'ಕಾಂತಾರ' ನೋಡಿ "ನಿಮಗೆ ತಿಳಿದಿರುವುದನ್ನು ಬರೆಯಿರಿ" ಎಂದಿದ್ಯಾಕೆ ಪೂಜಾ ಹೆಗ್ಡೆ?
'ಕಾಂತಾರ' ಚಿತ್ರಕ್ಕೆ ಭಾರತೀಯ ಚಿತ್ರರಂಗದ ಸ್ಟಾರ್ ನಟ, ನಟಿಯರು, ಸ್ಟಾರ್ ಫಿಲ್ಮ್ ಮೇಕರ್ಸ್ ಬಹುಪರಾಕ್ ಹೇಳುತ್ತಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುತ್ತಿದೆ. ಇದೀಗ ಬಹುಭಾಷಾ ನಟಿ ಪೂಜಾ ಹೆಗ್ಡೆ ಕೂಡ ಸಿನಿಮಾ ನೋಡಿ ಕೊಂಡಾಡಿದ್ದಾರೆ.
ಭಾಷೆ ಗೊತ್ತಿಲ್ಲದವರು ಕೂಡ ತೆರೆಮೇಲೆ ಕರಾವಳಿಯ ಭೂತ ಕೋಲ ನೋಡಿ ಬೆರಗಾಗಿದ್ದಾರೆ. ಈ ಆಚರಣೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕರಾವಳಿ ಭಾಗದ ಜನ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಇನ್ನು ಅಲ್ಲೇ ಹುಟ್ಟಿ ಬೆಳೆದು ಈಗ ಬೇರೆ ಬೇರೆ ಕಡೆ ಸೆಟ್ಲ್ ಆಗಿರುವವರು ಕೂಡ ಸಿನಿಮಾ ನೋಡಿ ಬಾಲ್ಯದ ದಿನಗಳಿಗೆ ಮರಳಿದ್ದಾರೆ. ಅಷ್ಟರಮಟ್ಟಿಗೆ ರಿಷಬ್ ಶೆಟ್ಟಿ ಅಂಡ್ ಟೀಮ್ ಕೆಲಸ ವರ್ಕ್ ಆಗಿದೆ. ತೆರೆಮೇಲೆ 'ಕಾಂತಾರ' ಎನ್ನುವ ಅದ್ಭುತ ಪ್ರಪಂಚ ಸೃಷ್ಟಿಸಿ ತಂಡ ಗೆದ್ದಿದೆ. ನಟಿ ಪೂಜಾ ಹೆಗ್ಡೆ ಕೂಡ ಸಿನಿಮಾ ನೋಡಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಟಿ ಪೂಜಾ ಹೆಗ್ಡೆ ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆದರೆ ಬಾಲ್ಯದ ದಿನಗಳಲ್ಲಿ ಸಾಕಷ್ಟು ಬಾರಿ ಊರಿಗೆ ಹೋಗಿ ಭೂತ ಕೋಲ ಆಚರಣೆಯನ್ನು ನೋಡಿದ್ದಾರೆ. ಹಾಗಾಗಿ ಸಿನಿಮಾ ಅವರಿಗೆ ಅದ್ಭುತ ಅನುಭವ ನೀಡಿದೆ. ಈ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

"ನಿಮಗೆ ಗೊತ್ತಿರುವುದಷ್ಟೆ ಬರೆಯಿರಿ": ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ 'ಕಾಂತಾರ' ಸಿನಿಮಾ ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. "ನಿಮಗೆ ತಿಳಿದಿರುವುದನ್ನು ಮಾತ್ರ ಬರೆಯಿರಿ. ನಿಮ್ಮ ಹೃದಯಕ್ಕೆ ಹತ್ತಿರವಾದ ಮತ್ತು ನಿಮ್ಮ ಮನಸ್ಸಿನಿಂದ ಬರುವ ಕಥೆಗಳನ್ನು ಹೇಳಿ. ಚಿತ್ರದ ಕೊನೆಯ 20 ನಿಮಿಷಗಳ ಕಾಲ ನಾನು ದಿಗ್ಭ್ರಮೆಗೊಂಡಿದ್ದೆ. ನಾನು ಸಂಪೂರ್ಣವಾಗಿ ಮೈಮರೆತಿದ್ದೆ. ರಿಷಬ್ ಶೆಟ್ಟಿ.. ಕಾಂತಾರ ನನ್ನನ್ನು ತುಂಬಾ ಇಂಪ್ರೆಸ್ ಮಾಡಿದೆ. ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಹೆಮ್ಮೆ ಎನಿಸುತ್ತಿದೆ."

ಬಾಲ್ಯದ ದಿನಗಳು ನೆನಪಾಯಿತು
"ಅಷ್ಟೇ ಅಲ್ಲ, ನಾನು ಬಾಲ್ಯದಲ್ಲಿ ಕಂಡ ಕೋಲಗಳು, ಭೂತಗಳು, ದೇವರುಗಳನ್ನು ಬೆಳ್ಳಿತೆರೆಯಲ್ಲಿ ಗೌರವಯುತವಾಗಿ ಮತ್ತು ಸುಂದರವಾಗಿ ಕಟ್ಟಿಕೊಡಲಾಗಿದೆ. ಅದ್ಬುತ ಸಿನಿಮಾ ಕೊಟ್ಟಿದ್ದೀರಿ.. ಇದೊಂದಲ್ಲ ಇನ್ನೂ ಹೆಚ್ಚು ಒಳ್ಳೆಯ ಸಿನಿಮಾ ಮಾಡಬೇಕು. ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಎಲ್ಲರೂ ಹೋಗಿ 'ಕಾಂತಾರ' ಸಿನಿಮಾ ನೋಡಿ ಎಂದು ಪೂಜಾ ಹೆಗ್ಡೆ ಬರೆದುಕೊಂಡಿದ್ದಾರೆ.

ಪ್ರಪಂಚದಾದ್ಯಂತ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್
ಸ್ಯಾಂಡಲ್ವುಡ್ ಮಾತ್ರವಲ್ಲ ಟಾಲಿವುಡ್, ಬಾಲಿವುಡ್, ಕಾಲಿವುಡ್, ಮಾಲಿವುಡ್ ಎಲ್ಲಾ ಕಡೆ 'ಕಾಂತಾರ' ಸಿನಿಮಾ ಹಾವಳಿ ಜೋರಾಗಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಮುಂಬೈನಲ್ಲೂ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇನ್ನು ಕೇರಳದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ವಿದೇಶಗಳಲ್ಲಿ ಜನ ಸಾಲುಗಟ್ಟಿ ಸಿನಿಮಾ ನೋಡುತ್ತಿದ್ದಾರೆ.

ಇಶಾ ಫೌಂಡೇಶನ್ನಲ್ಲಿ ಸಿನಿಮಾ ಪ್ರದರ್ಶನ
ಇಶಾ ಫೌಂಡೇಶನ್ ಒಳಗೆ ಯಾವುದೇ ಸಿನಿಮಾ ಪ್ರದರ್ಶನ ಮಾಡುವುದಿಲ್ಲ. ಆದರೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರಕ್ಕೆ ಆ ಗೌರವ ಸಿಕ್ಕಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಯೋಗಕೇಂದ್ರದಲ್ಲಿ ಹೊಂಬಾಳೆ ಸಂಸ್ಥೆ 'ಕಾಂತಾರ' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಈ ಹಿಂದೆ ಕಂಗನಾ ರಾಣಾವತ್ ನಿರ್ದೇಶಿಸಿ ನಟಿಸಿದ್ದ 'ಮಣಿಕರ್ಣಿಕಾ' ಚಿತ್ರಕ್ಕೆ ಅಲ್ಲಿ ಪ್ರದರ್ಶನಗೊಂಡಿತ್ತು. ಆ ನಂತರ 'ಕಾಂತಾರ' ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಧನುಷ್, ಕಾರ್ತಿ, ಕಂಗನಾ ರಾಣಾವತ್, ಅನುಷ್ಕಾ ಶೆಟ್ಟಿ, ಪ್ರಭಾಸ್ರಂತಹ ಸೂಪರ್ ಸ್ಟಾರ್ಗಳೇ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ.


Click it and Unblock the Notifications











