ಸುಶಾಂತ್ ಸಿಂಗ್ ಕೇಸ್: ಸ್ನೇಹಿತ ಸಿದ್ಧಾರ್ಥ್ ಜಾಮೀನು ಅರ್ಜಿ ತಿರಸ್ಕಾರ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತವಾಗಿದ್ದ ಸ್ನೇಹಿತ ಸಿದ್ಧಾರ್ಥ್ ಪಿಥಾನಿ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ (NDPS-Narcotic Drugs and Psychotropic Substance) ನ್ಯಾಯಾಲಯ ತಿರಸ್ಕರಿಸಿದೆ.
ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದ ಡ್ರಗ್ಸ್ ಕೇಸ್ ಸಂಬಂಧಿತವಾಗಿ ಸಿದ್ಧಾರ್ಥ್ ಪಿಥಾನಿಯನ್ನು ಎನ್ಸಿಬಿ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ಮಾಡಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಈ ವಿಷಯವನ್ನು ಆರೋಪಿ ಪರ ವಕೀಲ ತಾರಕ್ ಸಯ್ಯದ್ ಖಚಿತಪಡಿಸಿದ್ದಾರೆ.
ಸಿದ್ಧಾರ್ಥ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ, ''ತನ್ನ ಕಕ್ಷಿದಾರ ಯಾವುದೇ ಮಾದಕ ದ್ರವ್ಯ ಸಂಬಂಧಿತ ಅಪರಾಧದಲ್ಲಿ ಭಾಗಿಯಾಗಿದ್ದನೆಂದು ತೋರಿಸಲು ಯಾವುದೇ ಪುರಾವೆಗಳಿಲ್ಲ'' ಎಂದು ವಾದಿಸಿದ್ದರು. ಇನ್ನು ಇದೇ ಕೇಸ್ನಲ್ಲಿ ಇತರೆ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಸಮಾನತೆಯ ಆಧಾರದ ಮೇಲೆ ಸಿದ್ಧಾರ್ಥ್ ಪಿಥಾನಿ ಅವರ ಬಿಡುಗಡೆಯನ್ನು ಪರಿಗಣಿಸಬೇಕು ಎಂದು ಕೋರ್ಟ್ಗೆ ಮನವಿ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆದರೂ, ಅರ್ಜಿದಾರರ ಮನವಿ ಪುರಸ್ಕರಿಸದ ನ್ಯಾಯಾಲಯ ಜಾಮೀನು ತಿರಸ್ಕರಿಸಿತು.

ಈ ಕುರಿತು ಎನ್ಸಿಬಿ (ಮಾದಕದ್ರವ್ಯ ನಿಯಂತ್ರಣ ಬ್ಯೂರೋ) ನಿರ್ದೇಶಕ ಸಮೀರ್ ವಾಂಖೆಡೆ ಸಹ ಪ್ರತಿಕ್ರಿಯಿಸಿದ್ದು, ''ಪಿಥಾನಿ ಸಲ್ಲಿಸಿದ್ದ ಅರ್ಜಿಯಲ್ಲಿ ಜಾಮೀನು ನೀಡಲು ಸೂಕ್ತ ಕಾರಣಗಳೇ ಇರಲಿಲ್ಲ. ಅದಕ್ಕೆ ಅರ್ಹತೆಯೂ ಇರಲಿಲ್ಲ. ಹಾಗಾಗಿ ಜಾಮೀನು ತಿರಸ್ಕಾರವಾಗಿದೆ'' ಎಂದು ತಿಳಿಸಿರುವುದಾಗಿ ಇ-ಟೈಮ್ಸ್ ವರದಿ ಮಾಡಿದೆ.
ಅಂದ್ಹಾಗೆ, ಮೇ 26 ರಂದು ಹೈದರಾಬಾದ್ನಲ್ಲಿ ಮುಂಬೈ ಮೂಲದ ಎನ್ಸಿಬಿ ಪೊಲೀಸರು ಸಿದ್ದಾರ್ಥ್ ಪಿಥಾನಿಯನ್ನು ಬಂಧಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಿದ್ದಾರ್ಥ್ ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದರು. ಕೊನೆಗೆ ಹೈದರಾಬಾದ್ನಲ್ಲಿ ಸೆರೆಸಿಕ್ಕಿದ್ದರು. ಬಂಧನದ ನಂತರ ಜೂನ್ ತಿಂಗಳಲ್ಲಿ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಜಾಮೀನು ತಿರಸ್ಕರಿಸಿದ್ದರೂ ಮದುವೆ ಕಾರಣಕ್ಕಾಗಿ ಹತ್ತು ದಿನಗಳ ಕಾಲ ಪೆರೋಲ್ ಆಧಾರದಲ್ಲಿ ಬಿಡುಗಡೆ ಅವಕಾಶ ನೀಡಿತ್ತು. ಆಮೇಲೆ ಜುಲೈ 2 ರಂದು ಮತ್ತೆ ಸಿದ್ದಾರ್ಥ್ ಪಿಥಾನಿ ನ್ಯಾಯಾಲಯಕ್ಕೆ ಶರಣಾಗಿದ್ದರು.

ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್ ಸಿಬಿಐಗೆ ವರ್ಗಾವಣೆ ಆಯಿತು. ಸುಶಾಂತ್ ಸಿಂಗ್ ಸಾವಿಗೂ ಮುನ್ನ ಫ್ಲ್ಯಾಟ್ನಲ್ಲಿ ನಾಲ್ಕು ಜನರು ಇದ್ದರು ಎಂಬ ಮಾಹಿತಿ ಇದೆ. ಅದರಲ್ಲಿ ಸಿದ್ಧಾರ್ಥ್ ಪಿಥಾನಿ ಸಹ ಒಬ್ಬರು. ಈ ಮೊದಲೇ ಮುಂಬೈ ಪೊಲೀಸರು, ಸಿಬಿಐ ಅಧಿಕಾರಿಗಳು ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಿದ್ದಾರ್ಥ್ ಪಿಥಾನಿಯನ್ನು ಹಲವು ಬಾರಿ ವಿಚಾರಣೆ ನಡೆಸಿದ್ದರು.
ಸುಶಾಂತ್ ಸಿಂಗ್ ಸಾವು ಬೆನ್ನತ್ತಿ ಹೋದ ಪೊಲೀಸರಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿತು. ಈ ಹಿನ್ನೆಲೆ ಎನ್ಸಿಬಿ ಪೊಲೀಸರು ಬಾಲಿವುಡ್ ಮಂದಿಯನ್ನು ಟಾರ್ಗೆಟ್ ಮಾಡಿದರು. ಡ್ರಗ್ಸ್ ಅಯಾಮದ ತನಿಖೆಗೆ ಸ್ಟಾರ್ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದರು. ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ರಿಯಾ ಚಕ್ರವರ್ತಿ, ಅರ್ಜುನ್ ರಾಂಪಲ್ ಸೇರಿದಂತೆ ಅನೇಕರನ್ನು ವಿಚಾರಣೆ ಮಾಡಲಾಯಿತು. ಈ ಕೇಸ್ನಲ್ಲಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಚಕ್ರವರ್ತಿ ಒಂದು ತಿಂಗಳು ಜೈಲಿನಲ್ಲಿದ್ದರು.


Click it and Unblock the Notifications











