ಪ್ರಿಯಾಂಕಾ, ಶಾಹಿದ್ ಜೋಡಿ ಬೆಂಗಳೂರಿಗೆ ಹಾಜರ್
ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಇಬ್ಬರೂ ನಿನ್ನೆ (18 ಜೂನ್ 2012) ಬೆಂಗಳೂರಿಗೆ ಆಗಮಿಸಿದ್ದರು. ಅವರೇನೂ ಲಬ್ ಬರ್ಡ್ಸ್ ಗಳಂತೆ ಬಂದಿರಲಿಲ್ಲ, ತಮ್ಮ 'ತೇರೆ ಮೇರೆ ಕಹಾನಿ' ಚಿತ್ರದ ಪ್ರಮೋಶನ್ ಗೆ ಬಂದಿದ್ದರು. ಈ ಚಿತ್ರದ ಬಗ್ಗೆ ಈ ತಾರಾಜೋಡಿ ಭಾರೀ ನಿರೀಕ್ಷೆ ಇಟ್ಟಿದ್ದಾರೆ.
ತೇರೆ ಮೇರೆ ಕಹಾನಿ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಶಾಹಿದ್ ಹಾಗೂ ಪ್ರಿಯಾಂಕಾ ಇಬ್ಬರೂ ಮುಂಬೈ ಲೋಕಲ್ ಟ್ರೇನಿನಲ್ಲಿ ಪ್ರಯಾಣಿಸಿರುವ ಸುದ್ದಿಯನ್ನು ಈಗಾಗಲೇ ಓದಿದ್ದೀರಿ. ಬರೀ ಮುಂಬೈ ಮಾತ್ರ ಸುತ್ತಾಡದೇ ದೇಶದ ಪ್ರಮುಖ ಸಿಟಿಗಳನ್ನೆಲ್ಲಾ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಹೀಗಾಗಿಯೇ ನಿನ್ನೆ ಬೆಂಗಳೂರಿಗೆ ಬಂದು ಪ್ರಚಾರ ಮಾಡಿ ಹೋಗಿದ್ದಾರೆ.
ಪ್ರಮೋಶನ್ ನಲ್ಲಿ ಭಾರೀ ಬಿಜಿಯಾಗಿರುವ ಈ ಜೋಡಿ, ಗಾರ್ಡನ್ ಸಿಟಿ ಬೆಂಗಳೂರಿಗೆ ಕಾಲಿಟ್ಟಾಗ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಬೆಂಗಳೂರಿನ ಇಂದಿರಾನಗರದ ಕ್ಲಬ್ ನಲ್ಲಿ ಈ ಸಂಬಂಧ ಫ್ಯಾಶನ್ ಶೋ ಒಂದನ್ನು ಆಯೋಜಿಸಲಾಗಿತ್ತು. ರಮೇಶ್ ದೆಂಬ್ಲಾ ಮತ್ತು ಕ್ಲಬ್ ಅಧ್ಯಕ್ಷ ಬಿ ಎನ್ ಎಸ್ ರೆಡ್ಡಿ ಇದನ್ನು ಆಯೋಜಿಸಿದ್ದು ಅದನ್ನು ಚಾರಿಟೆಬಲ್ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು.
ಪ್ರಿಯಾಂಕಾ ಮತ್ತು ಶಾಹಿದ್ ಪ್ರಮುಖ ಆಕರ್ಷಣೆಯಾಗಿದ್ದರೂ ಅಲ್ಲಿಗೆ ಬಂದಿದ್ದ 100 ಕ್ಕೂ ಹೆಚ್ಚು ಬಡ ಸ್ಲಮ್ ವಿದ್ಯಾರ್ಥಿಗಳನ್ನು ಎಲ್ಲರೂ ಗಮನಿಸಿ ಉಪಚರಿಸಿದರು. ಹಾಡುಗಳಿಗೆ ನರ್ತಿಸಿದ ಈ ತಾರಾಜೋಡಿ ಹಾಗೂ ಬಂದಿದ್ದ ಬಡ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಭಾರೀ ಪ್ರಯೋಜನ ನೀಡಿತು.
ಚಿತ್ರದ ಪ್ರಚಾರ ಕಾರ್ಯದ ಜೊತೆ ಬಡಮಕ್ಕಳ ಯೋಗಕ್ಷೇಮಕ್ಕೂ ದಾರಿದೀಪವಾದರು ಶಾಹಿದ್ ಹಾಗೂ ಪ್ರಿಯಾಂಕಾ. ಫ್ಯಾಶನ್ ಶೋ ವೇದಿಕೆಯಲ್ಲಿ ಆಕರ್ಷಕ ಬಿರುನಡಿಗೆಯಲ್ಲಿ ಮಿಂಚಿದ ಈ ಇಬ್ಬರು ನಂತರ ತಮ್ಮ ಚಿತ್ರದ ಬಗ್ಗೆ ಸಾಕಷ್ಟು ಮಾತನಾಡಿದರು. ತಮ್ಮ ಚಿತ್ರಕ್ಕೆ ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ ಎಂಬ ಖಾತ್ರಿಯೊಂದಿಗೆ ವಾಪಸ್ಸಾದರು ಪ್ರಿಯಾಂಕಾ-ಶಾಹಿದ್. (ಏಜೆನ್ಸೀಸ್)


Click it and Unblock the Notifications











