'ನಾನು ಉಸಿರಾಡಬೇಕು' ಎಂದು ಇನ್ಸ್ಟಾಗ್ರಾಮ್ ಗೆ ಗುಡ್ ಬೈ ಹೇಳಿದ ನಟ ಸೂರಜ್ ಪಾಂಚೋಲಿ
ಬಾಲಿವುಡ್ ನಟ ಸುಶಾಂತ್ ಮತ್ತು ಮಾಜಿ ಮ್ಯಾನೇಜರ್ ದಿಶಾ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರು ತರುತ್ತಿರುವುದಕ್ಕೆ ನಟ ಸೂರಜ್ ಪಾಂಚೋಲಿ ಅಸಮಾಧಾನ ಗೊಂಡಿದ್ದಾರೆ. ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸೂರಜ್ ಹೇಳುತ್ತಲೆ ಬಂದಿದ್ದಾರೆ. ಆದರೂ ಇಬ್ಬರ ಸಾವಿನ ಪ್ರಕರಣದಲ್ಲಿ ಸೂರಜ್ ಹೆಸರು ಕೇಳಿಬರುತ್ತಿದೆ.
Recommended Video
ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸೂರಜ್ ಅನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಬೇಸತ್ತಿರುವ ಸೂರಜ್ ಈಗ ಇನ್ಸ್ಟಾಗ್ರಾಮ್ ನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳನ್ನು ಸೂರಜ್ ಡಿಲೀಟ್ ಮಾಡಿದ್ದಾರೆ. ಕೊನೆಯದಾಗಿ ಹುಟ್ಟುಹಬ್ಬ ಆಚರಣೆ ಮಾಡಿದ ಪೋಸ್ಟ್ ಹಾಗೆ ಬಿಟ್ಟಿದ್ದಾರೆ.
ಎಲ್ಲಾ ಪೋಸ್ಟ್ ಡಿಲೀಟ್ ಮಾಡಿ "ಈ ಪ್ರಪಂಚವೂ ಉತ್ತಮವಾಗಿ ಕಂಡಾಗ ನಿಮ್ಮನ್ನು ಮತ್ತೆ ನೋಡುತ್ತೇನೆ. ಉಸಿರುಗಟ್ಟುತ್ತಿದೆ. ನಾನು ಉಸಿರಾಡಬೇಕು." ಎಂದು ಕೊನೆಯದಾಗಿ ಸ್ಟೇಟಸ್ ಹಾಕಿ ಇನ್ಸ್ಟಾಗ್ರಾಮ್ ನಿಂದ ಹೊರನಡೆದಿದ್ದಾರೆ.

ಪದೇ ಪದೇ ತಮ್ಮ ಹೆಸರನ್ನು ಎಳೆದು ತರುತ್ತಿದ್ದ ಕಾರಣ ಇತ್ತೀಚಿಗಷ್ಟೆ ಸೂರಜ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಸುಶಾಂತ್ ಮತ್ತು ದಿಶಾ ಸಾವಿನ ಬಳಿಕ ಸೂರಜ್ ಗೆ ಕಿರುಕುಳ ನೀಡಲಾಗುತ್ತಿದೆ. ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ನಖಲಿ ಸುದ್ದಿಗಳನ್ನು ಬಿತ್ತರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಸುಖಾಸುಮ್ಮನೆ ತನ್ನ ಹೆಸರನ್ನು ಎಳೆದು ತಂದು ಕಿರುಕುಳ ನೀಡುತ್ತಿರುವ ಜನರ ವಿರುದ್ಧ ಸೂರಜ್ ಆಗಸ್ಟ್ 10 ರಂದು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚಿಗೆ ಸೂರಜ್ "ದಯವಿಟ್ಟು ಜನರ ಬ್ರೈನ್ ವಾಶ್ ಮಾಡುವ ಕೆಲಸವನ್ನು ನಿಲ್ಲಿಸಿ. ಮತ್ತು ನನಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಿ. ನನ್ನ ಜೀವನದಲ್ಲಿ ನಾನು ದಿಶಾ ಸಾಲಿಯಾನ್ ಅವರನ್ನು ಭೇಟಿ ಮಾಡಿಲ್ಲ ಮತ್ತು ಮಾತನಾಡಿಸಿಯೂ ಇಲ್ಲ" ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದರು. ಆದರೀಗ ಇನ್ಸ್ಟಾಗ್ರಾಮ್ ಗೆ ಗುಡ್ ಬೈ ಹೇಳಿದ್ದಾರೆ.


Click it and Unblock the Notifications











