ಶೆರ್ಲಿನ್ ಚೋಪ್ರಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಶೆರ್ಲಿನ್ ಚೋಪ್ರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ ಕೋರ್ಟ್ ವಜಾಗೊಳಿಸಿದೆ.
ಉದ್ಯಮಿ ರಾಜ್ ಕುಂದ್ರಾ ಬಂಧನ ಹಿನ್ನೆಲೆ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಪೊಲೀಸರು ಜುಲೈ 26 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಆದರೆ, ಬಂಧನದ ಭೀತಿಯಿಂದ ನಟಿ ಶೆರ್ಲಿನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ವಾಟ್ಸಪ್ ಮೂಲಕ ಮುಂಬೈ ಪೊಲೀಸರು ಶೆರ್ಲಿನ್ ಚೋಪ್ರಾಗೆ ನೋಟಿಸ್ ಜಾರಿ ಮಾಡಿದ್ದರು.

ಶೆರ್ಲಿನ್ ಪರ ವಕೀಲರ ವಾದ ಏನಿತ್ತು?
ಶೆರ್ಲಿನ್ ಪರ ವಾದ ಮಂಡಿಸಿದ್ದ ವಕೀಲ ಸಿದ್ದೇಶ್ ಬೋರ್ಕರ್, ''ತಮ್ಮ ಕಕ್ಷಿದಾರರಿಗೆ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ಹಿಂದೆ ಇದೇ ರೀತಿ ಸಮನ್ಸ್ ನೀಡಿರುವವರನ್ನು ಸೆಕ್ಷನ್ 41ಎ ಅಡಿ ನೋಟಿಸ್ ನೀಡದೆಯೇ ರಾಜ್ ಕುಂದ್ರಾರನ್ನು ವಶಕ್ಕೆ ಪಡೆಯಲಾಗಿದೆ. ಎಫ್ಐಆರ್ನಲ್ಲಿ ಏನಿದೆ ಎನ್ನುವ ಮಾಹಿತಿ ಶೆರ್ಲಿನ್ ಅವರಿಗಿಲ್ಲ. ಅವರಿಗೆ ಎಫ್ಐಆರ್ನ ಪ್ರತಿಯನ್ನೂ ನೀಡಲಾಗಿಲ್ಲ. ಅವರ ವಿರುದ್ಧ ಇರುವ ಆರೋಪಗಳನ್ನು ವಿವರಿಸಲಾಗಿಲ್ಲ'' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಪ್ರಕರಣದ ಸಂಬಂಧ ಜಾಮೀನು ರಹಿತ ಕೆಲವೊಂದು ಆರೋಪಗಳನ್ನು ತಮ್ಮ ಮೇಲೆ ಹೊರಿಸಬಹುದು ಎನ್ನುವ ಭೀತಿಯನ್ನು ಶೆರ್ಲಿನ್ ವ್ಯಕ್ತಪಡಿಸಿದ್ದಾರೆ ಎಂದು ಶೆರ್ಲಿನ್ ಪರ ವಕೀಲ ಸಿದ್ದೇಶ್ ಬೋರ್ಕರ್ ನ್ಯಾಯಾಲಯದ ಮುಂದೆ ವಿವರಿಸಿದರು.
ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಿದ ಪೊಲೀಸರು, ''ಈ ಕೇಸ್ಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ವಿರುದ್ಧ ಮಾತನಾಡಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಸೈಬರ್ ಸೆಲ್ ಪ್ರಕರಣದಲ್ಲಿ ಅವರ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಬಂಧಿತ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಪಡೆಯಲು ಶೆರ್ಲಿನ್ ಚೋಪ್ರಾ ಹೇಳಿಕೆ ಅಗತ್ಯವಿದೆ'' ಎಂದು ತಿಳಿಸಿದ್ದಾರೆ.
ರಾಜ್ ಕುಂದ್ರಾ ಬಂಧನವಾಗಿರುವ ಕೇಸ್ನಲ್ಲಿ ನಟಿ ಶೆರ್ಲಿನ್ ಚೋಪ್ರಾ ಹೆಸರು ಅಂಟಿಕೊಂಡಿದೆ. ಈ ಸಂಬಂಧ ಮಾರ್ಚ್ನಲ್ಲಿ ಒಮ್ಮೆ ಹೇಳಿಕೆ ದಾಖಲಿಸಿದ್ದ ನಟಿ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದರು ಎಂದು ವರದಿಯಾಗಿದೆ. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದ ಶೆರ್ಲಿನ್, ''ಈ ಕೇಸ್ ಬಗ್ಗೆ ಮಾತನಾಡಬೇಕಾಗಿರುವುದು ಬಹಳಷ್ಟಿದೆ. ಆದರೆ ಪೊಲೀಸರು ತನಿಖೆ ಮಾಡುತ್ತಿರುವುದರಿಂದ ನಾನು ಹೆಚ್ಚಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನ ಹೇಳಿಕೆಯನ್ನು ಸೈಬರ್ ಪೊಲೀಸರಿಗೆ ಕೊಟ್ಟಿದ್ದೇನೆ'' ಎಂದಿದ್ದರು.


Click it and Unblock the Notifications











