ಸುಶಾಂತ್ ಸಿನಿಮಾ ಬಗ್ಗೆ ಸ್ಪಷ್ಟನೆ ಕೇಳಿದ ದೆಹಲಿ ನ್ಯಾಯಾಲಯ
ತನ್ನ ಮಗನ ಜೀವನ ಆಧರಿತ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಸುಶಾಂತ್ ತಂದೆ ಕೆಕೆ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು (ಜೂನ್ 23) ನಡೆಯಿತು. ಸಿನಿಮಾ ರಿಲೀಸ್ ಆಗಿದ್ಯಾ ಅಥವಾ ಆಗಿಲ್ವಾ ಎಂದು ಮೊದಲು ಸ್ಪಷ್ಟನೆ ಕೊಡಿ ಎಂದು ಕೇಳಿರುವ ದೆಹಲಿ ಹೈ ಕೋರ್ಟ್, ಈ ಪ್ರಕರಣವನ್ನು ಜೂನ್ 25ಕ್ಕೆ ಮುಂದೂಡಿದೆ.
ಸುಶಾಂತ್ ಸಿನಿಮಾ ವಿಚಾರದಲ್ಲಿ ಏಕ ಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸುಶಾಂತ್ ತಂದೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಒಳಗೊಂಡ ಪೀಠ ಮತ್ತೆ ವಿಚಾರಣೆ ಮಾಡಿದೆ.
ಸುಶಾಂತ್ ಸಿಂಗ್ ತಂದೆ ಪರವಾಗಿ ಹಿರಿಯ ವಕೀಲರಾದ ಹರೀಶ್ ಸಾಲ್ವೆ ಮತ್ತು ಜಯಂತ್ ಕೆ ಮೆಹ್ತಾ ಮೇಲ್ಮನವಿ ಸಲ್ಲಿಸಿದ್ದರು. ಸಿನಿಮಾ ರಿಲೀಸ್ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ವಕೀಲರು ''ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ'' ಎಂದು ತಿಳಿಸಿದರು.

ಆದರೆ, ಜೂನ್ 11 ರಂದು ಓವರ್ ದಿ ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ನಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎಂದು ಪ್ರತಿವಾದಿಗಳ ಪರ ಹಾಜರಾದ ವಕೀಲ ಚಂದರ್ ಲಾಲ್ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.
ಈ ಹಿಂದೆ ಕೆಕೆ ಸಿಂಗ್ ತನ್ನ ಮಗನ ಹೆಸರಿನಲ್ಲಿ ಹಾಗೂ ಆತನಿಗೆ ಸಂಬಂಧಿತ ವಿಷಯವನ್ನು ಸಿನಿಮಾ ಮಾಡಲು ಅವಕಾಶ ಕೊಡಬಾರದು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ಏಕ ಸದಸ್ಯ ಪೀಠ ಈ ಅರ್ಜಿ ವಜಾ ಮಾಡಿತ್ತು. ಬಳಿಕ, ಸುಶಾಂತ್ ತಂದೆ ಮೇಲ್ಮನವಿ ಸಲ್ಲಿಸಿದ್ದಾರೆ.
'ನ್ಯಾಯ್: ದಿ ಜಸ್ಟೀಸ್' ಎಂಬ ಸಿನಿಮಾ ತಯಾರಾಗಿದ್ದು, ಇದು ಸುಶಾಂತ್ ಜೀವನದ ಕುರಿತಾದ ಸಿನಿಮಾ ಎಂದು ಕೆಕೆ ಸಿಂಗ್ ಆರೋಪಿಸಿದ್ದರು.


Click it and Unblock the Notifications











