ಗುಲ್ಷನ್ ಕುಮಾರ್ ಕೊಲೆ ಪ್ರಕರಣ: ಕೊಲೆಗಾರರಿಗೆ ಸಿಗಲಿಲ್ಲ ಮುಕ್ತಿ
1997 ರಲ್ಲಿ ನಡೆದ ಗುಲ್ಷನ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
ಗಾಯಕರೂ, ನಿರ್ಮಾಪಕರು ಆಗಿದ್ದ ಗುಲ್ಷನ್ ಕುಮಾರ್ ಟಿ-ಸೀರೀಸ್ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ಕ್ಯಾಸೆಟ್ ಉದ್ಯಮದಲ್ಲಿ ಭಾರತದಲ್ಲಿಯೇ ನಂಬರ್ ಒನ್ ಆಗಿದ್ದ ಗುಲ್ಷನ್ ಕುಮಾರ್ ಅವರನ್ನು 1997 ರ ಆಗಸ್ಟ್ 12 ರಂದು ಹಾಡ ಹಗಲೆ ಮುಂಬೈನ ಅಂಧೇರಿ ಬಳಿ ದೇವಾಲಯದ ಮುಂದೆ ಹತ್ಯೆ ಮಾಡಲಾಯಿತು. ಅವರ ದೇಹಕ್ಕೆ 16 ಗುಂಡುಗಳು ಇಳಿದಿದ್ದವು. ಈ ಘಟನೆ ಆ ಕಾಲಕ್ಕೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಸಹವರ್ತಿ ರೌಫ್ ಮರ್ಚೆಂಟ್ ಮತ್ತು ಗುಲ್ಷನ್ ಕುಮಾರ್ರ ಉದ್ಯಮ ಪ್ರತಿಸ್ಪರ್ಧಿ ರಮೇಶ್ ತೌರಾನಿ ಅವರ ಕೈವಾಡ ಇದ್ದುದಾಗಿಯೂ ಇಬ್ಬರೂ ಸೇರಿ ಗುಲ್ಷನ್ ಕುಮಾರ್ ಹತ್ಯೆ ಮಾಡಿದ್ದಾಗಿ ಸೆಷನ್ಸ್ ಕೋರ್ಟ್ ಪರಾಮರ್ಶಿಸಿ 2002 ರಲ್ಲಿ ತೀರ್ಪು ನೀಡಿತ್ತು.
ರಮೇಶ್ ತೌರಾನಿ ಹಾಗೂ ಇತರರು ತೀರ್ಪಿನ ವಿರುದ್ದ ಬಾಂಬೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.

ಪರಾರಿಯಾದ ಗಾಯಕ ನದೀಮ್ ಶೈಫಿ
1997 ರಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು 400 ಕ್ಕೂ ಹೆಚ್ಚು ಪುಟಗಳ ದೀರ್ಘ ಚಾರ್ಜ್ಶೀಟ್ ಸಲ್ಲಿಸಿದ್ದರು. ರೌಫ್ ಮರ್ಚೆಂಟ್, ಅಬ್ದುಲ್ ರಶೀದ್ ಹಾಗೂ ಮತ್ತೊಬ್ಬ ಬಾಡಿಗೆ ಹಂತಕರು ಸೇರಿ ಗುಲ್ಷನ್ ಕುಮಾರ್ ಅನ್ನು ಹಾಡ ಹಗಲೇ ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ 'ಟಿಪ್ಸ್' ಕ್ಯಾಸೆಟ್ ಸಂಸ್ಥೆಯ ಪಾಲುದಾರ ರಮೇಶ್ ತೌರಾನಿ ದಾವೂದ್ನ ಭಂಟ ಅಬು ಸಲೀಮ್ಗೆ ಹಣ ನೀಡಿದ್ದ. ಈ ಪ್ರಕರಣದಲ್ಲಿ ಗಾಯಕ ಹಾಗೂ ಟಿಪ್ಸ್ ಸಂಸ್ಥೆಯ ಸಹ ಪಾಲುದಾರ ನದೀಮ್ ಶೈಫಿ ಹೆಸರೂ ಸಹ ಇತ್ತು. ಆದರೆ ಆತ ಲಂಡನ್ಗೆ ಪರಾರಿಯಾಗಿ ಅಲ್ಲಿಯೇ ನೆಲೆಸಿಬಿಟ್ಟ.

ಅಬು ಸಲೀಂ ಅನ್ನು ಸಂಪರ್ಕಿಸಿದ್ದ ರಮೇಶ್
1997ರ ಸಮಯದಲ್ಲಿ ಗುಲ್ಷನ್ ಕುಮಾರ್ ಮುಂಬೈನ ಭಾರಿ ಶ್ರೀಮಂತರಲ್ಲಿ ಒಬ್ಬರಾಗಿದ್ದರು, ಅವರ ನಿರ್ಮಾಣದ ಸಿನಿಮಾಗಳು ಸೂಪರ್-ಡೂಪರ್ ಹಿಟ್ ಆಗಿದ್ದವು. ಟಿ-ಸೀರೀಸ್ ಕ್ಯಾಸೆಟ್ ಕಂಪೆನಿ ಉತ್ತುಂಗದಲ್ಲಿತ್ತು ಆ ಸಮಯದಲ್ಲಿ ರೌಫ್ ಮರ್ಚೆಂಟ್, ಗುಲ್ಷನ್ಗೆ ಕರೆ ಮಾಡಿ ಹಫ್ತಾ ಕೇಳಿದ್ದ. ಅದೇ ಸಮಯದಲ್ಲಿ ಅಬು ಸಲೀಂ ಅನ್ನು ಸಂಪರ್ಕಿಸಿದ್ದ ರಮೇಶ್, ಗುಲ್ಷನ್ ಅನ್ನು ಕೊಲ್ಲಲು ಸುಫಾರಿ ನೀಡಿದ್ದ.

ರಜೆ ಹಾಕಿದ್ದ ಬಾಡಿಗಾರ್ಡ್
ಮೂವರು ಹಂತಕರು ಗುಲ್ಷನ್ ಅನ್ನು ಕೊಲ್ಲಲು ಹಲವು ದಿನ ಯತ್ನಿಸಿದರು. ಆದರೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಸಶಸ್ತ್ರ ಬಾಡಿಗಾರ್ಡ್ ಅವರೊಟ್ಟಿಗೇ ಇದ್ದುದ್ದರಿಂದ ಕೊಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಆಗಸ್ಟ್ 12 ರಂದು ಬಾಡಿಗಾರ್ಡ್ ಆರೋಗ್ಯ ಸರಿಯಿಲ್ಲವೆಂದು ರಜೆ ಹಾಕಿದ್ದ. ಆ ನಂತರ ತನಿಖೆಯಲ್ಲಿ ಗೊತ್ತಾಗಿದ್ದು, ಬಾಡಿಗಾರ್ಡ್ಗೆ ರೌಫ್ ಮರ್ಚೆಂಟ್ ಬೆದರಿಕೆ ಹಾಕಿದ್ದ ಕಾರಣ ಆತ ಅಂದು ಬೇಕೆಂದೇ ಸುಳ್ಳು ಹೇಳಿ ರಜೆ ಹಾಕಿದ್ದನೆಂದು.

ಅಂದು ನಡೆದಿದ್ದು ಏನು?
1997, ಆಗಸ್ಟ್ 12ರಂದು ಬೆಳಿಗ್ಗೆ 10:40 ರ ಸುಮಾರಿಗೆ ಮುಂಬೈನ ಅಂಧೇರಿ ಬಳಿಯ ದೇವಾಸ್ಥಾನಕ್ಕೆ ತೆರಳಿ ಹೊರಗೆ ಬಂದಾಗ ಒಬ್ಬ ಶೂಟರ್ ಬಂದು, ''ಎಷ್ಟು ಪೂಜೆ ಮಾಡುತ್ತೀಯ ಇನ್ನು ಮೇಲೆ ಹೋಗಿ ಪೂಜೆ ಮಾಡು'' ಎಂದು ಹೇಳಿ ಶೂಟ್ ಮಾಡಲು ಆರಂಭಿಸಿದ. ಗುಲ್ಷನ್ ಕುಮಾರ್ ತಪ್ಪಿಸಿಕೊಳ್ಳಲೆಂದು ಅಲ್ಲಿದ್ದ ಗುಡಿಸಲಿಗೆ ಓಡಿದರು ಆದರೆ ಅವರು ಬಾಗಿಲು ತೆಗೆಯಲಿಲ್ಲ. ಗುಲ್ಷನ್ ಕುಮಾರ್ರ ಡ್ರೈವರ್ ಸಹಾಯಕ್ಕೆ ಧಾವಿಸಿದರಾದರೂ ಅವರಿಗೂ ಗುಂಡು ಹಾರಿಸಿದರು ಕೊಲೆಗಾರರು. ಗುಲ್ಷನ್ ಕುಮಾರ್ ದೇಹಕ್ಕೆ 16 ಗುಂಡುಗಳನ್ನು ಇಳಿಸಿದ ಹಂತಕರು ಅಲ್ಲಿಂದ ಪರಾರಿಯಾದರು. ಗುಲ್ಷನ್ ಸ್ಥಳದಲ್ಲಿಯೇ ನಿಧನ ಹೊಂದಿದರು. ಗುಲ್ಷನ್ ಕುಮಾರ್ ಸ್ಥಾಪಿಸಿದ್ದ ಟಿ-ಸೀರೀಸ್ ಸಂಸ್ಥೆ ಈಗಲೂ ಚಾಲ್ತಿಯಲ್ಲಿದ್ದು ಬಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.


Click it and Unblock the Notifications











