ಡ್ರಗ್ಸ್ ಕೇಸ್: ಶಾರೂಖ್ ಖಾನ್ ಪುತ್ರನಿಗೆ ಶಿಕ್ಷೆ ಆಗಲ್ಲ-ಕೆಆರ್ಕೆ
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ಪ್ರಕರಣ ಈಗ ದೇಶದ ಪ್ರಮುಖ ಚರ್ಚಾ ವಿಷಯವಾಗಿದೆ. ಎನ್ಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ಆರ್ಯನ್ ಕುರಿತು ಆಘಾತಕಾರಿ ವಿಷಯಗಳು ಬಹಿರಂಗವಾಗುತ್ತಿವೆ. ಈ ಕೇಸ್ನಲ್ಲಿ ಆರ್ಯನ್ಗೆ ಜಾಮೀನು ಸಿಗುವುದು ಸದ್ಯಕ್ಕೆ ಕಷ್ಟ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇದೆಲ್ಲದರ ನಡುವೆಯೂ ಶಾರೂಖ್ ಮತ್ತು ಗೌರಿ ಖಾನ್ ದಂಪತಿ ಎಲ್ಲಾ ರೀತಿ ಪ್ರಯತ್ನ ಮಾಡಿ ತನ್ನ ಮಗನಿಗೆ ಜಾಮೀನು ಕೊಡಿಸಲು ಹರಸಾಹಸ ಪಡ್ತಿದ್ದಾರೆ.
ಇದಕ್ಕಾಗಿ ಬಾಲಿವುಡ್ ಇಂಡಸ್ಟ್ರಿಯ ಹೈ-ಪ್ರೊಫೈಲ್ ಕೇಸ್ಗಳನ್ನು ನಿಭಾಯಿಸುವ ಖ್ಯಾತ ಕ್ರಿಮಿನಲ್ ಲಾಯರ್ ಸತೀಶ್ ಮಾನೆಶಿಂಧೆ ಅವರ ಮೊರೆ ಹೋಗಿದ್ದಾರೆ ಬಾದ್ಶಾ. ಸದ್ಯಕ್ಕೆ ನ್ಯಾಯಾಲಯ ಆರ್ಯನ್ ಖಾನ್ಗೆ ಅಕ್ಟೋಬರ್ 7ರವರೆಗೂ ಎನ್ಸಿಬಿ ಕಸ್ಟಡಿಗೆ ನೀಡಿದೆ.
ಅಷ್ಟರಲ್ಲೇ ವಿವಾದಾತ್ಮಕ ವಿಮರ್ಶಕ ಎಂದೇ ಗುರುತಿಸಿಕೊಂಡಿರುವ ಕಮಲ್ ಆರ್ ಖಾನ್ (ಕೆಆರ್ಕೆ) ಆರ್ಯನ್ ಪ್ರಕರಣದ ಬಗ್ಗೆ ಅಂತಿಮ ತೀರ್ಪಿಗೆ ಬಂದು ಬಿಟ್ಟಿದ್ದಾರೆ. ಈ ಡ್ರಗ್ಸ್ ಕೇಸ್ನಲ್ಲಿ ಶಾರೂಖ್ ಪುತ್ರನಿಗೆ ಶಿಕ್ಷೆಯೇ ಆಗಲ್ಲ ಎಂದು ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ. ಇನ್ನು ಆರ್ಯನ್ ಬಂಧಿಸಲು ಎನ್ಸಿಬಿ ಅಧಿಕಾರಿ ಸಮೀರ್ ವಾಂಖಡೇ ಹೇಗೆ ಯೋಜನೆ ರೂಪಿಸಿದರು ಎಂದು ಕೆಆರ್ಕೆ ವಿಡಿಯೋ ಮಾಡುವ ಮೂಲಕ ವಿವರಿಸಿದ್ದಾರೆ. ಮುಂದೆ ಓದಿ...

ಐಷಾರಾಮಿ ಪಾರ್ಟಿಯಲ್ಲಿ ಅರೆಸ್ಟ್
ಮುಂಬೈ ಸಮುದ್ರ ತೀರಕ್ಕೆ ಸಮೀಪದಲ್ಲಿ ಐಶಾರಾಮಿ ಕ್ರೂಸ್ ಶಿಪ್ ಮೇಲೆ ಎನ್ಸಿಬಿ ಅಧಿಕಾರಿಗಳು ಶನಿವಾರ (ಅಕ್ಟೋಬರ್ 2) ದಾಳಿ ನಡೆಸಿದ್ದರು. ಈ ಸಮಯ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ಅವರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದರು. ಆರ್ಯನ್ ಖಾನ್ ಹೊರತುಪಡಿಸಿ ಇತರೆ 7 ಮಂದಿಯನ್ನು ಎನ್ಸಿಬಿ ಬಂಧಿಸಿದೆ. ವರದಿಗಳ ಪ್ರಕಾರ, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಎಂದು ಗುರುತಿಸಲಾಗಿದೆ. NDPS ಕಾಯ್ದೆ 1985ರ ಅಡಿಯಲ್ಲಿ ನಿಷೇಧಿತ ಔಷಧಿಗಳ ಬಳಕೆ, ಮಾರಾಟ ಮತ್ತು ಖರೀದಿ ಆರೋಪದಲ್ಲಿ ಈ ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಆರ್ಯನ್ ಬಂಧಿಸಲು ಪ್ಲಾನ್ ಆಗಿತ್ತು
ಕಮಲ್ ಆರ್ ಖಾನ್ ವಿವರಿಸಿರುವಂತೆ ಕ್ರೂಸ್ ಪಾರ್ಟಿಗೆ ಆರ್ಯನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಶನಿವಾರ ಶಾರೂಖ್ ಪುತ್ರ ಪಾರ್ಟಿಯಲ್ಲಿ ಭಾಗವಹಿಸುವುದು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಮೊದಲೇ ತಿಳಿದಿತ್ತು. ನಂತರ ಪಾರ್ಟಿಯಲ್ಲಿ ಆರ್ಯನ್ ಪಾಲ್ಗೊಂಡ ಮಾಹಿತಿ ಪಡೆದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕೆಆರ್ಕೆ ಹೇಳಿದ್ದಾರೆ. ಅಂದ್ಹಾಗೆ, ಈ ಕೇಸ್ನಲ್ಲಿ ಆರ್ಯನ್ ಖಾನ್ಗೆ ಯಾವುದೇ ಶಿಕ್ಷೆಯೂ ಪ್ರಕಟ ಆಗಲ್ಲ ಎಂದು ಕಮಲ್ ಆರ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್ಯನ್ಗೆ ಶಿಕ್ಷೆ ಆಗಲ್ಲ
''ಈ ಹಿಂದೆ ಬಾಲಿವುಡ್ ನಟ ಫರ್ದೀನ್ ಖಾನ್ ಕೂಡ ಡ್ರಗ್ಸ್ ಕೇಸ್ನಲ್ಲಿ ಬಂಧನ ಆಗಿದ್ದರು. ಒಂದಷ್ಟು ದಿನ ಜೈಲಿನಲ್ಲಿ ಇದ್ದರು. ಆದರೆ, ಅವರಿಗೆ ಶಿಕ್ಷೆ ಆಗಿಲ್ಲ. ಆ ವೇಳೆಗಾಗಲೇ ಪತ್ತೆಯಾಗಿದ್ದ ಡ್ರಗ್ಸ್ ಪ್ರಮಾಣ ಕಡಿಮೆಯಾಗಿತ್ತು. ಅಷ್ಟು ಕಡಿಮೆ ಪ್ರಮಾಣದ ಮಾದಕ ದ್ರವ್ಯವನ್ನು ಸಾಕ್ಷಿಯಾಗಿಸಿ ಶಿಕ್ಷೆ ನೀಡುವುದು ಕಾನೂನಿನ ಪ್ರಕಾರ ಕಷ್ಟ ಆಯಿತು. ಇನ್ನು ಫರ್ದೀನ್ ಖಾನ್ ಸಹ ನ್ಯಾಯಾಲಯದಲ್ಲಿ ಕ್ಷಮೆ ಕೇಳಿ, ಮತ್ತೊಮ್ಮೆ ಇಂತಹ ಕೆಲಸ ಮಾಡಲ್ಲ ಎಂದು ವಿನಂತಿಸಿದ್ದರು. ಬಹುಶಃ ಆರ್ಯನ್ ಕೇಸ್ನಲ್ಲೂ ಇದೇ ಆಗಲಿದೆ' ಎಂದು ಕಮಲ್ ಖಾನ್ ಭವಿಷ್ಯ ನುಡಿದಿದ್ದಾರೆ.

ಶಾರೂಖ್ ಪುತ್ರನ ಬೆಂಬಲಕ್ಕೆ ಬಾಲಿವುಡ್
ಆರ್ಯನ್ ಖಾನ್ ಪರವಾಗಿ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಬೆಂಬಲವಾಗಿ ನಿಂತಿದ್ದಾರೆ. ಆರ್ಯನ್ ಅರೆಸ್ಟ್ ಆದ ದಿನವೇ ಶಾರೂಖ್ ನಿವಾಸಕ್ಕೆ ಸಲ್ಮಾನ್ ಖಾನ್ ಭೇಟಿ ನೀಡಿದ ಧೈರ್ಯ ಹೇಳಿದರು. ಆರ್ಯನ್ ಇನ್ನು ಮಗು, ಅವನನ್ನು ಬಿಟ್ಟುಬಿಡಿ ಎಂದು ಸುನೀಲ್ ಶೆಟ್ಟಿ ಪೋಸ್ಟ್ ಹಾಕಿದರು.


Click it and Unblock the Notifications











