ಮಾಧ್ಯಮಗಳ ವಿರುದ್ಧ ತಿರುಗಿಬಿದ್ದ ಬಾಲಿವುಡ್: ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ ನಿರ್ಮಾಪಕರು
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸುಶಾಂತ್ ಸಾವಿನ ಹಿನ್ನೆಲೆ ಬಿಟೌನ್ ಇಂಡಸ್ಟ್ರಿಯ ಟಾಪ್ ನಿರ್ಮಾಣ ಸಂಸ್ಥೆಗಳ ವಿರುದ್ಧ ಹಾಗೂ ಸ್ಟಾರ್ ನಟರ ವಿರುದ್ಧ ಕೆಲವು ಮಾಧ್ಯಮಗಳು ಆರೋಪ ಮಾಡಿದ್ದವು.
ಬಾಲಿವುಡ್ನಲ್ಲಿ ನೆಪೋಟಿಸಂ ಇದೆ. ಹೊಸಬರನ್ನು ತುಳಿಯಲಾಗುತ್ತಿದೆ. ಪ್ರಭಾವಿಗಳ ಮಕ್ಕಳಿಗೆ ಮಾತ್ರ ಅವಕಾಶಗಳು ಕೊಡಲಾಗುತ್ತಿದೆ ಎಂದೆಲ್ಲ ಆರೋಪ ಕೇಳಿ ಬಂದಿತ್ತು. ಇದೀಗ, ಮಾಧ್ಯಮಗಳ ವಿರುದ್ಧ ಬಾಲಿವುಡ್ ಖ್ಯಾತ ನಿರ್ಮಾಪಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಬಾಲಿವುಡ್ ವಿರುದ್ಧ "ಬೇಜವಾಬ್ದಾರಿ, ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು" ನೀಡದಂತೆ ಟೆಲಿವಿಷನ್ ಚಾನೆಲ್ಗಳನ್ನು ತಡೆಯಲು ಕೋರಿ ಬಾಲಿವುಡ್ನ 34 ಟಾಪ್ ನಿರ್ಮಾಪಕರು ಮತ್ತು ಚಲನಚಿತ್ರೋದ್ಯಮ ನಾಲ್ಕು ಪ್ರಮುಖ ಸಂಘಗಳು ಸೋಮವಾರ ದೆಹಲಿ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿವೆ.

ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಚಾನೆಲ್ನ ಪತ್ರಕರ್ತ ಪ್ರದೀಪ್ ಭಂಡಾರಿ ಮತ್ತು ಟೈಮ್ಸ್ ನೌನ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಮತ್ತು ಅದರ ಪ್ರಮುಖ ನಿರೂಪಕ ನವಿಕಾ ಕುಮಾರ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್, ಕರಣ್ ಜೋಹರ್, ಫರ್ಹಾನ್ ಅಖ್ತರ್ ಮತ್ತು ಅಜಯ್ ದೇವ್ಗನ್ ಮಾಲೀಕತ್ವದ ಸಂಸ್ಥೆಗಳು ಈ ದೂರು ದಾಖಲಿಸಿವೆ ಎನ್ನುವುದು ಗಮನಿಸಬೇಕಾದ ವಿಚಾರ.

ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ರಿಯಾ ಚಕ್ರವರ್ತಿಯ ಬಂಧನದ ಹಿನ್ನೆಲೆಯಲ್ಲಿ, ಬಾಲಿವುಡ್ ವ್ಯಕ್ತಿಗಳ ಮೇಲೆ ಹಾಗೂ ಅವರ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಮಾಧ್ಯಮಗಳು ಒಂದು ರೀತಿ ಹಲ್ಲೆ ಮಾಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
''ಡ್ರಗ್ಸ್ ಪ್ರಕರಣದಲ್ಲಿ ಇಡೀ ಬಾಲಿವುಡ್ ಅನ್ನು ಅಪರಾಧಿಗಳೆಂದು ಚಿತ್ರಿಸುವುದರ ಮೂಲಕ, ಮಾದಕವಸ್ತು ಸಂಸ್ಕೃತಿಯಲ್ಲಿ ಮತ್ತು ಅಪರಾಧ ಕೃತ್ಯಗಳಲ್ಲಿ ಬಾಲಿವುಡ್ನ ಎಲ್ಲರನ್ನು ತಪ್ಪಿತಸ್ಥರಂತೆ ಬಿಂಬಿಸಲಾಗಿದೆ'' ಎಂದು ಖಂಡಿಸಿದ್ದಾರೆ. ಬಾಲಿವುಡ್ನೊಂದಿಗೆ ಸಂಪರ್ಕ ಹೊಂದಿದ ಜನರನ್ನು ತಪ್ಪಿತಸ್ಥರೆಂದು ಬಿಂಬಿಸುತ್ತಿರುವ ಮಾಧ್ಯಮಗಳು "ನ್ಯಾಯಾಲಯಗಳಂತೆ" ವರ್ತಿಸುತ್ತಿದ್ದಾರೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.


Click it and Unblock the Notifications











