'ದಿ ಕಾಶ್ಮೀರಿ ಫೈಲ್ಸ್' ನೋಡಿ ಎಲ್ ಕೆ ಅಡ್ವಾಣಿ ಕಣ್ಣೀರು ಹಾಕಿದ್ರಾ? ಇಲ್ಲಿದೆ ಅಸಲಿಯತ್ತು!
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗುತ್ತಿದೆ. ಮಾರ್ಚ್ 11ರಂದು ಯಾವುದೇ ಪ್ರಚಾರ ಇಲ್ಲದೇ, ಸೈಲೆಂಟ್ ಆಗಿ ತೆರೆಕಂಡ ಸಿನಿಮಾ ಈ 'ದಿ ಕಾಶ್ಮೀರಿ ಫೈಲ್ಸ್' . ರಿಲೀಸ್ ಆಗಿ ಒಂದೆರೆಡು ದಿನ ಈ ಸಿನಿಮಾದ ಬಗ್ಗೆ ಹೆಚ್ಚಾಗಿ ಯಾರು ತಲೆಕೆಡಿಸಿಕೊಂಡಿರಲಿಲ್ಲಾ. ಇದೀಗ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ.
ಯಾಕೆಂದರೆ ಈ ಚಿತ್ರದಲ್ಲಿ 1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ತುಂಬಾ ರಾ ಆಗಿ ತೋರಿಸಿದ್ದಾರೆ.
'ದಿ ಕಾಶ್ಮೀರಿ ಫೈಲ್ಸ್' ಸಿನಿಮಾವನ್ನು ನೋಡಿ ಎಲ್.ಕೆ ಅಡ್ವಾಣಿ ಕಣ್ಣೀರು ಹಾಕಿದ್ದಾರೆ ಅನ್ನುವ ಸುದ್ದಿ, ಮತ್ತು ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಎಲ್.ಕೆ ಅಡ್ವಾಣಿ ಸಿನಿಮಾ ನೋಡಿ ಕಣ್ಣೀರು ಹಾಕಿರೋದು ಸತ್ಯ. ಆದರೇ ಅದು 'ದಿ ಕಾಶ್ಮೀರಿ ಫೈಲ್ಸ್' ನೋಡಿ ಅಲ್ಲ.

'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡಿ ನಿಜಕ್ಕೂ ಕಣ್ಣೀರು ಹಾಕಿದ್ರಾ?
ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಾ ಸಾಗುವ ನಿರ್ದೇಶಕರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೊಮ್ಮಗನಿಗೆ ತನ್ನ ಕುಟುಂಬದ ಇತಿಹಾಸ ಹೇಳುತ್ತಾ ಸಾಗುವ ಕಥನ ಕ್ರಮದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಈ ಪುಷ್ಕರ್ ನಾಥ್ ಮೂಲಕ ಕಾಶ್ಮೀರಿ ಪಂಡಿತರ ಮೇಲಾದ ದಾಳಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತಾರೆ ನಿರ್ದೇಶಕರು. ಈ ಕಥನ ಕವಲುಗಳಲ್ಲಿ ಮಾಧ್ಯಮ, ರಾಜಕಾರಣ, ಭಯೋತ್ಪಾದನೆ, ಕೋಮುಗಲಭೆ, ಮತಾಂತರ, ಎರಡು ಕೋಮಿನ ನಡುವಿನ ಸಂಘರ್ಷ, ಹೀಗೆ ಸಾಕಷ್ಟು ಘಟನೆಗಳು ದೃಶ್ಯಗಳಾಗಿ ಬಂದು ಹೋಗುತ್ತವೆ. ಈ ಸಿನಿಮಾ ನೋಡಿ ಹಲವರು ಭಾವುಕರಾಗಿದ್ದು, ಎಲ್.ಕೆ ಅಡ್ವಾನಿ ಕೂಡ ಅತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡಿ ಅವರು ಕಣ್ಣೀರು ಹಾಕಿಲ್ಲ. ಬದಲಿಗೆ ಇದು ಎರಡು ವರ್ಷಗಳ ಹಳೆಯ ವಿಡಿಯೋ ಆಗಿದ್ದು, ಜನ ಅದನ್ನೇ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಎಲ್.ಕೆ ಅಡ್ವಾಣಿ ವಿಡಿಯೋ ಕಣ್ಣೀರು ಹಾಕಿದ್ದು ಯಾಕೆ?
ಅಸಲಿಗೆ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ವಿಧು ವಿನೋದ್ ಚೋಪ್ರಾ 2020ರಲ್ಲಿ 'ಶಿಕಾರ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಆದೇ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಎಲ್.ಕೆ. ಅಡ್ವಾಣಿ ಅವರು ಭಾಗಿಯಾಗಿದ್ದರು. 'ಶಿಕಾರ' ಸಿನಿಮಾ ನೋಡಿದ ಬಳಿಕ ಅಡ್ವಾಣಿ ಎಮೋಷನಲ್ ಆಗಿದ್ದರು. ಅಂದು ಅವರು ಕಣ್ಣೀರು ಕೂಡ ಹಾಕಿದ್ದರು. ಆ ವಿಡಿಯೋವನ್ನು ವಿಧು ವಿನೋದ್ ಚೋಪ್ರಾ ಅವರು 2020ರ ಫೆ.7ರಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಜನ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡಿಯೇ ಎಲ್ಕೆ ಅಡ್ವಾಣಿ ಕಣ್ಣೀರು ಹಾಕಿದ್ದಾರೆ ಎಂದು ಅದನ್ನು ಶೇರ್ ಮಾಡುತ್ತಿದ್ದಾರೆ.

ಎರಡೂ ಚಿತ್ರದಲ್ಲೂ ಕಾಶ್ಮೀರಿ ಪಂಡಿತರ ಕಥೆ!
ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಅದು ಏನೆಂದರೆ 'ಶಿಕಾರ' ಮತ್ತು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗಳ ನಡುವೆ ಒಂದು ಸಾಮ್ಯತೆ ಇದೆ. ಕಾಶ್ಮೀರಿ ಪಂಡಿತರ ಕ್ರೂರ ಹತ್ಯೆ ಹಾಗೂ ಅವರ ವಲಸೆ ಬಗ್ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ಹೇಳಲಾಗಿದೆ. 'ಶಿಕಾರ' ಚಿತ್ರದಲ್ಲೂ ಇದೇ ವಿಚಾರವನ್ನು ಇಟ್ಟುಕೊಂಡು ಸಿನಿಮಾ ತೆರೆಗೆ ತಂದಿದ್ದಾರೆ. ಆದರೆ ಒಂದು ಲವ್ ಸ್ಟೋರಿಯ ಹಿನ್ನೆಲೆಯಲ್ಲಿ 'ಶಿಕಾರ' ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ಕಟ್ಟಿಕೊಟ್ಟಿದ್ದರು. ಆದರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ತುಂಬ ರಾ ಆಗಿ ಚಿತ್ರಿಸಿದ್ದಾರೆ.

'ದಿ ಕಾಶ್ಮೀರಿ ಫೈಲ್ಸ್' ಸಿನಿಮಾದಲ್ಲಿ ಅಂತದ್ದೇನಿದೆ?
ಇಡೀ ಸಿನಿಮಾ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕವೇ ಬಿಚ್ಚಿಕೊಳ್ಳುತ್ತಾ ಹೋಗಿದ್ದರಿಂದ ಮತ್ತು ಅದನ್ನು ಭಯೋತ್ಪಾದಕರ ಚಿತ್ರಹಿಂಸೆಗೆ ನಲುಗಿ ಪ್ರಾಣಬಿಟ್ಟ ಕುಟುಂಬವೊಂದರ ಕಥೆಯ ಮೂಲಕ ಹೇಳಿದ್ದರಿಂದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಒಂದು ವರ್ಗದ ಜನಕ್ಕೆ ಇಷ್ಟವಾಗಿ ಮತ್ತು ಮತ್ತೊಂದು ವರ್ಗದ ಜನಕ್ಕೆ ಅದು ಓಲೈಕೆಯಾಗಿ ಕಾಣುವುದರಲ್ಲಿ ಅನುಮಾನವಿಲ್ಲ. ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರವನ್ನು ನರಕ ಸದೃಶವಾಗಿ ಮಾಡಿದ ಮತಾಂಧರ ಕುರಿತು ಹಾಗೂ ಕಾಶ್ಮೀರ ಹಿಂದೂಗಳು ಅನುಭವಿಸಿದ ನರಕಯಾತನೆಗಳನ್ನು ಬಿಚ್ಚಿಟ್ಟಿರುವ "ದಿ ಕಾಶ್ಮೀರ್ ಫೈಲ್ಸ್" ಚಲನಚಿತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಶೇ. 100 ರಷ್ಟು ತೆರಿಗೆ ವಿನಾಯಿತಿ ಕೂಡ ಘೋಷಣೆ ಮಾಡಿದೆ.


Click it and Unblock the Notifications











