ಡ್ರಗ್ಸ್ ಪ್ರಕರಣ: ಬಾಂಬೆ ಹೈಕೋರ್ಟ್ಗೆ ಆರ್ಯನ್ ಖಾನ್ ಮನವಿ
ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನಿನ ಮೇಲೆ ಹೊರಗಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು, ಆ ಷರತ್ತುಗಳಲ್ಲಿ ಪ್ರತಿ ಶುಕ್ರವಾರ ಮುಂಬೈನ ಎನ್ಸಿಬಿ ಕಚೇರಿಗೆ ಆಗಮಿಸಿ ಹಾಜರಿ ಹಾಕಬೇಕು ಎಂಬ ಷರತ್ತು ಸಹ ಇತ್ತು.
ಅಂತೆಯೇ ಆರ್ಯನ್ ಖಾನ್ ತಮಗೆ ಜಾಮೀನು ದೊರೆತ ಅಕ್ಟೋಬರ್ 28 ರಿಂದ ಈ ವರೆಗೆ ಪ್ರತಿ ವಾರದ ಶುಕ್ರವಾರದಂದು ಎನ್ಸಿಬಿ ಕಚೇರಿಗೆ ತೆರಳಿ ಹಾಜರಿ ಹಾಕುತ್ತಿದ್ದಾರೆ. ಆದರೆ ಈ ಷರತ್ತಿನಿಂದ ಬಿಡುಗಡೆ ನೀಡುವಂತೆ ಇದೀಗ ಆರ್ಯನ್, ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.

ಆರ್ಯನ್ ಖಾನ್ ಹಾಗೂ ಇತರರು ಆರೋಪಿಗಳಾಗಿರುವ ಡ್ರಗ್ಸ್ ಪ್ರಕರಣದ ತನಿಖೆ ಈಗ ದೆಹಲಿಯ ವಿಶೇಷ ತಂಡಕ್ಕೆ ಹಸ್ತಾಂತರವಾಗಿರುವ ಕಾರಣ ಜಾಮೀನು ಅರ್ಜಿಗೆ ವಿಧಿಸಲಾಗಿರುವ ಷರತ್ತುಗಳನ್ನು ಬದಲಾಯಿಸಬೇಕು ಎಂದು ಆರ್ಯನ್ ಖಾನ್ ಹಾಗೂ ಅವರ ವಕೀಲರ ತಂಡ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದೆ. ಅದರಲ್ಲಿಯೂ ಪ್ರತಿ ವಾರ ಕಚೇರಿಗೆ ಹೋಗಿ ಹಾಜರಿ ಹಾಕುವ ಷರತ್ತಿನಿಂದ ಬಿಡುಗಡೆ ಕೋರಲಾಗಿದೆ.
ಪ್ರತಿ ವಾರ ಆರ್ಯನ್ ಖಾನ್ ಎನ್ಸಿಬಿ ಕಚೇರಿಗೆ ಹೋಗುವಾಗ ಅತಿಯಾದ ಮಾಧ್ಯಮಗಳ ಹಾಜರಿ, ಬಿಗಿ ಪೊಲೀಸ್ ಭದ್ರತೆಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆರೋಪಿಗೂ ಇದು ಸಮಸ್ಯೆ ತರುತ್ತಿದೆ. ಹಾಗಾಗಿ ವಾರದ ಹಾಜರಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಅಕ್ಟೋಬರ್ 02ರಂದು ರಾತ್ರಿ ಮುಂಬೈನ ಕ್ರೂಡೆಲಿಯಾ ಕ್ರೂಸ್ನಲ್ಲಿ ಪಾರ್ಟಿಗೆ ಹಾಜರಾಗಲಿದ್ದ ಆರ್ಯನ್ ಖಾನ್ ಅನ್ನು ಎನ್ಸಿಬಿ ತಂಡವು ವಶಕ್ಕೆ ಪಡೆದಿತ್ತು. ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಮರ್ಚೆಂಟ್ ಹಾಗೂ ಮಾಡೆಲ್ ಮುನ್ಮುನ್ ಧಮೇಚಾ ಅವರುಗಳನ್ನು ಬಂಧಿಸಲಾಗಿತ್ತು.
ಬಳಿಕ ಈ ಪ್ರಕರಣ ತೀವ್ರ ತಿರುವು ಪಡೆದುಕೊಂಡಿತು. ಆರ್ಯನ್ ಖಾನ್ ಬಂಧನದ ವೇಳೆ ಹಾಜರಿದ್ದ, ಎನ್ಸಿಬಿ ಪರ ಸ್ವತಂತ್ರ್ಯ ಸಾಕ್ಷ್ಯವಾಗಿದ್ದ ಕೆಪಿ ಗೋಸಾವಿ ಎಂಬಾತ ಹಾಗೂ ಸ್ಯಾಮ್ ಡಿ ಸೋಜಾ ಎಂಬಾತ ಆರ್ಯನ್ ಖಾನ್ ಮೇಲೆ ಎನ್ಸಿಬಿ ಪ್ರಕರಣ ದಾಖಲಿಸದೇ ಇರಬೇಕೆಂದರೆ 15 ಕೋಟಿ ಹಣ ನೀಡಬೇಕೆಂದು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿಗೆ ಬೇಡಿಕೆ ಇಟ್ಟಿದ್ದರು ಎಂಬುದಾಗಿ ಪ್ರಕರಣದ ಮತ್ತೊಬ್ಬ ಸಾಕ್ಷಿ ಪ್ರಭಾಕರ್ ಸಾಯಿಲ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಇದೀಗ ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಸಮೀರ್ ವಾಂಖೆಡೆ ವಿರುದ್ಧವೇ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಎನ್ಸಿಬಿ ವಿರುದ್ಧವೇ ಆರೋಪಗಳು ಬಂದ ಬಳಿಕ ಎನ್ಸಿಬಿ ಕೇಂದ್ರ ಕಚೇರಿಯು ಹೊಸ ವಿಶೇಷ ತಂಡವೊಂದನ್ನು ರಚನೆ ಮಾಡಿ ತನಿಖೆ ನಡೆಸಿದೆ. ಆರ್ಯನ್ ಖಾನ್ ಪ್ರಕರಣದಿಂದ ಸಮೀರ್ ವಾಂಖೆಡೆಯನ್ನು ತೆಗೆದು ಹಾಕಲಾಗಿದ್ದು, ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಾಗಿದೆ. ಇದರ ಜೊತೆಗೆ ಎನ್ಸಿಬಿಯು ಭ್ರಷ್ಟಾಚಾರ ನಡೆಸಿದೆ ಎಂತಲೂ, ಕರ್ತವ್ಯಲೋಪ ಹಾಗೂ ವಸೂಲಿಬಾಜಿ ನಡೆಸಿದೆಯೆಂತಲೂ ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲ್ಲಿಕ್ ಸತತ ವಾಗ್ದಾಳಿ ಮಾಡಿದ್ದಾರೆ. ಮಹಾರಾಷ್ಟ್ರದ ಇತರ ಕೆಲವು ಪ್ರಮುಖ ರಾಜಕಾರಣಿಗಳು ಸಹ ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ಇನ್ನೂ ನಡೆಯುತ್ತಿದೆ.


Click it and Unblock the Notifications











