ರವಿ ಪೂಜಾರಿಗೆ ಬಾಲಿವುಡ್ಡೇ ಟಾರ್ಗೆಟ್ ಯಾಕೆ?
ಮುಂಬಯಿ, ಸೆ.4: ಬಾಲಿವುಡ್ಗೂ ಭೂಗತ ಜಗತ್ತಿಗೂ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಹಣದ ವಿಷಯಕ್ಕೆ ಬಂದರೆ ಕೆಲವೊಮ್ಮ ಭೂಗತ ಜಗತ್ತಿನ ಡಾನ್ಗಳ ದುಡ್ಡೇ ಸಿನಿಮಾವಾಗಿ ನಿರ್ಮಾಣವಾದ ಉದಾಹರಣೆ ಸಾಕಷ್ಟಿದೆ.
ಅದರಂತೆ ಬಾಲಿವುಡ್ ತಾರೆಯರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆ ಬರುತ್ತಿರುವುದು ಹೊಸ ಸಂಗತಿಯೇನಲ್ಲ. ಅದರ ಸಾಲಿಗೆ ರವಿ ಪೂಜಾರಿ ಎಂಬ ಡಾನ್ ಹೆಸರು ಸೇರ್ಪಡೆಯಾಗಿದೆ.
ಈಗ ಬಾಲಿವುಡ್ ನಟ ಸೋನು ಸೂದ್ಗೆ ಬೆದರಿಕೆ ಕರೆಗಳು ಬರಲು ಆರಂಭಿಸಿವೆ. ಬಹು ನಿರೀಕ್ಷಿತ ಚಿತ್ರ 'ಹ್ಯಾಪಿ ನ್ಯೂ ಇಯರ್' ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಅದನ್ನೇ ಗುರಿಯಾಗಿರಿಸಿಕೊಂಡು ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ.

ಬಾಲಿವುಡ್ಡೇ ಯಾಕೆ?
ರವಿ ಪೂಜಾರಿ ಉದ್ಯಮಿಗಳಿಗೆ ಬೆದರಿಕೆ ಹಾಕುವ ಬದಲು ಬಾಲಿವುಡ್ ತಾರೆಗಳಿಗೆ ಕರೆ ಮಾಡುತ್ತಿರುವುದರಲ್ಲಿ ಆಶ್ಚರ್ಯವೇನು ಇಲ್ಲ. ನಟ, ನಟಿಯರು ಪಡೆಯುವ ಕೋಟಿಲೆಕ್ಕದ ಸಂಭಾವನೆ, ಒಂದೊಂದು ಚಿತ್ರ ನಿರ್ಮಾಣಕ್ಕೆ ವೆಚ್ಚ ಮಾಡುವ ನೂರಾರು ಕೋಟಿ ರೂಪಾಯಿ. ಅದು ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆ ಹೊಡೆಯುವ ಹಣ. ನೂರು ಕೋಟಿ ಕ್ಲಬ್, ಇನ್ನೂರು ಕೋಟಿ ಕ್ಲಬ್ ಸೇರಿದ ಸಿನಿಮಾ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುವ ವರದಿ ಎಲ್ಲವೂ ರವಿ ಪೂಜಾರಿಯಂಥ ಪಾತಕಿಗಳ ಕಣ್ಣು ಹಿಂದಿ ಚಿತ್ರರಂಗದ ಮೇಲೆ ಬೀಳಲು ಕಾರಣವಾಗಿದೆ.

ಹ್ಯಾಪಿ ನ್ಯೂ ಇಯರ್ ಬಿಡುಗಡೆ ಬಿಸಿ
ರವಿ ಪೂಜಾರಿ ಮೊದಲಿಗೆ 'ಹ್ಯಾಪಿ ನ್ಯೂ ಇಯರ್' ಚಿತ್ರದ ನಿರ್ಮಾಪಕ ಖರೀಂ ಮೊರಾನಿ, ನಂತರ ಕಿಂಗ್ ಖಾನ್ ಶಾರುಖ್ ಮತ್ತು ನಟ ಬೊಮಾನ್ ಇರಾನಿಗೆ ಬೆದರಿಕೆ ಕರೆ ಮಾಡಿದ್ದ.
ಶಾರುಖ್ ಖಾನ್ಗೆ ಬೆದರಿಕೆ ಹಾಕಿದ್ದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ನಂತರ ಚಿತ್ರತಾರೆಗಳಿಗೆ ಭದ್ರತೆ ಒದಗಿಸಲಾಗಿತ್ತು.

ಅಂಡರ್ವರ್ಡ್ ಮನಿ
ಆದರೆ ಕೆಲವೊಮ್ಮೆ ವೈಚಿತ್ರ ಎಂಬಂತೆ ಭೂಗತ ಜಗತ್ತಿನ ಹಣವೇ ಹಿಂದಿ ಸಿನಿಮಾ ನಿರ್ಮಾಣಕ್ಕೆ ಬಳಕೆಯಾದ ಉದಾಹರಣೆಗಳು ಇವೆ. ಹಾಗಾಗಿಯೇ ಹಿಂದಿ ನಟ ನಟಿಯರಿಗೂ ಭೂಗತ ಜಗತ್ತಿಗೂ ನಂಟು ಇರುವ ಬಗ್ಗೆ ಪುರಾವೆಗಳು ದೊರೆತಿವೆ. ಅನೇಕ ನಟಿಯರು ಇಂಥ ಗಾಸಿಪ್ನಲ್ಲೇ ಇತಿಹಾಸದ ಪುಟ ಸೇರಿದ್ದಾರೆ.

ಪ್ರೀತಿ ಜಿಂಟಾ ಪ್ರಕರಣ
ಸಿನಿಮಾ ತಾರೆಗಳಿಗೆ ರವಿ ಪೂಜಾರಿ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಕಳೆದ ಜೂನ್ ತಿಂಗಳಲ್ಲಿ ನಟಿ, ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿ ಪ್ರೀತಿ ಜಿಂಟಾ ತನ್ನ ಮಾಜಿ ಪ್ರಿಯಕರ ನೆಸ್ ವಾಡಿಯಾ ಮೇಲೆ ಅನೇಕ ಆರೋಪ ಮಾಡಿದ್ದಳು. ಈ ವೇಳೆ ವಾಡಿಯಾಗೆ ಕರೆ ಮಾಡಿದ್ದ ಪೂಜಾರಿ ಪ್ರೀತಿ ಜಿಂಟಾಳ ಹಣ ಹಿಂದಿರುಗಿಸಲು ಮತ್ತು ಆಕೆಯೊಂದಿಗೆ ಬೆರೆಯದಂತೆ ಹೇಳಿದ್ದ ಎಂದು ವರದಿಯಾಗಿತ್ತು.

ದಾವೂದ್ ಇಬ್ರಾಹಿಂ ಹೆಸರು ಬಳಕೆ
1990ರ ನಂತರದ ದಿನಗಳಲ್ಲಿ ದುಬೈಗೆ ತೆರಳಿದ ರವಿ ಪೂಜಾರಿ ಅಲ್ಲಿಯ ಬಿಲ್ಡರ್ಗಳು ಮತ್ತು ಹೋಟೆಲ್ ಮಾಲೀಕರಿಂದ ಹಣ ವಸೂಲಿ ಮಾಡಲು ಆರಂಭಿಸಿದ. ಅನೇಕರನ್ನು ಹೆದರಿಸಿ ಅಪಾರ ಪ್ರಮಾಣದಲ್ಲಿ ಹಣ ಗಳಿಸಿದ. ಇದಕ್ಕೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಹೆಸರು ಬಳಸಿಕೊಂಡ.

ಛೋಟಾ ರಾಜನ್ ಜತೆ ಫ್ರೆಂಡ್ಶಿಪ್
ಮುಂಬೈ ಮೂಲದ ಭೂಗತ ಪಾತಕಿ ರವಿ ಪೂಜಾರಿಗೆ ಅಂಡರ್ವರ್ಡ್ನಲ್ಲಿ ದೊಡ್ಡ ಹೆಸರಿದೆ. ಮೊಂದು ಕಾಲದಲ್ಲಿ ಮುಂಬೈ ಭೂಗತ ಸಾಮ್ರಾಜ್ಯ ಆಳುತ್ತಿದ್ದ ಬಾಲಾ ಜಟ್ಲೆ ಎಂಬಾತನನ್ನು ಕೊಂದು ಅಧಿಪತ್ಯ ಸಾಧಿಸಿದವ ರವಿ ಪೂಜಾರಿ. ನಂತರ ಕುಖ್ಯಾತ ಪಾತಕಿ ಛೋಟಾ ರಾಜನ್ ಜತೆ ಕೈಜೋಡಿಸಿದ.

ರವಿ ಪೂಜಾರಿ ಈಗೇಲ್ಲಿದ್ದಾನೆ?
ದಂತಿಗಳು ಹೇಳುವಂತೆ ರವಿ ಪೂಜಾರಿ ಸದ್ಯ ಆಸ್ಟ್ರೇಲಿಯಾದಲ್ಲಿ ಅಡಗಿಕೊಂಡಿದ್ದಾನೆ. ಆದರೆ ಅವನ ಸಹಚರರು ಮತ್ತು ಚಟುವಟಿಕೆ ಮುಂಬೈನಲ್ಲಿ ಸದಾ ಜಾಗೃತವಾಗಿದೆ.ಸಿನಿಮಾ ತಾರೆಗಳಿಗೆ, ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ ಹಣ ನೀಡಲು ಒತ್ತಾಯಿಸುವುದು ಆತನಿಗೆ ಸಾಮಾನ್ಯ ಕೆಲಸವಾಗಿದೆ. ಪೂಜಾರಿ ಮಾತು ಕೇಳದಿದ್ದರೆ ಅಮಥವರ ಮೇಲೆ ದಾಳಿ ಮಾಡುವ ಸಂಚು ರೂಪಿಸಲಾಗುತ್ತದೆ.


Click it and Unblock the Notifications











