ಅಕ್ಷಯ್ ಕುಮಾರ್ ಅನ್ನು ದೇಶದಿಂದ ಹೊರಗಟ್ಟುವಂತೆ ಮಾಡುವೆ: ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ
ನಟ ಅಕ್ಷಯ್ ಕುಮಾರ್ ಅನ್ನು ಬಿಜೆಪಿಯ 'ಸಾಕುನಾಯಿ' ಎಂದು ಅವರ ವಿರೋಧಿಗಳು ಕರೆಯುವುದುಂಟು. ಅಸಲಿಗೆ ಬಿಜೆಪಿ ಪಕ್ಷದ ಜೊತೆಗೆ ಉತ್ತಮ ಬಾಂಧವ್ಯವನ್ನೇ ಅಕ್ಷಯ್ ಕುಮಾರ್ ಹೊಂದಿದ್ದಾರೆ. ಆದರೆ ಇದೀಗ ಬಿಜೆಪಿ ಪಕ್ಷ ಹಿಡಿಯ ನಾಯಕರೊಬ್ಬರು ಅಕ್ಷಯ್ ಅನ್ನು ದೇಶಬಿಟ್ಟು ಹೊರ ಹೋಗುವುಂತೆ ಮಾಡುವುದಾಗಿ ಹೇಳಿದ್ದಾರೆ.
ಬಿಜೆಪಿ ಪಕ್ಷದ ಹಿರಿಯ ನಾಯಕ, ಇತ್ತೀಚೆಗಷ್ಟೆ ರಾಜ್ಯಸಭೆಯಿಂದ ನಿವೃತ್ತರಾದ ಮಾಜಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ನಟ ಅಕ್ಷಯ್ ಕುಮಾರ್ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.
'ರಾಮ್ ಸೇತು' ಸಿನಿಮಾದ ವಿವಾದ ಕುರಿತಂತೆ ಸುಬ್ರಹ್ಮಣಿಯನ್ ಸ್ವಾಮಿ ಗರಂ ಆಗಿದ್ದು, ತಪ್ಪು ಮಾಹಿತಿಯನ್ನು ಸಿನಿಮಾದ ಮೂಲಕ ಚಿತ್ರತಂಡ ಹೇಳಲು ಹೊರಟಿದೆ ಎಂದಿದ್ದು, ನಟ ಅಕ್ಷಯ್ ಕುಮಾರ್ ವಿರುದ್ಧ ಕೇಸು ದಾಖಲಿಸುವುದಾಗಿ ಹೇಳಿರುವ ಸುಬ್ರಹ್ಮಣಿಯನ್ ಸ್ವಾಮಿ, ದೇಶಬಿಟ್ಟು ಹೊರಗಟ್ಟುವಂತೆ ಮಾಡುವೆ ಎಂದಿದ್ದಾರೆ.
ಆಗಿರುವುದಿಷ್ಟು, ''ಸೇತು' ಹೆಸರಿನ ಸಿನಿಮಾ ಒಂದು ಕಾರ್ಮಾ ಮೀಡಿಯಾದ ಮೂಲಕ ಸೆಟ್ಟೇರಿಟ್ಟು, ಸಿನಿಮಾದ ಪೋಸ್ಟರ್ ಆಗಿ ರಾಮ ಸೇತು ಬಗೆಗಿನ ಸುಪ್ರೀಂಕೋರ್ಟ್ನ 2007ರ ಆದೇಶದ ಪ್ರತಿಯನ್ನು ಬಳಸಿಕೊಳ್ಳಲಾಗಿದೆ. ಅಸಲಿಗೆ ಆ ಆದೇಶವು ಸುಬ್ರಹ್ಮಣಿಯನ್ ಸ್ವಾಮಿ ಅವರು ಹೂಡಿದ್ದ ಪ್ರಕರಣಕ್ಕೆ ನೀಡಲಾಗಿದ್ದಾಗಿದೆ. ಆದರೆ ಅದನ್ನು ಬಳಸಿಕೊಂಡಿದ್ದು ಅಕ್ಷಮ್ಯ ಎಂದು, ಸುಬ್ರಹ್ಮಣಿಯನ್ ಸ್ವಾಮಿ ಅವರ ಜೂನಿಯರ್ ಸತ್ಯ ಸಬರ್ವಾಲ್ ಟ್ವೀಟ್ ಮಾಡಿದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿರುವುದಾಗಿಯೂ ಹೇಳಿದ್ದಾರೆ.

ಅಕ್ಷಯ್ ಕುಮಾರ್, ಕಾಮ್ರಾ ಮೀಡಿಯಾ ವಿರುದ್ಧ ಪ್ರಕರಣ
ಸಬರ್ವಾಲ್ ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಆ ನಂತರ ತಾವು ಸ್ವತಃ ಟ್ವೀಟ್ ಮಾಡಿ, ''ಪರಿಹಾರ ನೀಡುವಂತೆ ಮೊಕದ್ದಮೆಯನ್ನು ದಾಖಲಿಸಲು ಎಲ್ಲ ದಾಖಲೆಗಳನ್ನು ನನ್ನ ಸಹ ವಕೀಲ ಅಂತಿಮಗೊಳಿಸಿಕೊಂಡಿದ್ದಾರೆ. ನಾನು ನಟ ಅಕ್ಷಯ್ ಕುಮಾರ್ ಹಾಗೂ ಕಾಮ್ರಾ ಮೀಡಿಯಾ ಮೇಲೆ ಪ್ರಕರಣ ದಾಖಲಿಸಿದ್ದೇನೆ. ಬಿಡುಗಡೆಗೆ ತಯಾರಾಗಿರುವ ಅವರ ಸಿನಿಮಾದಲ್ಲಿ ರಾಮ ಸೇತು ವಿಷಯವಾಗಿ ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಅವರು ನೀಡುತ್ತಿದ್ದಾರೆ'' ಎಂದಿದ್ದಾರೆ.

ಅಕ್ಷಯ್ ಅನ್ನು ಬಂಧಿಸಿ ಹೊರಗಟ್ಟುವಂತೆ ಕೇಳುತ್ತೇವೆ: ಸ್ವಾಮಿ
''ಒಂದೊಮ್ಮೆ ಅಕ್ಷಯ್ ಕುಮಾರ್ ವಿದೇಶಿ ಪ್ರಜೆಯಾಗಿದ್ದರೆ, ಅವರನ್ನು ಬಂಧಿಸಿ, ದತ್ತು ಪಡೆದ ದೇಶದಿಂದ (ಭಾರತ) ಹೊರಹಾಕುವಂತೆ ನಾವು ಕೇಳಬಹುದು'' ಎಂದು ಮತ್ತೊಂದು ಟ್ವೀಟ್ನಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. ನಟ ಅಕ್ಷಯ್ ಕುಮಾರ್ ಭಾರತೀಯ ಪ್ರಜೆಯಲ್ಲ ಅವರು ಕೆನಡಾ ದೇಶದ ಪ್ರಜೆ. ಅವರ ಬಳಿ ಕೆನಡಾ ದೇಶದ ನಾಗರೀಕತ್ವ ಇದೆ. ನಿವೃತ್ತರಾದ ಬಳಿಕ ಅಕ್ಷಯ್ ಕುಮಾರ್ ಕೆನಡಾದಲ್ಲಿಯೇ ನೆಲೆಸಲಿದ್ದಾರೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು.

'ರಾಮ್ ಸೇತು' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ ಅಕ್ಷಯ್
ಅಕ್ಷಯ್ ಕುಮಾರ್ 'ರಾಮ್ ಸೇತು' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಸಹ ನಿರ್ಮಾಪಕರು ಸಹ ಅಕ್ಷಯ್ ಕುಮಾರ್ ಅವರೇ ಆಗಿದ್ದಾರೆ. ಸಿನಿಮಾದಲ್ಲಿ ಅವರು ಪುರಾತತ್ವ ತಜ್ಞನ ಪಾತ್ರದಲ್ಲಿ ನಟಿಸಿದ್ದು, ರಾಮ್ ಸೇತು ಸತ್ಯವೋ ಮಿಥ್ಯವೋ ತಿಳಿಯುವ ಕಾರ್ಯವನ್ನು ಮಾಡುತ್ತಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್ ಬರೂಚಾ, ಸತ್ಯದೇವ್ ಕಂಚಾರನ್ ಸಹ ನಟಿಸಿದ್ದಾರೆ. ಸಿನಿಮಾವನ್ನು ಅಭಿಷೇಕ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ.

ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ನಲ್ಲಿ ಗೊಂದಲ
ಇನ್ನು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್ನಲ್ಲಿ ತುಸು ಗೊಂದಲಗಳೂ ಇವೆ. 2007 ರ ರಾಮ ಸೇತು ಕುರಿತಂತೆ ಸುಪ್ರೀಂಕೋರ್ಟ್ ಆದೇಶವನ್ನು ಪೋಸ್ಟರ್ ಆಗಿ ಬಳಸಿಕೊಂಡ 'ಸೇತು' ವಿರುದ್ಧ ಸುಬ್ರಹ್ಮಣಿಯನ್ ಸ್ವಾಮಿ ಕೇಸು ದಾಖಲಿಸಲು ಮುಂದಾಗಿದ್ದಾರೆ. ಅದೇ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ ಎಂದುಕೊಂಡು ಅವರ ವಿರುದ್ಧವೂ ಕೇಸು ದಾಖಲಿಸಲು ಮುಂದಾದರೊ? ಅಥವಾ ಸೇತು ಹಾಗೂ ರಾಮ್ ಸೇತು ಎರಡೂ ಸಿನಿಮಾಗಳ ವಿರುದ್ಧ ಕೇಸು ದಾಖಲಿಸಲು ಮುಂದಾಗಿದ್ದಾರೊ ಗೊಂದಲ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ದೊರಕಲಿದೆ.


Click it and Unblock the Notifications











