'ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ'
ಸಿನಿಮಾ ನಟರು ಅಥವಾ ಯಾವುದೇ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲ. ಆದರೆ ನಟರು ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸದೇ ಕೇವಲ ಜಾಹೀರಾತುಗಳ ಮೇಲಷ್ಟೇ ಗಮನ ಹರಿಸುತ್ತಿದ್ದಾರೆ. ಸದ್ಯ ಭಾರತೀಯ ಚಿತ್ರರಂಗದ ಬೆಳವಣಿಗೆ ಇದಾಗಿದ್ದು, ಈ ಬಗ್ಗೆ ಸಿನಿ ಪ್ರಿಯರು ಕೂಡ ಬೇಸರಗೊಂಡಿದ್ದಾರೆ.
ಕೆಲವು ವಸ್ತುಗಳಿಗೆ ಕೆಲ ನಟರು ಬ್ರಾಂಡ್ ಅಂಬಾಸಿಡರ್ಗಳಾಗಿದ್ದಾರೆ. ಆ ವಸ್ತುವಿನ ಪ್ರಚಾರದಲ್ಲೇ ಸದಾ ಅವರು ಬ್ಯುಸಿಯಾಗಿರುತ್ತಾರೆ. ಇತ್ತ ತಮ್ಮ ಚಿತ್ರಗಳು ಸಾಲು ಸಾಲು ಸೋಲು ಕಂಡರೂ ಕ್ಯಾರೇ ಎನ್ನದ ನಟರು ಜಾಹೀರಾತು ಚಿತ್ರೀಕರಣದಲ್ಲಿ ಬ್ಯೂಸಿಯಾಗುತ್ತಾರೆ. ಈ ಬಗ್ಗೆ ನಿರ್ಮಾಪಕರು ನಿರ್ದೇಶಕರು ಅಷ್ಟೇ ಅಲ್ಲ. ಸ್ಟಾರ್ ನಟರ ಅಭಿಮಾನಿಗಳು ಕೂಡ ಅಸಮಾಧಾನಗೊಂಡಿದ್ದಾರೆ.
ಬಾಲಿವುಡ್ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ಶಾರುಖ್ ಖಾನ್ ಇತ್ತೀಚಿಗೆ ಪಾನ್ ಮಸಾಲ ಜಾಹೀರಾತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ್ರೂ ಕೂಡ ನಟರು ಕ್ಯಾರೇ ಎನ್ನುತ್ತಿಲ್ಲ. ಆದರೆ ಈ ನಟರ ಚಿತ್ರಗಳು ಸೋಲು ಕಂಡು ನಿರ್ಮಾಪಕರಿಗೆ ಬರೆ ಹಾಕುತ್ತಿವೆ. ಈ ಬಗ್ಗೆ 'ರಾಜ್ನೀತಿ' ಸೇರಿದಂತೆ ಅನೇಕ ವೆಬ್ ಸೀರಿಸ್ಗಳನ್ನು ಮಾಡಿರುವ ಪ್ರಕಾಶ್ ಝಾ ಬಾಲಿವುಡ್ ನಿರ್ದೇಶಕರ ಪರವಾಗಿ ಮೊದಲ ಬಾರಿಗೆ ನಟರ ವಿರುದ್ಧ ತುಟಿ ಬಿಚ್ಚಿದ್ದಾರೆ.

ನಿರ್ದೇಶಕರ ಪರ ತುಟಿ ಬಿಚ್ಚಿದ ಪ್ರಕಾಶ್ ಝಾ
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಕಾಶ್ ಝಾ, ಪಾನ್ ಮಸಾಲಾ ಬ್ರಾಂಡ್ಗಳಿಗೆ ಜಾಹೀರಾತು ನೀಡುತ್ತಿರುವ ನಟರನ್ನು ಟೀಕಿಸಿದ್ದಾರೆ. "ಕೆಲವು ಕಂಪನಿಗಳು ನಟರನ್ನು ಕೊಳ್ಳಲು ಸಿದ್ಧವಾಗಿದೆ. ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡಲು ನಿರತರಾಗಿರುವ ಕೆಲವು ಸ್ಟಾರ್ ನಟರಿಗೆ ನಮ್ಮಂತಹ ನಿರ್ದೇಶಕರ ಜೊತೆ ಕೆಲಸ ಮಾಡಲು ಸಮಯವಿಲ್ಲ. ಜಾಹೀರಾತಿನಲ್ಲಿ ನಟಿಸಿ ಈಗಾಗಲೇ ಅವರ ಖಾತೆಯಲ್ಲಿ 50 ಕೋಟಿ ರೂ. ಇದೆ. ಹೀಗಿರುವಾಗ ಅವರು ಸಿನಿಮಾಗಳ ಬಗ್ಗೆ ಯಾಕೆ ಯೋಚಿಸುತ್ತಾರೆ" ಎಂದು ಟೀಕಿಸಿದರು.

ಬಾಲಿವುಡ್ ನಟರ ವಿರುದ್ಧ ಸಿಡಿಮಿಡಿಗೊಂಡ ನಿರ್ದೇಶಕ
"ಇನ್ನು ಈ ಸ್ಟಾರ್ ನಟರು ಪ್ರಚಾರ ಮಾಡುವ ಪಾನ್ ಮಸಾಲ ಜಾಹೀರಾತು ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಟರು ಪ್ರಚಾರ ಮಾಡುವುದರಿಂದ ಮಕ್ಕಳು ಕೂಡ ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಿದ್ದಾರೆ ಎಂದು ಪ್ರಾಂಶುಪಾಲರೊಬ್ಬರು ಹೇಳಿದ್ದರು" ಎಂದು ಪ್ರಕಾಶ್ ಝಾ ನೆನಪಿಸಿಕೊಂಡರು. ತಮ್ಮ ಅಭಿಮಾನಿಗಳು ತಮ್ಮ ಸೈಲ್ ಮಾತ್ರವಲ್ಲದೇ ತಮ್ಮ ನಡೆಯನ್ನು ತಾವು ಹೇಳುವ ವಿಚಾರವನ್ನು ಅನುಸರಿಸುತ್ತಾರೆ ಎನ್ನುವ ಪ್ರಜ್ಞೆ ಇಲ್ಲದೆ ನಟಿಸುವ ನಟರ ಬಗ್ಗೆ ಪ್ರಕಾಶ್ ಝಾ ಬೇಸರ ವ್ಯಕ್ತಪಡಿಸಿದರು.

ಬಾಲಿವುಡ್ ನಟರಿಗೆ ಸಿನಿಮಾ ಬಗ್ಗೆ ಚಿಂತೆ ಇಲ್ಲ
ಇತ್ತೀಚೆಗೆ ಸ್ಯಾಂಡಲ್ವುಡ್ ಸೇರಿದಂತೆ ಅನೇಕ ಚಿತ್ರರಂಗವನ್ನು ಹಿಂದಿಕ್ಕುತ್ತಿರುವ ಹಾಗೂ ಬಾಲಿವುಡ್ ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿದ ಅವರು, "ಬಾಲಿವುಡ್ ನಟರು ತಮ್ಮ ಸಂಭಾವನೆ 400 ಕೋಟಿ ಎಂದು ತಿಳಿದು ಬಳಿಕ ಅವರು ಚಿತ್ರದ ಬಗ್ಗೆಯಾಗಲಿ, ಚಿತ್ರದ ಕಥಾ ವಸ್ತು ಬಗ್ಗೆಯಾಗಲಿ ಚಿಂತೆ ಮಾಡುವುದಿಲ್ಲ. ಅದು ಆತನ ತಪ್ಪಲ್ಲ. ಈ ಬಗ್ಗೆ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಮತ್ತು ಚಿತ್ರತಂಡ ಯೋಚಿಸಬೇಕು. ನಟರ ಸಂಭಾವನೆ ಹಾಗೂ ಆತನ ಕೆಲಸದ ಬಗ್ಗೆ ನಿರ್ಮಾಪಕರು ಗಂಭೀರವಾಗಿ ಯೋಚಿಸಬೇಕು" ಎಂದರು.

ಒಳ್ಳೆ ಸಿನಿಮಾಗೆ ಬಾಯ್ಕಾಟ್ ಭಯವಿಲ್ಲ
ಇನ್ನು ಕೆಲದಿನಗಳಿಂದ ಬಾಲಿವುಡ್ನಲ್ಲಿ ಬಾಯ್ಕಾಟ್ ಎನ್ನುವ ಶಬ್ದ ಭಾರೀ ಜನಪ್ರಿಯವಾಗಿದೆ. ಚಿತ್ರದ ನಾಯಕ ಅಥವಾ ಚಿತ್ರದ ಕಥಾವಸ್ತುವಿನಿಂದ ಪ್ರೇಕ್ಷಕರು ಇತ್ತೀಚಿಗೆ ಚಿತ್ರವನ್ನೇ ಬಹಿಷ್ಕರಿಸುವ ಅಭಿಯಾನ ನಡೆಸುತ್ತಿದ್ದಾರೆ. ಇತ್ತೀಚಿಗೆ ತೆರೆ ಕಂಡ ಬ್ರಹ್ಮಾಸ್ತ್ರ ಚಿತ್ರತಂಡಕ್ಕೂ ಬಾಯ್ಕಾಟ್ ಬಿಸಿ ತಟ್ಟಿತ್ತು. ಈ ಬಗ್ಗೆ ಪ್ರಕಾಶ್ ಶಾ ಮಾತನಾಡಿದ್ದು, ಒಂದು ಒಳ್ಳೆಯ ಕಥೆ ಇಟ್ಟುಕೊಂಡು ಕೆಲಸ ಮಾಡಲು ಹೊರಟಿರುವ ವ್ಯಕ್ತಿ ಈ ಬಗ್ಗೆ ಯೋಚಿಸುವ ಅವಶ್ಯಕತೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡುವುದೇ ದೊಡ್ಡ ಸವಾಲು ಎಂದು ಬಾಲಿವುಡ್ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











