ಪಬ್ಲಿಕ್ನಲ್ಲಿ ಲಿಪ್ಲಾಕ್: 2007ರ ಪ್ರಕರಣದಲ್ಲಿ ಮತ್ತೆ ನ್ಯಾಯಾಲಯಕ್ಕೆ ಶಿಲ್ಪಾ ಶೆಟ್ಟಿ
ಹದಿನೈದು ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟನೊಬ್ಬ ಶಿಲ್ಪಾ ಶೆಟ್ಟಿಗೆ ಬಹಿರಂಗವಾಗಿ ವೇದಿಕೆ ಮೇಲೆ ಮುತ್ತು ನೀಡಿದ್ದ ಈ ವಿಷಯ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಈ ಕುರಿತು ದೂರು ಸಹ ದಾಖಲಾಗಿತ್ತು. ಹದಿನೈದು ವರ್ಷದ ಹಿಂದಿನ ಪ್ರಕರಣ ಈ ವರ್ಷ ಮತ್ತೆ ಚರ್ಚೆ ಬಂದಿತ್ತು.
ಘಟನೆಗೆ ಸಂಬಂಧಿಸಿದಂತೆ ಆಗ ದಾಖಲಾಗಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯನ್ನು ಇದೇ ವರ್ಷಾರಂಭದಲ್ಲಿ ಮುಂಬೈ ನ್ಯಾಯಾಲಯವು ಖುಲಾಸೆ ಮಾಡಿತ್ತು. ರಿಚರ್ಡ್ ಗೇರ್ ಮುತ್ತು ಕೊಟ್ಟಾಗ ಶಿಲ್ಪಾ ಶೆಟ್ಟಿ ಪ್ರತಿಭಟಿಸಲಿಲ್ಲ ಅಥವಾ ಸ್ಪಷ್ಟವಾಗಿ ನಿರಾಕರಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ದೋಷಿ ಎನ್ನಲಾಗದು ಎಂದು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ ಮುಂಬೈನ ಮ್ಯಾಜಿಸ್ಟ್ರೇಟ್ನ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಆದರೆ ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ನಟಿ ಶಿಲ್ಪಾ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಬೇಕೆಂದು, ತಮ್ಮ ವಿರುದ್ಧ ದೂರು ನೀಡಿದವರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನಾನು ಈ ಪ್ರಕರಣದಲ್ಲ ಸಂತ್ರಸ್ಥೆ: ಶಿಲ್ಪಾ ಶೆಟ್ಟಿ
''ನಾನು ಈ ಪ್ರಕರಣದಲ್ಲ ಸಂತ್ರಸ್ಥೆಯಾಗಿದ್ದು, ನಾನೊಬ್ಬ ನಟಿಯಾಗಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಗುರಿ ಮಾಡಿ ದಾಳಿ ಮಾಡಲಾಗಿದೆ. ನಾನು ಇಷ್ಟು ವರ್ಷ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ದೂರು ದಾರರಿಂದಾಗಿ ವಿನಾ ಕಾರಣ ಸಾಕಷ್ಟು ಮಾನಸಿಕ ಒತ್ತಡ ಅನುಭವಿಸಿದ್ದೇನೆ'' ಎಂದಿದ್ದಾರೆ ಹಾಗೂ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ರದ್ದು ಮಾಡಬೇಕು ಹಾಗೂ ದೂರುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ
2007ರ ಏಪ್ರಿಲ್ 15ರಂದು ಹಾಲಿವುಡ್ ನಟ ರಿಚರ್ಡ್ ಗೇರ್ ಭಾರತಕ್ಕೆ ಬಂದಿದ್ದರು. ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವೊಂದನ್ನು ರಾಜಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಿಚರ್ಡ್ ಗೇರ್ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಹ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಿಚರ್ಡ್ ಗೇರ್ ನಡೆದುಕೊಂಡಿದ್ದ ರೀತಿ ದೊಡ್ಡ ಚರ್ಚೆಗೆ ಕಾರಣವಾಯಿತು.

ವೇದಿಕೆ ಮೇಲೆ ಮುತ್ತುಕೊಟ್ಟಿದ್ದ ಗೇರ್
ನಟ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿಯನ್ನು ವೇದಿಕೆ ಮೇಲೆಯೇ ಎಳೆದು ಮುತ್ತುಕೊಟ್ಟಿದ್ದರು. ರಿಚರ್ಡ್ನ ಮುತ್ತಿನಿಂದ ತಪ್ಪಿಸಿಕೊಳ್ಳಲು ಶಿಲ್ಪಾ ಪ್ರಯತ್ನ ಪಟ್ಟಿದ್ದರಾದರೂ ರಿಚರ್ಡ್ ಬಲವಂತವಾಗಿ ಶಿಲ್ಪಾ ಶೆಟ್ಟಿಗೆ ಮುತ್ತು ಕೊಟ್ಟಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ವಿರುದ್ಧ ಸಾರ್ವಜನಿಕ ಕೆಟ್ಟ ವರ್ತನೆ, ಅಶ್ಲೀಲತೆ ಪ್ರಕರಣ ದಾಖಲಿಸಲಾಗಿತ್ತು. ರಾಜಸ್ಥಾನ, ಉತ್ತರ ಪ್ರದೇಶ ಇನ್ನಿತರೆ ಕಡೆಗಳಲ್ಲಿ ದೂರು ದಾಖಲಾಗಿತ್ತು. ಭೋಪಾಲ್, ವಾರಣಾಸಿ, ಕಾನ್ಪುರ, ದೆಹಲಿ ಇನ್ನೂ ಹಲವೆಡೆ ಘಟನೆ ಖಂಡಿಸಿ ಪ್ರತಿಭಟನೆಗಳು ಸಹ ನಡೆದಿದ್ದವು. ಶಿಲ್ಪಾ ಹಾಗೂ ರಿಚರ್ಡ್ ಗೇರ್ ವಿರುದ್ಧ ಬಂಧನದ ವಾರೆಂಟ್ ಸಹ ಹೊರಡಿಸಲಾಗಿತ್ತು. ಬಳಿಕ ಸುಪ್ರೀಂಕೋರ್ಟ್ ವಾರೆಂಟ್ ಅನ್ನು ರದ್ದು ಪಡಿಸಿತು.

ಆರೋಪದಿಂದ ಶಿಲ್ಪಾ ಶೆಟ್ಟಿ ಖುಲಾಸೆ
ದೂರಿನಲ್ಲಿ ಹೊರಿಸಲಾಗಿರುವ ಆರೋಪಗಳ ಒಂದು ಅಂಶ ಸಹ ತೃಪ್ತಿಕರವಾಗಿಲ್ಲ. ಪ್ರಕರಣದ ತನಿಖಾ ವರದಿಯೊಂದಿಗೆ ಲಗತ್ತಿಸಲಾಗಿರುವ ಯಾವೊಂದು ದಾಖಲೆಯೂ ಸಹ ಆರೋಪಿ (ಶಿಲ್ಪಾ ಶೆಟ್ಟಿ) ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದನ್ನು ಹೇಳುತ್ತಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿ ಇದೇ ವರ್ಷದ ಜನವರಿಯಲ್ಲಿ ಶಿಲ್ಪಾ ಶೆಟ್ಟಿಯವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಗಿದೆ.


Click it and Unblock the Notifications











