ಪದ್ಮಾವತಿ 'ದೀಪಿಕಾ' ರಕ್ಷೆಗೆ ನಿಂತ ನಟ ಪ್ರಕಾಶ್ ರೈ
ಸದ್ಯ ದೇಶದ ಹಾಟ್ ಟಾಪಿಕ್ ಆಗಿರುವ 'ಪದ್ಮಾವತಿ' ಸಿನಿಮಾ ವಿವಾದಕ್ಕೆ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಪ್ರಕಾಶ್ ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ರಜಪೂತ ಕರಣಿ ಸೇನೆಯ ಹೇಳಿಕೆಗೆ ರೈ ಗರಂ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾತನಾಡುವ ಮೂಲಕ 'ಪದ್ಮಾವತಿ' ಸಿನಿಮಾ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
"ಒಬ್ಬರು ಮೂಗು ಕತ್ತರಿಸಬೇಕೆನ್ನುತ್ತೀರಿ, ಮತ್ತೊಬ್ಬರು ನಟನ ತಲೆ ಕಡಿಯಬೇಕು ಎನ್ನುತ್ತೀರಿ, ಇನ್ನೊಬ್ಬರು ನಟರೊಬ್ಬರನ್ನು ಗುಂಡಿಕ್ಕಬೇಕೆನ್ನುತ್ತೀರಿ. ತೀರ್ಪುಗಾರರಿಂದ ಆಯ್ಕೆಯಾದ ಕೆಲ ಚಲನಚಿತ್ರಗಳನ್ನು ಚಿತ್ರೋತ್ಸವದಿಂದ ಕೈಬಿಡಬೇಕೆಂದು ವ್ಯವಸ್ಥೆ ಬಯಸಿದೆ. ಇಷ್ಟಾದರೂ ನಾವು 'ಅಸಹಿಷ್ಣುತೆ'ಯ ಕೃತ್ಯ ಇಲ್ಲ ಎಂಬುದನ್ನ ನಂಬಬೇಕೆಂದು ನೀವು ಬಯಸಿದ್ದೀರಿ. ಧ್ವನಿಗಳನ್ನ ಅಡಗಿಸುವ ಕಾರ್ಯ ನಡೆಯುತ್ತಿದೆ, ಭಯಭೀತಗೊಳಿಸಲಾಗುತ್ತಿದೆ'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ .

'ಪದ್ಮಾವತಿ' ಸಿನಿಮಾ ವಿವಾದ, ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ 'ರಜಪೂತ ಕರಣಿ ಸೇನಾ', ಚಿತ್ರದ ನಾಯಕಿ ದೀಪಿಕಾಳ ಮೂಗನ್ನ ಕತ್ತರಿಸಬೇಕೆಂದಿತು. ಅಷ್ಟೇ ಅಲ್ಲದೆ ನಿರ್ದೇಶಕ ಬನ್ಸಾಲಿಯ ತಲೆ ಕತ್ತರಿಸಿದರೆ '5 ಕೋಟಿ' ಬಹುಮಾನ ನೀಡುವುದಾಗಿ 'ಮೀರತ್ ನ ಕ್ಷತ್ರಿಯ ಸಮುದಾಯ' ಬೆದರಿಕೆ ಹಾಕಿದೆ. ಇದನ್ನೆಲ್ಲವನ್ನೂ ತಿಳಿದ ಪ್ರಕಾಶ್ ರೈ ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ 'ಪದ್ಮಾವತಿ' ಸಿನಿಮಾಗೆ ಸೂಚಿಸಿದ್ದಾರೆ.

ಇದೇ ಸಮಯದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆಯಾದ ರವಿ ಜಾದವ್ ಅವರ ಮರಾಠಿ ಸಿನಿಮಾ 'ನ್ಯೂಡ್' ಮತ್ತು ಸನಲ್ ಕುಮಾರ್ ನಿರ್ದೇಶನದ 'ಎಸ್.ದರ್ಗಾ' ಎರಡನ್ನೂ 48ನೇ 'ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದಿಂದ 'ವಾರ್ತಾ ಮತ್ತು ಸಚಿವಾಲಯ' ಕೈ ಬಿಟ್ಟಿದೆ ಇದರಿಂದ ನಟ ಪ್ರಕಾಶ್ ರೈ ಕೋಪಗೊಂಡಿದ್ದಾರೆ.


Click it and Unblock the Notifications











