ಪಾಕ್ ಸಿನಿಮಾದಲ್ಲಿ ನಟಿಸೋಕೆ ಸಿದ್ಧ ಎಂದ ರಣ್ಬೀರ್ ಕಪೂರ್: ನೆಟ್ಟಿಗರು ಗರಂ
ಬಾಲಿವುಡ್ ನಟ ರಣ್ಬೀರ್ ಕಪೂರ್ ಪಾಕಿಸ್ತಾನದ ಸಿನಿಮಾದಲ್ಲಿ ನಟಿಸೋಕೆ ಉತ್ಸುಕರಾಗಿರುವುದಾಗಿ ನೀಡಿರುವ ಹೇಳಿಕೆ ಕಿಡಿ ಹೊತ್ತಿಸಿದೆ. ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸೀ ಇಂಟರ್ನ್ಯಾಷನ್ ಫಿಲ್ಮ್ ಫೆಸ್ಟಿವಲ್ನಲ್ಲಿ ರಣ್ಬೀರ್ ಭಾಗಿ ಆಗಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಮನಸ್ಸಿನಲ್ಲಿರುವ ಮಾತುಗಳು ಹೇಳಿದ್ದಾರೆ. ಆದರೆ ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
'ಬ್ರಹ್ಮಾಸ್ತ್ರ' ಸಿನಿಮಾ ಸಕ್ಸಸ್ ಬೆನ್ನಲ್ಲೇ ರಣ್ಬೀರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ರಣ್ಬೀರ್ 'ಅನಿಮಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಬಾಲಿವುಡ್ ರಾಕ್ಸ್ಟಾರ್ ನೀಡಿರುವ ಅದೊಂದು ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಎದುರಿಸುವಂತಾಗಿದೆ. ಕೆಲವರು ಈ ವಿಚಾರದಲ್ಲಿ ರಣ್ಬೀರ್ ಪರ ನಿಂತಿದ್ದಾರೆ.
ಸಂವಾದದ ವೇಳೆ "ನೀವು ಪಾಕಿಸ್ತಾನದ ಚಿತ್ರದಲ್ಲಿ ನಟಿಸುತ್ತೀರಾ?" ಎನ್ನುವ ಪ್ರಶ್ನೆ ಎದುರಾಗಿದೆ. ಕೂಡಲೇ ಇದಕ್ಕೆ ಉತ್ತರಿಸಿದ ರಣ್ಬೀರ್ "ಖಂಡಿತ ನಟಿಸುತ್ತೇನೆ. ನನ್ನ ದೃಷ್ಟಿಯಲ್ಲಿ ಕಲಾವಿದರಿಗೆ ಯಾವುದೇ ಗಡಿ ಇಲ್ಲ. ಕಲೆಗೆ ಯಾವುದೇ ಬೌಂಡರಿ ಇಲ್ಲ" ಎಂದಿದ್ದಾರೆ. ಇನ್ನು ಇತ್ತೀಚೆಗೆ ಪಾಕಿಸ್ತಾನದಲ್ಲಿ ಸದ್ದು ಮಾಡಿದ 'ದಿ ಲೆಜೆಂಡ್ ಆಫ್ ಮೌಲಾನಾ ಜಾಟ್' ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ಪಾಕ್ ಚಿತ್ರದಲ್ಲಿ ನಟಿಸಲು ಸಿದ್ಧ
ಇತರ ಭಾಷೆಗಳಲ್ಲಿ ನಟಿಸಲು ಸಿದ್ಧರಿದ್ದೀರಾ? ಪ್ರಸ್ತುತ ಪಾಕಿಸ್ತಾನದ ಕಲಾವಿದರಿಗೆ ಭಾರತದಲ್ಲಿ ನಿಷೇಧವಿದೆ. ಅದೇ ರೀತಿ ಭಾರತೀಯ ಕಲಾವಿದರನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿದೆ. ಇಂತಹ ಸಮಯದಲ್ಲಿ ಸೌದಿ ಅರೇಬಿಯಾ, ಪಾಕಿಸ್ತಾನ ಸೇರಿದಂತೆ ಇತರ ದೇಶಗಳ ಪ್ರೊಡಕ್ಷನ್ ಹೌಸ್ನಲ್ಲಿ ನಟಿಸುತ್ತೀರಾ ಎನ್ನುವ ಪ್ರಶ್ನೆಗೆ "ನನಗೆ ಇಲ್ಲಿನ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ. ಸಾಧ್ಯವಾದರೇ ಇದೇ ವೇದಿಕೆಯಲ್ಲಿ ಚಿತ್ರವೊಂದಕ್ಕೆ ಸಹಿ ಮಾಡುತ್ತೇನೆ. ಕಲಾವಿದರಿಗೆ ಯಾವುದೇ ಗಡಿ ಇಲ್ಲ. ಪಾಕಿಸ್ತಾನದ ಸಿನಿಮಾದಲ್ಲೂ ನಟಿಸೋಕೆ ನಾನು ಸಿದ್ಧ" ಎಂದು ರಣ್ಬೀರ್ ಕಪೂರ್ ಹೇಳಿದ್ದಾರೆ.

ಪಾಕ್ ಕಲಾವಿದರಿಗೆ ನಿಷೇಧ
ಪುಲ್ವಾಮಾ ದಾಳಿ ಘಟನೆಯ ನಂತರ ಪಾಕಿಸ್ತಾನದ ನಟ ನಟಿಯರ ಮೇಲೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಬ್ಯಾನ್ ವಿಧಿಸಿದೆ. ಅಂದಿನಿಂದ ಪಾಕಿಸ್ತಾನದ ಕಲಾವಿದರು ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ರಣ್ಬೀರ್ ಕಪೂರ್ ನೀಡಿರುವ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.

ನೀನು- ಆಲಿಯಾ ಪಾಕ್ಗೆ ಹೋಗಿ
ಪಾಕ್ ಸಿನಿಮಾದಲ್ಲಿ ನಟಿಸೋಕೆ ಸಿದ್ಧ ಎಂದು ರಣ್ಬೀರ್ ಕಪೂರ್ ನೀಡಿರುವ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ನಿನಗೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ನೀನು ಆಲಿಯಾ ಆ ದೇಶದ ಪೌರತ್ವ ತೆಗೆದುಕೊಂಡು ಅಲ್ಲಿಗೆ ಹೋಗಿಬಿಡಿ. ಅಲ್ಲೇ ಸೆಟ್ಲ್ ಆಗಿ ಅಲ್ಲೇ ಸಿನಿಮಾಗಳನ್ನು ಮಾಡಿಕೊಂಡು ಇರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಣ್ಬೀರ್ ಪರ ನಿಂತ ಫ್ಯಾನ್ಸ್
ರಣ್ಬೀರ್ ಹೇಳಿಕೆಯಲ್ಲಿ ತಪ್ಪಿಲ್ಲ. ಕಲಾವಿದರು ನಿಜವಾಗಿಯೂ ಸಾಂಸ್ಕೃತಿಕ ರಾಯಭಾರಿಗಳು. ಅವರಿಗೆ ಯಾವುದೇ ಗಡಿ ಇಲ್ಲ. ರಣ್ಬೀರ್ ನೀಡಿದ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸಬೇಡಿ. ಕಲಾವಿದರು ಸ್ವತಂತ್ರರು. ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಇರಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











