ಸಿನಿಮಾ ವಿಮರ್ಶಕನನ್ನು ಜೈಲಿನಲ್ಲಿ ಕೊಲ್ಲಲು ತಂತ್ರ: ಕಾಪಾಡಿ ಎಂದು ಮನವಿ ಮಾಡಿದ ಪುತ್ರ!
ವಿವಾದಾತ್ಮಕ ಟ್ವೀಟ್ಗಳು, ಸಿನಿಮಾ ವಿಮರ್ಶೆಗಳಿಂದ ಹೆಸರಾಗಿರವ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಕಳೆದ ವಾರ ಮುಂಬೈನಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ವಿವಾದಾತ್ಮಕ ಟ್ವೀಟ್ ಕಾರಣಕ್ಕೆ ಮುಂಬೈನ ಮಲಾಡ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕಮಾಲ್ ಆರ್ ಖಾನ್ ಬಳಿಕ ವರ್ಸೋವಾ ಪೊಲೀಸರಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದರು.
ಇದೀಗ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅವರ ಪುತ್ರ ಎಂದು ಹೇಳಿಕೊಂಡಿರುವ ಫೈಸಲ್ ಕಮಾಲ್ ಎಂಬುವರು ಟ್ವೀಟ್ ಮಾಡಿದ್ದು, ''ನಮ್ಮ ತಂದೆಯನ್ನು ಕೊಲ್ಲಲು ಷಡ್ಯಂತ್ರ ನಡೆಯುತ್ತಿದೆ ದಯವಿಟ್ಟು ಅವರನ್ನು ಕಾಪಾಡಿ'' ಎಂದು ಬಾಲಿವುಡ್ ಹೀರೋಗಳಿಗೆ ಮನವಿ ಮಾಡಿದ್ದಾರೆ.

''ನಾನು ಕೆಆರ್ಕೆಯವರ ಪುತ್ರ ಫೈಸಲ್ ಕಮಾಲ್, ಕೆಲವು ವ್ಯಕ್ತಿಗಳು ಮುಂಬೈನಲ್ಲಿ ನನ್ನ ತಂದೆಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಲು ಯತ್ನಿಸುತ್ತಿದ್ದಾರೆ. ನನಗೆ ಇನ್ನೂ 23 ವರ್ಷ ನಾನು ಲಂಡನ್ನಲ್ಲಿ ವಾಸವಿದ್ದೇನೆ. ನನ್ನ ತಂದೆಗೆ ಹೇಗೆ ಸಹಾಯ ಮಾಡುವುದು ಎಂದು ನನಗೆ ಗೊತ್ತಿಲ್ಲ. ಅಭಿಷೇಕ್ ಬಚ್ಚನ್, ರಿತೇಶ್ ದೇಶ್ಮುಖ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಬಳಿ ನಾನು ಮನವಿ ಮಾಡುತ್ತಿದ್ದೇನೆ, ದಯವಿಟ್ಟು ನನ್ನ ತಂದೆಯನ್ನು ಕಾಪಾಡಿ'' ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು, ''ಅವರಿಲ್ಲದೇ ಹೋದರೆ ನಾನು ಮತ್ತು ನನ್ನ ತಂಗಿ ಸತ್ತೇ ಹೋಗುತ್ತೇವೆ. ಅವರೇ ನಮಗೆ ಜೀವನ. ಎಲ್ಲ ಜನರೂ ಕೆಆರ್ಕೆಗೆ ಬೆಂಬಲ ನೀಡಿರೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. ನಮ್ಮ ತಂದೆ ಸಹ ಸುಶಾಂತ್ ಸಿಂಗ್ ರಜಪೂತ್ ರೀತಿಯಲ್ಲಿ ಜೈಲಿನಲ್ಲಿ ಸಾಯುವುದು ನಮಗೆ ಇಷ್ಟವಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ ಫೈಸಲ್ ಕಮಲ್.
2020 ರಲ್ಲಿ ಕಮಾಲ್ ಆರ್ ಖಾನ್ ಮಾಡಿದ್ದ ದ್ವೇಷಪೂರ್ಣ ಟ್ವೀಟ್ನ ವಿರುದ್ಧ ರಾಹುಲ್ ಕನ್ವಾಲ್ ಎಂಬುವರು ಮುಂಬೈನ ಮಲಾಡ್ ಪೊಲೀಸರಿಗೆ ದೂರು ನೀಡಿದ್ದರು. ಕಮಾಲ್ ಆರ್ ಖಾನ್ ಭಾರತದಲ್ಲಿ ವಾಸಿಸುತ್ತಿರಲಿಲ್ಲವಾದ್ದರಿಂದ ಅವರ ಬಂಧನ ಸಾಧ್ಯವಾಗಿರಲಿಲ್ಲ. ಆದರೆ ಆಗಸ್ಟ್ 30ರ ಬೆಳಿಗ್ಗೆ ಕಮಾಲ್ ಆರ್ ಖಾನ್ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಪೊಲೀಸರು ಬಂಧಿಸಿದ್ದರು.
ಆ ಪ್ರಕರಣದಲ್ಲಿ ಜಾಮೀನಿಗೆ ಯತ್ನಿಸುತ್ತಿರುವಾಗಲೇ 2019 ರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ವರ್ಸೋವಾ ಪೊಲೀಸರು ಕಮಾಲ್ ಆರ್ ಖಾನ್ ಅನ್ನು ಬಂಧಿಸಿ ವಶಕ್ಕೆ ಪಡೆದುಕೊಂಡರು.
2019 ರಲ್ಲಿ ತಮ್ಮ ಮೇಲೆ ಕಮಾಲ್ ಆರ್ ಖಾನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಮಾಲ್ ಆರ್ ಖಾನ್ರ ಜಿಮ್ ಟ್ರೈನರ್ ಒಬ್ಬರು ವರ್ಸೋವಾ ಪೊಲೀಸರಿಗೆ 2021 ರಲ್ಲಿ ದೂರು ನೀಡಿದ್ದರು. ಕಮಾಲ್ ಆರ್ ಖಾನ್ ಗೆ ಭಾರಿ ದೊಡ್ಡ ವ್ಯಕ್ತಿಗಳ ಸಂಪರ್ಕ ಇದ್ದುದ್ದರಿಂದ ತಾನು ದೂರು ನೀಡಲು ಭಯಗೊಂಡಿದ್ದೆ ಎಂದು ತಡವಾಗಿ ದೂರು ನೀಡುತ್ತಿರುವ ಬಗ್ಗೆ ಯುವತಿ ಪೊಲೀಸರಲ್ಲಿ ಹೇಳಿದ್ದರು.


Click it and Unblock the Notifications











