2023ರ ಅಜೆಂಡಾ ? ಹಿಂದಿ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅಚ್ಚ ಕನ್ನಡದಲ್ಲಿ ಬರೆದು ಹೇಳಿದ್ದೇನು?
'ಕಾಂತಾರ' ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿ ಓಟಿಟಿಗೆ ಬಂದಿದೆ. ಆದರೂ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆದಿದೆ. ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಡಿವೈನ್ ಸ್ಟಾರ್ ಮುಂದಿನ ಅಜೆಂಡಾ ಏನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದೇ ಪ್ರಶ್ನೆಯನ್ನು ಅವರ ಮುಂದಿಟ್ಟಾಗ ಸಿಕ್ಕಿದ ಉತ್ತರ ಏನು ಗೊತ್ತಾ?
ಒಂದು ಮೀಡಿಯಂ ಬಜೆಟ್ ಚಿತ್ರದಿಂದ ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ದೇಶಾದ್ಯಂತ ಕ್ರೇಜ್ ಸೃಷ್ಟಿಯಾಗಿದೆ. ಸಾಲು ಸಾಲು ರಾಷ್ಟ್ರೀಯ ಮಾಧ್ಯಮಗಳ ಸಂದರ್ಶನಗಳಲ್ಲಿ ರಿಷಬ್ ಶೆಟ್ಟಿ ಭಾಗವಹಿಸುತ್ತಿದ್ದಾರೆ. ಆಜ್ ತಜ್ ವಾಹಿನಿಯ 'ಅಜೆಂಡಾ ಆಜ್ ತಕ್ 2022' ಸಂವಾದ ಕಾರ್ಯಕ್ರಮ ವೇದಿಕೆಗೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರಶ್ನೆವೊಂದಕ್ಕೆ ಬಸವಣ್ಣನವರ 'ಕಾಯಕವೇ ಕೈಲಾಸ' ಮಂತ್ರವನ್ನು ಪಟಿಸಿದ್ದಾರೆ. ರಿಷಬ್ ಕನ್ನಡ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದಸರಾ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸದ್ದು ಮಾಡ್ತಿದೆ. ಓಟಿಟಿಗೆ ಬಂದರೂ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ ಅಂದರೆ 'ಕಾಂತಾರ' ಕ್ರೇಜ್ ಹೇಗಿದೆ ಎನ್ನುವುದು ಗೊತ್ತಾಗುತ್ತದೆ.

ರಿಷಬ್ ಶೆಟ್ಟಿ 2023ರ ಅಜೆಂಡಾ ?
'ಕಾಂತಾರ' ಸಕ್ಸಸ್ ನಂತರ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿಗೆ ಎದುರಾಗಿದೆ. ಹೋದಲ್ಲಿ ಬಂದಲ್ಲಿ ಇದನ್ನೇ ಕೇಳುತ್ತಿದ್ದಾರೆ. 'ಅಜೆಂಡಾ ಆಜ್ ತಕ್ 2022' ವೇದಿಕೆಯಲ್ಲೂ ಇದೇ ಪ್ರಶ್ನೆ ಎದುರಾಗಿತ್ತು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕಿ ನಿಮ್ಮ ಮುಂದಿನ ಅಜೆಂಡಾ ಏನು ಎನ್ನುವುದನ್ನು ಡಿಜಿಟಲ್ ಸ್ಕ್ರೀನ್ ಮೇಲೆ ಬರೆದು ತೋರಿಸಿ ಎಂದು ಕೇಳಿದ್ದರು. ಇದಕ್ಕೆ ಕನ್ನಡದಲ್ಲೇ ಬರೆಯುತ್ತೇನೆ ಎಂದು ಹೇಳಿದಾಗ ಖಂಡಿತ ಬರೆಯಿರಿ, ಅದನ್ನು ತರ್ಜುಮೆ ಮಾಡೋಣ ಎಂದರು. ರಿಷಬ್ ಶೆಟ್ಟಿ ಏನು ಬರೆಯಬಹುದು ಎನ್ನುವ ಕುತೂಹಲ ಅಲ್ಲಿ ನೆರೆದಿದ್ದವರಿಗೆ ಇತ್ತು.

'ಕಾಯಕವೇ ಕೈಲಾಸ' ಎಂದ ರಿಷಬ್
2023ರ ಅಜೆಂಡಾ ಏನು ಎಂದಾಗ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಬರೆಯುತ್ತಾರೆ. ಅಥವಾ ಯಾವುದಾದರೂ ಪ್ರಶಸ್ತಿ ಬಗ್ಗೆ ಬರೆಯುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ರಿಷಬ್ ಶೆಟ್ಟಿ 'ಕಾಯಕವೇ ಕೈಲಾಸ' ಎಂದು ಬಸವಣ್ಣನವರ ಮಂತ್ರವನ್ನು ಸಾರಿ ಹೇಳಿದ್ದಾರೆ. ಇದನ್ನು ರಿಷಬ್ ಕನ್ನಡದಲ್ಲೇ ಬರೆದು ಹೇಳಿದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ. ಅವರ ಕನ್ನಡ ಪ್ರೀತಿಗೆ ಬಹುಪರಾಕ್ ಹೇಳುತ್ತಿದ್ದಾರೆ.

ಬಾಲಿವುಡ್ಗೆ ಹೋಗಲ್ಲ ಎಂದಿದ್ದ ರಿಷಬ್
'ಕಾಂತಾರ' ಸಿನಿಮಾ ಹಿಂದಿ ಬೆಲ್ಟ್ನಲ್ಲೂ ಸೂಪರ್ ಹಿಟ್ ಆಗಿದೆ. ಕೆಲ ದಿನಗಳ ಹಿಂದೆಯೇ ನೀವು ಬಾಲಿವುಡ್ಗೆ ಬರ್ತೀರಾ ಎನ್ನುವ ಪ್ರಶ್ನೆ ಅವರಿಗೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ್ದ ರಿಷಬ್ "ನಾನು ಇವತ್ತು ಇಲ್ಲಿ ಇರಲು ಕಾರಣ ಕನ್ನಡ ಸಿನಿಮಾ, ಕನ್ನಡ ಪ್ರೇಕ್ಷಕರು. ನನ್ನ ಆದ್ಯತೆ ಏನಿದ್ದರೂ ಕನ್ನಡಕ್ಕೆ ಮಾತ್ರ. ಸ್ಯಾಂಡಲ್ವುಡ್ ಬಿಟ್ಟು ಬೇರೆ ಕಡೆ ಬರುವುದಿಲ್ಲ" ಎಂದು ಹೇಳಿದ್ದರು.

ಮುಂದಿನ ವರ್ಷ 'ಕಾಂತಾರ'- 2 ?
ಅಭಿಮಾನಿಗಳು 'ಕಾಂತಾರ'- 2 ಸಿನಿಮಾ ಮಾಡುವಂತೆ ಪಟ್ಟುಹಿಡಿದಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. 'ಕಾಂತಾರ 2' ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದ್ದು, ಸಿನಿಮಾ ಮಾಡಲು ಅನುಮತಿ ಕೂಡ ಸಿಕ್ಕಿದೆ.


Click it and Unblock the Notifications











