'ಸೂಪರ್ ಸ್ಟಾರ್ಗಳ ಜಮಾನಾ ಮುಗೀತು, ಈಗಿನದ್ದು ನಮ್ಮ ಟೈಮು'
ಸಿನಿಮಾ ಎಂಬುದು ಸ್ಟಾರ್ ನಟರ ಮೇಲೆ ಅವಲಂಬಿತವಾಗಿದೆ. ಆದರೆ ಇತ್ತೀಚೆಗೆ ಇದು ಬದಲಾವಣೆ ಆಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ದಕ್ಷಿಣ ಭಾರತದ ಕೆಲವು ಸಿನಿಮಾರಂಗದಲ್ಲಿ ಈಗಲೂ ಸ್ಟಾರ್ ನಟರ ಹಿಡಿತದಲ್ಲಿಯೇ ಇವೆ. ಆದರೆ ಬಾಲಿವುಡ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈಗೇನಿದ್ದರೂ ಕಂಟೆಂಟ್ಗೆ ಮೊದಲ ಆದ್ಯತೆ. ಒಳ್ಳೆಯ ಕಂಟೆಂಟ್ ಇದ್ದರೆ ನಟ-ನಟಿ ಯಾರಾದರೂ ಆಗಲಿ ಸಿನಿಮಾ ಹಿಟ್.
ಇದೇ ವಿಷಯವನ್ನು ಬಾಲಿವುಡ್ನ ಖ್ಯಾತ ಪೋಷಕ ನಟ ಪಂಕಜ್ ತ್ರಿಪಾಠಿ ವಿಸ್ತರಿಸಿ ಹೇಳಿದ್ದಾರೆ. 'ಸೂಪರ್ ಸ್ಟಾರ್ ಗಳ ಜಮಾನಾ ಮುಗಿಯಿತು. ಜನ ಈಗ ನಟರನ್ನು ನೋಡಿ ಅಲ್ಲ ಕತೆ ನೋಡಿ, ಕಂಟೆಂಟ್ ನೋಡಿ ಸಿನಿಮಾಕ್ಕೆ ಬರುತ್ತಾರೆ' ಎಂದಿದ್ದಾರೆ.

90-2000 ರ ದಶಕದಲ್ಲಿ ಸೂಪರ್ ಸ್ಟಾರ್ ನಟರು ಸಿನಿಮಾದಲ್ಲಿ ಇದ್ದರೆ ಸಾಕು ಸಿನಿಮಾ ಹೇಗಾದರೂ ಇರಲಿ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಸಿನಿಮಾ ಫ್ಲಾಪ್ ಆದರೂ ಅದರ ಹೊಣೆಗಾರರನ್ನಾಗಿ ನಟರನ್ನು ಮಾಡುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಸಲ್ಮಾನ್ ಖಾನ್, ಶಾರುಖ್ ಖಾನ್ ಸಹ ಜನರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತಿದೆ ಎಂದಿದ್ದಾರೆ ಪಂಕಜ್ ತ್ರಿಪಾಠಿ.
ಸಿನಿಮಾದಲ್ಲಿ ಸ್ಟಾರ್ ನಟನ ಇರಬೇಕೆಂಬ ಯೋಚನೆಯೂ ಬದಲಾಗುತ್ತಿದೆ. ಸ್ಟಾರ್ ನಟನಿಗಾಗಿಯೇ ಕತೆ ಬರೆಯುವ ಅಭ್ಯಾಸವೂ ಕಡಿಮೆ ಆಗುತ್ತಿದೆ, ಹೆಚ್ಚು ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲ ಪ್ರತಿಭಾವಂತ ನಟರಿಗೆ ಹೆಚ್ಚು ಅವಕಾಶ ಮತ್ತು ಯಶಸ್ಸು ದೊರಕುತ್ತದೆ ಎಂದರು.
ಪಂಕಜ್ ತ್ರಿಪಾಠಿ , 'ಶಕೀಲಾ' ಸಿನಿಮಾದಲ್ಲಿ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಸಹ ಅವರೇ ಆಗಿದ್ದಾರೆ.


Click it and Unblock the Notifications











