ಅಬ್ಬರದ ಆರಂಭದ ನಡುವೆ ಅಲ್ಲಲ್ಲಿ ಪ್ರತಿಭಟನೆಯ ಬಿಸಿ ಎದುರಿಸಿದ 'ಪಠಾಣ್'
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಸಿನಿಮಾ ಬಿಡುಗಡೆ ಆಗುವ ಕೆಲ ದಿನಗಳ ಮುಂಚಿನಿಂದಲೂ ಸಿನಿಮಾದ ಬಗ್ಗೆ ಕೆಲವು ಹಿಂದು ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದವು. ಅದರಲ್ಲಿಯೂ ಸಿನಿಮಾದ 'ಬೇಷರಮ್ ರಂಗ್' ಹಾಡು ಬಿಡುಗಡೆ ಆದ ಬಳಿಕವಂತೂ ಪ್ರತಿಭಟನೆ ತುಸು ಹೆಚ್ಚಾಗಿತ್ತು.
ಬಿಡುಗಡೆಗೆ ಮೊದಲಿನಿಂದಲೂ ಹಿಂದುಪರ ಸಂಘಟನೆಗಳು ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದವು, ಅಂತೆಯೇ ಇಂದು ಬಿಡುಗಡೆಯ ದಿನ ಹಲವೆಡೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ನ ಕೆಲ ಸದಸ್ಯರು 'ಪಠಾಣ್' ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡಿದ್ದು ಶಾರುಖ್ ಖಾನ್ರ ಪೋಸ್ಟರ್ ಸುಟ್ಟಿದ್ದಾರೆ. ಇನ್ನು ಕಲಬುರ್ಗಿಯಲ್ಲಿ 'ಪಠಾಣ್' ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗದ ಮೇಲೆ ಕೆಲ ಹಿಂದೂಪರ ಸಂಘಟನೆಗಳ ಸದಸ್ಯರು ಕಲ್ಲು ತೂರಾಟ ಸಹ ಮಾಡಿದ್ದಾರೆ. ಕಲ್ಲು ತೂರಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಮಾತ್ರವೇ ಅಲ್ಲದೆ ಬಿಹಾರದಲ್ಲಿಯೂ ಕೆಲವು ಕಡೆಗಳಲ್ಲಿ ಹಿಂದುಪರ ಸಂಘಟನೆಗಳು 'ಪಠಾಣ್' ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇಂದೋರ್ನಲ್ಲಿಯೂ ಸಹ ಸಿನಿಮಾದ ವಿರುದ್ದ ಪ್ರತಿಭಟನೆ ನಡೆದಿರುವ ವರದಿಯಾಗಿದೆ.
ಶಾರುಖ್ ಖಾನ್ ಕುರಿತು ಕೆಲ ಹಿಂದೂಪರ ಸಂಘಟನೆಗಳಿಗೆ ಮೊದಲಿನಿಂದಲೂ ಇರುವ ಅಸಮಧಾನ ಅವರ ಪ್ರತಿ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಹೊರಬರುವುದು ಸಾಮಾನ್ಯ. ಅಂತೆಯೇ 'ಪಠಾಣ್' ಸಿನಿಮಾದ ಸಮಯದಲ್ಲಿಯೂ ಹೊರಬಂದಿದೆ. ಆದರೆ ಇದು ಸಿನಿಮಾದ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ.
'ಪಠಾಣ್' ಸಿನಿಮಾವು ಭಾರತದ ಸೇರಿದಂತೆ ವಿಶ್ವದೆಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಮಂದಿ ಸಿನಿಮಾ ಬ್ಲಾಕ್ ಬಸ್ಟರ್ ಎನ್ನುತ್ತಿದ್ದಾರೆ. ಮೊದಲ ದಿನದ ಕಲೆಕ್ಷನ್ 50 ಕೋಟಿ ದಾಟುವ ನಿರೀಕ್ಷೆ ಇದೆ.
'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋನೆ ನಾಯಕಿ, ಜಾನ್ ಅಬ್ರಹಾಂ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್.


Click it and Unblock the Notifications











