ಅತಿಯಾದ ವರ್ಕೌಟ್ ಸಿದ್ಧಾರ್ಥ್ ಶುಕ್ಲಾಗೆ ಮುಳುವಾಯಿತೇ?
ಬಾಲಿವುಡ್ ಕಿರುತೆರೆ ನಟ, ಬಿಗ್ ಬಾಸ್ 13ನೇ ಆವೃತ್ತಿಯ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2 ರಂದು ಬೆಳಗ್ಗೆ ಕೊನೆಯುಸಿರೆಳೆದರು. ಗುರುವಾರ ಮುಂಜಾನೆ ಮುಂಬೈನ ಕೂಪರ್ ಆಸ್ಪತ್ರೆಗೆ ಸಿದ್ಧಾರ್ಥ್ ಶುಕ್ಲಾ ಅವರನ್ನು ಕರೆದುಕೊಂಡು ಬರಲಾಯಿತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಯುವನಟ ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
40 ವರ್ಷದ ಸಿದ್ಧಾರ್ಥ್ ಶುಕ್ಲಾ ಬಹಳ ಫಿಟ್ ಆಗಿದ್ದರು. ಪ್ರತಿನಿತ್ಯ ವ್ಯಾಯಾಮ ಮಾಡ್ತಿದ್ದರು. ವರ್ಕೌಟ್ ಕಡೆ ಸಿದ್ಧಾರ್ಥ್ ಹೆಚ್ಚು ಗಮನ ಕೊಟ್ಟಿದ್ದರು. ಡಯೇಟ್, ವರ್ಕೌಟ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ನಟ ದೈಹಿಕವಾಗಿ ಬಹಳ ಆರೋಗ್ಯವಾಗಿದ್ದರು. ಆದರೂ ಈ ವಯಸ್ಸಿನಲ್ಲಿ ಹೃದಯಾಘಾತ ಸಂಭವಿಸಿದ್ದು ನಿಜಕ್ಕೂ ಆಘಾತ ಮತ್ತು ಪ್ರಶ್ನೆಯಾಗಿ ಉಳಿದುಕೊಂಡಿದೆ.
ಸಿದ್ಧಾರ್ಥ್ ಶುಕ್ಲಾ ಅವರ ವರ್ಕೌಟ್ಗೆ ಸಂಬಂಧಿಸಿದಂತೆ ಅದಾಗಲೇ ಅವರ ವೈದ್ಯರು ಸಲಹೆ ಕೊಟ್ಟಿದ್ದಂತೆ. ಹೆಚ್ಚು ಶ್ರಮ ಹಾಕಿ ವ್ಯಾಯಾಮ ಮಾಡುವುದು ಬೇಡ, ಸುಲಭದ ಮಾರ್ಗ ಅನುಸರಿಸಿ ಎಂದು ತಿಳಿಸಿದ್ದರಂತೆ. ಸಿದ್ಧಾರ್ಥ್ಗೆ ಅತಿಯಾದ ವರ್ಕೌಟ್ ಮುಳುವಾಯಿತೇ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ಮುಂದೆ ಓದಿ...

ವರ್ಕೌಟ್ ಮಿಸ್ ಮಾಡುತ್ತಿರಲಿಲ್ಲ
ಸಿದ್ಧಾರ್ಥ್ ಶುಕ್ಲಾ ಪ್ರತಿನಿತ್ಯ ಮಿಸ್ ಮಾಡದೆ ವರ್ಕೌಟ್ ಮಾಡ್ತಿದ್ದರು. ಎಷ್ಟೇ ಬ್ಯುಸಿಯಿದ್ದರೂ ವ್ಯಾಯಾಮ ಮಾಡಿಯೇ ಮಲಗುತ್ತಿದ್ದರು. ಅವರು ವರ್ಕೌಟ್ ತಪ್ಪಿಸಿಕೊಳ್ಳುತ್ತಿದ್ದಿದ್ದು ಬಹಳ ಅಪರೂಪ ಎನ್ನುವ ಮಾತು ಅವರ ಆಪ್ತರ ಬಳಗದಲ್ಲಿ ಕೇಳಿ ಬಂದಿರುವ ಮಾತು. ಅದರಂತೆ ಸಾಯುವ ಮುನ್ನ ದಿನವೂ ಸಿದ್ಧಾರ್ಥ್ ಶುಕ್ಲಾ ವ್ಯಾಯಾಮ ಮಾಡಿದ್ದರು.

ರಾತ್ರಿ ಲೇಟ್ ಆದರೂ ಜಾಗಿಂಗ್ ಮಾಡಿದ್ದರು
ಸಿದ್ಧಾರ್ಥ್ ಶುಕ್ಲಾ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮೀಟಿಂಗ್ ಮುಗಿಸಿ ಮನೆಗೆ ಬರುವಷ್ಟರಲ್ಲಿ 8 ಗಂಟೆ ಆಗಿತ್ತು. ಬಳಿಕ ರಾತ್ರಿ 10 ಗಂಟೆಗೆ ತಮ್ಮ ಮನೆಯ ಆವರಣದಲ್ಲಿಯೇ ಸಿದ್ಧಾರ್ಥ್ ಜಾಗಿಂಗ್ ಮಾಡಿದ್ದಾರೆ. ನಂತರ ಸ್ವಲ್ಪ ಆಹಾರವೂ ಸೇವಿಸಿದ್ದರು. ವ್ಯಾಯಾಮ ಮುಗಿಸಿ ಮಲಗಿದರು. ಆದರೆ ಮುಂಜಾನೆ 3 ಗಂಟೆ ಸುಮಾರಿಗೆ ಸಿದ್ಧಾರ್ಥ್ಗೆ ಎದೆ ನೋವು ಕಾಣಿಸಿಕೊಂಡಿದೆ.

ಸಿದ್ಧಾರ್ಥ್ ನೋವು ಗಮನಿಸಿದ ತಾಯಿ
ಸೆಪ್ಟೆಂಬರ್ 2 ರಂದು ಮುಂಜಾನೆ ಸಿದ್ಧಾರ್ಥ್ ಶುಕ್ಲಾ ಅವರು ಇದ್ದಕ್ಕಿದ್ದಂತೆ ಎಚ್ಚರಗೊಂಡರು. ಈ ವೇಳೆ ಎದೆ ನೋವು ಕಾಣಿಸಿಕೊಂಡಿರುವ ಬಗ್ಗೆ ತಾಯಿ ರಿತು ಶುಕ್ಲಾ ಅವರಲ್ಲಿ ಹೇಳಿಕೊಂಡರು. ಕೂಡಲೇ ತಾಯಿ ರಿತು ಶರ್ಮಾ ನೀರು ಕಾಯಿಸಿ ಕೊಟ್ಟರು. ಆಮೇಲೆ ಮಲಗಿದ ಶುಕ್ಲಾ ಮತ್ತೆ ಏಳಲೇ ಇಲ್ಲ. ಆಮೇಲೆ ಭಯಭೀತಿಗೊಂಡ ತಾಯಿ ಕೂಪರ್ ಆಸ್ಪತ್ರೆಗೆ ರವಾನಿಸಿದರು. ದುರಾದೃಷ್ಟವಶಾತ್ ಸಿದ್ಧಾರ್ಥ್ ಪ್ರಾಣ ಹಾರಿಗೋಗಿತ್ತು.

ಪ್ರತಿದಿನ 3 ಗಂಟೆ ವ್ಯಾಯಾಮ
ಸಿದ್ಧಾರ್ಥ್ ಶುಕ್ಲಾ ವರ್ಕೌಟ್ ಬಗ್ಗೆ ಹೆಚ್ಚು ಗಮನ ಹರಿಸಿದ್ದರು ಹಾಗೂ ಅದನ್ನು ಚಾಚೂತಪ್ಪದಂತೆ ಮಾಡುತ್ತಿದ್ದರು. ಪ್ರತಿದಿನ 3 ಗಂಟೆಗಳ ಕಾಲ ವರ್ಕೌಟ್ ಮಾಡ್ತಿದ್ದರು ಎಂಬ ಮಾಹಿತಿ ಇದೆ. ಸಿದ್ಧಾರ್ಥ್ ಅವರಿಗೆ ಆಪ್ತ ವೈದ್ಯರು ವರ್ಕೌಟ್ ಕುರಿತು ಸಲಹೆ ಕೊಟ್ಟಿದ್ದಂತೆ. ಹೆಚ್ಚು ಶ್ರಮ ಬೇಡ, ನಿಧಾನಗತಿ ಇರಲಿ ಎಂದು ಹೇಳಿದ್ದರು ಎನ್ನುವ ವಿಚಾರವನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಹಾಗಾಗಿ, ಅತಿಯಾದ ವರ್ಕೌಟ್ ಒತ್ತಡಕ್ಕೆ ಕಾರಣವಾಯಿತೇ ಎಂಬ ಅನುಮಾನವೂ ಇದೆ.

ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ
ವರದಿಗಳ ಪ್ರಕಾರ, ಸಿದ್ಧಾರ್ಥ್ ಶುಕ್ಲಾ ಬುಧವಾರ ರಾತ್ರಿ ಮಲಗುವುದಕ್ಕೂ ಮುಂಚೆ ಮಾತ್ರೆ ಸೇವಿಸಿದ್ದರು ಎಂದು ಹೇಳಲಾಗಿದೆ. ಅದರ ಪರಿಣಾಮವೂ ಹೃದಯಾಘಾತ ಸಂಭವಿಸಿರಬಹುದು ಎಂಬ ಚರ್ಚೆಯೂ ಇದೆ. ಈ ಕಡೆ ಕೂಪರ್ ಆಸ್ಪತ್ರೆಯ ಮೂರು ಜನ ನುರಿತ ವೈದ್ಯರಿಂದ ಸಿದ್ಧಾರ್ಥ್ ಶುಕ್ಲಾ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆದಿದೆ. ಶುಕ್ರವಾರ ಅಧಿಕೃತವಾಗಿ ವರದಿ ಸಿಗುತ್ತದೆ. ಸಿದ್ಧಾರ್ಥ್ ಸಾವಿಗೆ ಅಸಲಿ ಕಾರಣ ಏನು ಎನ್ನುವುದು ಹೊರಬೀಳಲಿದೆ.


Click it and Unblock the Notifications











