ಸಿನಿಮಾ ಟೀಕಿಸುವ ಬಿಜೆಪಿ ಕಾರ್ಯಕರ್ತರಿಗೆ ಮೋದಿ ಸಲಹೆ: ಟಾಂಗ್ ನೀಡಿದ ಅನುರಾಗ್ ಕಶ್ಯಪ್
ಇತ್ತೀಚೆಗೆ ತೆರೆಗೆ ಬರುತ್ತಿರುವ ಬಹುತೇಕ ಬಾಲಿವುಡ್ ಸಿನಿಮಾಗಳಿಗೆ ಬಾಯ್ಕಾಟ್ ಟ್ರೆಂಡ್ ಮಾಡಲಾಗುತ್ತಿದೆ. ಅದೂ ಬಹುತೇಕ ಧರ್ಮದ ಕಾರಣವನ್ನು ನೀಡಿಯೇ ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಕರೆ ನೀಡಲಾಗುತ್ತಿದೆ.
ಹೀಗೆ ಸಿನಿಮಾ ಬಾಯ್ಕಾಟ್ ಮಾಡುವ ಅಭಿಯಾನ ನಡೆಸುವುದು ಬಹುತೇಕ ಬಿಜೆಪಿ ಕಾರ್ಯಕರ್ತರು ಅಥವಾ ಬಿಜೆಪಿಯನ್ನು ಬೆಂಬಲಿಸುವ ಇತರೆ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಆಗಿದ್ದಾರೆ. ಇವರುಗಳ ದೆಸೆಯಿಂದಾಗಿ ಒಳ್ಳೆಯ ಸಿನಿಮಾಗಳೂ ಸಹ ಬಾಯ್ಕಾಟ್ ಬಿಸಿ ಎದುರಿಸುವಂತಾಗಿದೆ.
ಇದೇ ಕಾರಣಕ್ಕೆ ಇತ್ತೀಚೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಳಿ ಮನವಿ ಮಾಡಿದ್ದ ನಟ ಸುನಿಲ್ ಶೆಟ್ಟಿ, ಬಾಯ್ಕಾಟ್ ಬಾಲಿವುಡ್ ಟ್ರೆಂಡ್ ಹತ್ತಿಕ್ಕುವಂತೆ ಮನವಿ ಮಾಡಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿರುವ ಪಿಎಂ ನರೇಂದ್ರ ಮೋದಿ, ಅನವಶ್ಯಕವಾಗಿ ಇತರರಿಗೆ ಧರ್ಮದ ಕಾರಣ ಹಿಡಿದು ತೊಂದರೆ ನೀಡುವವರಿಗೆ ಬುದ್ಧಿವಾದ ಹೇಳುವ ಯತ್ನವನ್ನು ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ''ಸುಖಾ ಸುಮ್ಮನೆ ಬೇಡದ ವಿಷಯಗಳ ಬಗ್ಗೆ ಚರ್ಚಿಸುವುದು ವಿವಾದ ಎಬ್ಬಿಸುವುದು ಮಾಡಬೇಡಿ, ಸಿನಿಮಾ ಇನ್ನಿತರೆ ವಿಷಯಗಳ ಬಗ್ಗೆ ಅನವಶ್ಯಕ ಚರ್ಚೆ, ಪ್ರಾಧಾನ್ಯತೆ ಬೇಡ. ಇದು ನಮ್ಮ ಅಭಿವೃದ್ಧಿಯೇ ಮೊದಲು ಧ್ಯೇಯಕ್ಕೆ ಹೊಡೆತ ನೀಡುತ್ತದೆ'' ಎಂದಿದ್ದಾರೆ.

ಮೋದಿಯ ಟೀಕಿಸಿದ ಅನುರಾಗ್ ಕಶ್ಯಪ್
ಇದೀಗ ಮೋದಿಯವರು, ತಮ್ಮ ಕಾರ್ಯಕರ್ತರಿಗೆ ನೀಡಿರುವ ಕರೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ನ ಜನಪ್ರಿಯ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್, ''ನೀವು ಈ ಮಾತನ್ನು ಒಂದು ನಾಲ್ಕು ವರ್ಷ ಮುಂಚಿತವಾಗಿಯಾದರೂ ಹೇಳಬೇಕಿತ್ತು. ಈಗ ನಿಮ್ಮ ಕಾರ್ಯಕರ್ತರು, ಜನರು ಕೈ ಮೀರಿ ಹೋಗಿಬಿಟ್ಟಿದ್ದಾರೆ. ನಿಮ್ಮ ಜನರೇ ನಿಮ್ಮ ಮಾತನ್ನು ಕೇಳುವುದಿಲ್ಲ. ನೀವು ಈಗ ಅವರನ್ನು ನಿಯಂತ್ರಿಸಲು ಯತ್ನಿಸಿದರೆ ಅದು ಸಾಧ್ಯವಿಲ್ಲ'' ಎಂದಿದ್ದಾರೆ.

ನಿಮ್ಮ ಮೌನದಿಂದಲೇ ಇಷ್ಟೆಲ್ಲ ಆಗಿದೆ: ಅನುರಾಗ್ ಕಶ್ಯಪ್
''ನಿಮ್ಮ ಕಾರ್ಯಕರ್ತರು ಕೆಟ್ಟ ಕಾರ್ಯಗಳಲ್ಲಿ, ದ್ವೇಷ ಹರಡುವುದರಲ್ಲಿ ನಿರತರಾಗಿದ್ದಾಗ ನೀವು ಮೌನವಾಗಿದ್ದಿರಿ. ಅದೇ ಮೌನವನ್ನು ಸಮ್ಮತಿಯೆಂದು ಭಾವಿಸಿ ಕಾರ್ಯಕರ್ತರು ದ್ವೇಷ ಹರಡುವ ಕಾರ್ಯವನ್ನು ದುಪ್ಪಟ್ಟು ಮಾಡಿದ್ದಾರೆ. ನಿಮ್ಮ ಮೌನದಿಂದ ಪ್ರಾಂಭವಾದ ಆ ದ್ವೇಷ ಹರುಡುವ ಕಾರ್ಯ ಈಗ ಸ್ವತಂತ್ರ್ಯವಾಗಿಬಿಟ್ಟಿದ್ದು, ಯಾರ ಹಿಡಿತಕ್ಕೂ ಸಿಗುತ್ತಿಲ್ಲ. ಸ್ವತಃ ನಿಮ್ಮ ಹಿಡಿತಕ್ಕೂ ಸಿಗುವುದಿಲ್ಲ'' ಎಂದಿದ್ದಾರೆ ಅನುರಾಗ್ ಕಶ್ಯಪ್.

ಹಲವು ಸಿನಿಮಾಗಳ ವಿರುದ್ಧ ಅಭಿಯಾನ
ಸಿನಿಮಾಗಳನ್ನು ಧರ್ಮದ ಕಾರಣಕ್ಕೆ ಬ್ಯಾನ್ ಮಾಡಲು ಒತ್ತಡ ಹೇರುವ ಪದ್ಧತಿ ಇತ್ತೀಚೆಗೆ ಹೆಚ್ಚಾಗಿದೆ. 'ಪಠಾಣ್' ಸಿನಿಮಾದಲ್ಲಿ ದೀಪಿಕಾ ಕೇಸರಿ ಬಿಕಿನಿ ತೊಟ್ಟಿದ್ದಾಳೆಂದು, ಆಮಿರ್ ಖಾನ್ ಅದ್ಯಾವಾಗಲೋ ಏನೋ ಹೇಳಿದ್ದ ಎಂಬ ಕಾರಣಕ್ಕೆ ಅವರ ಸಿನಿಮಾ ಮೇಲೆ ಬಾಯ್ಕಾಟ್ ಟ್ರೆಂಡ್, ಸಲ್ಮಾನ್ ಖಾನ್ ರ ಎಲ್ಲ ಸಿನಿಮಾಗಳಿಗೆ, ಸ್ವತಃ ಅನುರಾಗ್ ಕಶ್ಯಪ್ ಸಿನಿಮಾಗಳಿಗೆ, ತಾಪ್ಸಿ ಪನ್ನು, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಇನ್ನೂ ಹಲವರ ಸಿನಿಮಾಗಳಿಗೆ ಬಾಯ್ಟ್ರೆಂಡ್ ಮಾಡಲಾಗುತ್ತಿದೆ. ಇವರುಗಳಿಗೆ ಧರ್ಮ ವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಲಾಗಿದೆ.

ನಟ, ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್
ನಿರ್ದೇಶಕ ಅನುರಾಗ್ ಕಶ್ಯಪ್, ಹಲವು ದಶಕಗಳಿಂದ ಬಾಲಿವುಡ್ನಲ್ಲಿ ಕೆಲಸ ಮಾಡಿದ್ದು, 'ಗ್ಯಾಂಗ್ಸ್ ಆಫ್ ವಾಸೆಪುರ್' ಸೇರಿದಂತೆ ಹಲವು ಕಲ್ಟ್ ಸಿನಿಮಾಗಳನ್ನು ನೀಡಿದ್ದಾರೆ. ಮೋದಿ ಹಾಗೂ ಬಿಜೆಪಿ ವಿರುದ್ಧ ಧೈರ್ಯವಾಗಿ ಅಭಿಪ್ರಾಯ ಹೇಳುತ್ತಾ ಬಂದಿರುವ ಕಶ್ಯಪ್ ವಿರುದ್ಧ ಒಮ್ಮೆ ಇಡಿ ರೇಡ್ ಸಹ ನಡೆದಿದೆ. ಇದೀಗ ಅನುರಾಗ್ ಕಶ್ಯಪ್, 'ಆಲ್ಮೋಸ್ಟ್ ಪ್ಯಾರ್ ವಿತ್ ಡಿಜೆ ಮೊಹಾಬ್ಬತ್' ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಟು ಸಿಸ್ಟರ್ ಆಂಡ್ ಎ ಹಸ್ಬೆಂಡ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಒನ್ ಟು ಒನ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಮೂರು ಸಿನಿಮಾಗಳು ಇನ್ನಷ್ಟೆ ಬಿಡುಗಡೆ ಆಗಬೇಕಿದೆ.


Click it and Unblock the Notifications











