ಹಳೆ ಕಬ್ಣ ಖ್ಯಾತಿಯ ಕೈಲಾಶ್ ಖೇರ್ ಆಸ್ಪತ್ರೆಗೆ ದಾಖಲು
'ಹಳೆ ಪಾತ್ರೆ ಹಳೆ ಕಬ್ಣ', 'ಎಕ್ಕಾ ರಾಜಾ ರಾಣಿ ನಿನ್ನ ಕೈಯೊಳಗ, ಹಿಡಿ ಮಣ್ಣು ನಿನ್ನ ಬಾಯೊಳಗ' ಮುಂತಾದ ಹಾಡುಗಳಿಂದ ಕನ್ನಡ ಸಿನಿಪ್ರಿಯರ ಹೃದಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಕಂಚಿನ ಕಂಠದ ಬಾಲಿವುಡ್ ಹಿನ್ನೆಲೆ ಗಾಯಕ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನ್ಯೂಯಾರ್ಕಿನಿಂದ ಭಾರತಕ್ಕೆ ಮರಳುತ್ತಿದ್ದಂತೆಯೆ ಮಧುಮೇಹದಿಂದ ಬಳಲುತ್ತಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿಯನ್ನು ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಾಮಾಜಿಕ ತಾಣಗಳಲ್ಲಿ ಅವರೇ ಹಂಚಿಕೊಂಡಿದ್ದಾರೆ, ಹಾಗೆಯೆ ಆರೋಗ್ಯದ ಕಡೆ ದಿವ್ಯ ನಿರ್ಲಕ್ಷ್ಯ ತೋರಿದ್ದಕ್ಕೆ ಬೇಜಾರು ಮಾಡಿಕೊಂಡಿದ್ದಾರೆ. ದುಡ್ಡಿನ ಹಿಂದೆ ಬೆನ್ನತ್ತಿದವರಿಗೆ ಆರೋಗ್ಯದ ಮೇಲೆ ಲಕ್ಷ್ಯ ಎಲ್ಲಿರತ್ತೆ?

"ಕೈಲಾಶ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ಸಂಗೀತ ಸಂಜೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ದೊಡ್ಡ ಪಾಠ ಕಲಿತಿದ್ದೇನೆ. ಒಬಾಮಾ ಜೊತೆ ರಾತ್ರಿಯೂಟ ಮಾಡುತ್ತಿದ್ದರೂ, ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತಿದ್ದರೂ ನಿಮ್ಮ ಆರೋಗ್ಯವನ್ನು ಎಂದೂ ಕಡೆಗಣಿಸಬೇಡಿ. ನಿಮ್ಮ ದೇಹ ಸೈಲೆಂಟಾಗಿ ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಂಡುಬಿಡುತ್ತದೆ" ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
"ಆರೋಗ್ಯ ನಿರ್ಲಕ್ಷಿಸಿ, ನಿಮ್ಮ ಕಮಿಟ್ಮೆಂಟುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟರೆ ಯಾರೂ ಇಷ್ಟಪಡದಂತಹ ಸ್ಥಳಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಮೊದಲನೇ ಬಾರಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿದ್ದೇನೆ. ದೇವರು ನನಗೆ ಆರೋಗ್ಯ ಕರುಣಿಸಲಿ ಮತ್ತು ಎಂದೆಂದಿಗೂ ಸಂತೋಷವಾಗಿಡಲಿ" ಎಂದು ಅವರು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೈಲಾಶ್ ಖೇರ್ ಅವರ ಸಂಗೀತ ಯಾತ್ರೆ ಆರಂಭವಾಗಿದ್ದು 2006ರಲ್ಲಿ ಸಜನಿ ಚಿತ್ರದ ಮುಖಾಂತರ. ನಂತರ ಪ್ರೀತಿ ಏಕೆ ಭೂಮಿ ಮೇಲಿದೆ, ಚಂಡ, ಜಂಗ್ಲಿ, ಪರಿಚಯ, ರಜನಿ, ನಾನು ನನ್ನ ಕನಸು, ಕೃಷ್ಣನ್ ಲವ್ ಸ್ಟೋರಿ, ಜಾಕಿ, ಆರಕ್ಷಕ, ಸಿದ್ಲಿಂಗು, ಸಾರಥಿ, ಚಿಂಗಾರಿ ಮುಂತಾದ ಕನ್ನಡ ಸಿನೆಮಾಗಳಲ್ಲಿ ಕೈಲಾಶ್ ಖೇರ್ ಅವರು ಹಾಡುಗಳಿಗೆ ಜೀವ ತುಂಬಿದ್ದಾರೆ.


Click it and Unblock the Notifications











