿ ಬಂಧಿಸಿದೆ.
ಆರ್ಯನ್ ಖಾನ್ ಪರ ವಕೀಲರು ಈವರೆಗೆ ಮೂರು ಬಾರಿ ಜಾಮೀನಿಗಾಗಿ ಅರ್ಜಿ ಹಾಕಿದ್ದು, ಮೂರು ಬಾರಿಯೂ ಆರ್ಯನ್ಗೆ ಜಾಮೀನು ದೊರೆತಿಲ್ಲ. ಆರ್ಯನ್ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 30 ರ ವರೆಗೆ ವಿಸ್ತರಿಸಲಾಗಿದ್ದು, ಆ ವರೆಗೆ ಆರ್ಯನ್ ಖಾನ್ ಮುಂಬೈನ ಆರ್ಥರ್ ರಸ್ತೆಯ ಜೈಲಿನಲ್ಲಿ ಕಾಲ ಕಳೆಯಬೇಕಿದೆ.
ಈ ನಡುವೆ ಆರ್ಯನ್ ಪರ ವಕೀಲರು ಜಾಮೀನಿಗಾಗಿ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ಮಾಡಬೇಕು ಎಂಬ ವಕೀಲರ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದ್ದು, ಅರ್ಜಿಯ ವಿಚಾರಣೆ ಅಕ್ಟೋಬರ್ 26 ಕ್ಕೆ ಮಾಡಲಾಗುತ್ತದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿಯ ತನಿಖೆಯ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಆರ್ಯನ್ ಅನ್ನು ವಶಕ್ಕೆ ಪಡೆದ ಎನ್ಸಿಬಿಯ ದಾಳಿಯಲ್ಲಿ ಬಿಜೆಪಿ ಮುಖಂಡ ಮನೀಶ್ ಭಾನುಶಾಲಿ ಹಾಗೂ ಹಲವು ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಿರಣ್ ಗೋಸಾಯಿ ಎಂಬಾತ ಭಾಗಿಯಾಗಿರುವುದು ಖಾತ್ರಿಯಾಗಿದ್ದು, ಖಾಸಗಿ ವ್ಯಕ್ತಿಗಳೇಕೆ ಎನ್ಸಿಬಿ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂಬ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ.
ಇನ್ನು ದಾಳಿಯ ನೇತೃತ್ವ ವಹಿಸಿದ್ದ ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಕುಟುಂಬದ ಗೆಳೆಯ ಫ್ಲೆಟ್ಚರ್ ಪಟೇಲ್ ಒಬ್ಬರು ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ. ಈ ಹಿಂದಿನ ಕೆಲವು ಎನ್ಸಿಬಿ ದಾಳಿಯಲ್ಲಿಯೂ ಇದೇ ಫ್ಲೆಟ್ಚರ್ ಪಟೇಲ್ ಸಾಕ್ಷಿಯಾಗಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ.


Click it and Unblock the Notifications











