ಹಿಂದಿಯಲ್ಲಿ 100 ದಿನ ಪೂರೈಸಿ 'ಕಾಂತಾರ' ದಾಖಲೆ: ಇನ್ನು ಎಲ್ಲೆಲ್ಲಿ ಸಿನಿಮಾ ಪ್ರದರ್ಶನ ಆಗ್ತಿದೆ ಗೊತ್ತಾ?
'ಕಾಂತಾರ' ಸಿನಿಮಾ ಹಿಂದಿ ವರ್ಷನ್ ಶತದಿನ ಪೂರೈಸಿದೆ. ಮುಂಬೈ, ಅಹಮದಾಬಾದ್, ದೆಹಲಿಯಲ್ಲಿ ಸಿನಿಮಾ ಇನ್ನು ಯಶಸ್ವಿಯಾಗಿ ಪ್ರದರ್ಶನವಾಗುತ್ತಲೇ ಇದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ 100 ದಿನದ ಗಡಿ ದಾಟಿದೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಟ್ವೀಟ್ ಮಾಡಿದೆ.
ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ' ಚಿತ್ರಕ್ಕೆ ಪರಭಾಷೆಗಳಲ್ಲೂ ಭಾರೀ ಬೇಡಿಕೆ ಶುರುವಾಯಿತು. ನಿಧಾನವಾಗಿ ಚಿತ್ರವನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 14ನೇ ತಾರೀಖು ಕಾಂತಾರ ಹಿಂದಿ ವರ್ಷನ್ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬಂದಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ನೋಡ ನೋಡುತ್ತಲೇ ಸಿನಿಮಾ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು.
ಬರೀ ಕನ್ನಡದಲ್ಲಿ 'ಕಾಂತಾರ' ಸಿನಿಮಾ ಬಿಡುಗಡೆ ಮಾಡಲು ರಿಷಬ್ ಶೆಟ್ಟಿ ಮನಸ್ಸು ಮಾಡಿದ್ದರು. ಕನ್ನಡದ ಕಥೆಯನ್ನು ಕನ್ನಡದಲ್ಲೇ ಎಲ್ಲರೂ ನೋಡಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡಿದರು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಹಿಂದಿ ವರ್ಷನ್ ಬಾಕ್ಸಾಫೀಸ್ನಲ್ಲಿ ತುಸು ಹೆಚ್ಚೇ ಸದ್ದು ಮಾಡಿದ್ದು ಸುಳ್ಳಲ್ಲ.
100 ದಿನ ಪೂರೈಸಿದ ಸಿನಿಮಾ
ಮುಂಬೈ ಬಾಂದ್ರಾದ ಜಿ7 ಮಲ್ಟಿಪ್ಲೆಕ್ಸ್, ದೆಹಲಿಯ ರೋಹಿಣಿ ಹಾಗೂ ಅಹಮದಾಬಾದ್ನ ಎಬಿ ಮಲ್ಟಿಪ್ಲೆಕ್ಸ್ನಲ್ಲಿ 'ಕಾಂತಾರ' ಹಿಂದಿ ವರ್ಷನ್ ಇನ್ನು ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಂದು 100 ದಿನ ಕಳೆದರೂ ಓಟಿಟಿಗೆ ಬಂದರೂ ಕೂಡ ಥಿಯೇಟರ್ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಈ ಹಿಂದೆ ಕನ್ನಡದ ಮತ್ಯಾವುದೇ ಸಿನಿಮಾ ಮಾಡದ ದಾಖಲೆಯನ್ನು 'ಕಾಂತಾರ' ಬರೆದಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಬಾಲಿವುಡ್ನಲ್ಲಿ ಕೆಜಿಎಫ್ ಸರಣಿ ಸಿನಿಮಾಗಳನ್ನು ವಿತರಣೆ ಮಾಡಿದ್ದ ಎಎ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ಕೊಂಡೊಯ್ದಿತ್ತು.

'ಕಾಂತಾರ' ಹಿಂದಿ ಮ್ಯಾಜಿಕ್
ಕರಾವಳಿ ಭಾಷೆ, ಆಚರಣೆ, ಸಂಸ್ಕೃತಿ ಆಧರಿಸಿ ಕೊಟ್ಟಿಕೊಟ್ಟಿದ್ದ 'ಕಾಂತಾರ' ಸಿನಿಮಾ ಪ್ರೇಕ್ಷಕರಿಗೆ ಮನಗೆದ್ದಿತ್ತು. ಕೊನೆಯ 20 ನಿಮಿಷ ಪ್ರೇಕ್ಷಕರಿಗೆ ದೈವಿಕ ಅನುಭವ ನೀಡಿತ್ತು. ಇದಕ್ಕು ಮುನ್ನ ಕೆಜಿಎಫ್ ಸರಣಿ ಸಿನಿಮಾಗಳು ಮಾತ್ರ ಹಿಂದಿ ಬೆಲ್ಟ್ನಲ್ಲಿ ಹೆಚ್ಚು ಸದ್ದು ಮಾಡಿದ್ದವು. ಆದರೆ 'ಕಾಂತಾರ' ಎಲ್ಲರ ನಿರೀಕ್ಷೆ ಮೀರಿ ಮ್ಯಾಜಿಕ್ ಮಾಡಿತ್ತು. ರಿಷಬ್ ಶೆಟ್ಟಿ ಯಾರು ಎಂದು ಗೊತ್ತಿಲ್ಲದವರು ಈಗ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಒಂದು ಮೀಡಿಯಂ ಬಜೆಟ್ ಸಿನಿಮಾ 400 ಕೋಟಿ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯ ಮಾತಲ್ಲ.

'ಕಾಂತಾರ' ಪ್ರೀಕ್ವೆಲ್ಗೆ ತಯಾರಿ
ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಎರಡರಲ್ಲೂ ಗೆದ್ದಿದ್ದಾರೆ. ಬರೀ ಹೀರೊ ಆದರೆ ಸಾಕು ಎಂದುಕೊಂಡು ಚಿತ್ರರಂಗಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಇದೀಗ 'ಕಾಂತಾರ- 2' ಸಿನಿಮಾ ಕಥೆ ಬರೆಯಲು ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದಿಯೇ ಚಿತ್ರತಂಡ ಪಂಜುರ್ಲಿ ದೈವದ ಹರಕೆ ತೀರಿಸಿ, ಸೀಕ್ವೆಲ್ ಮಾಡಲು ಅನುಮತಿ ಕೇಳಿತ್ತು. ಒಂದಷ್ಟು ಸಲಹೆಗಳನ್ನು ನೀಡಿ ದೈವ ಅಸ್ತು ಎಂದಿದೆ. 'ಕಾಂತಾರ- 2' ಕೂಡ ಹಿಂದಿ ಡಬ್ ಆಗಿ ತೆರೆಗಪ್ಪಳಿಸಲಿದೆ.

ಮುಂದಿನ ವರ್ಷ 'ಕಾಂತಾರ- 2' ತೆರೆಗೆ
'ಕಾಂತಾರ- 2' ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಮಾಹಿತಿ ನೀಡಿದ್ದಾರೆ. ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾ ಕಥೆ ಬರೆಯುತ್ತಿದ್ದಾರೆ. ಈ ಬಾರಿ ಕಥೆಯನ್ನು ಮುಂದುವರೆಸುವ ಬದಲು ಹಿಂದಿನ ಕಥೆಯನ್ನು ಹೇಳಲು ತೀರ್ಮಾನಿಸಿದ್ದಾರೆ. ಅಂದರೆ ಕಾಡು ಬೆಟ್ಟು ಶಿವನ ತಂದೆಯ ಕಥೆಯನ್ನು ಹೇಳುತ್ತಾರಂತೆ. ಮಳೆಗಾಲದಲ್ಲಿ ಚಿತ್ರೀಕರಣ ನಡೆಸಬೇಕಿರುವುದರಿಂದ ಜೂನ್ನಲ್ಲಿ ಸಿನಿಮಾ ಶುರುವಾಗಲಿದೆ. ಈ ಬಾರಿ ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಅದಕ್ಕಾಗಿ ರಿಷಬ್ ಶೆಟ್ಟಿ ಅಂಡ್ ಟೀಂ ಕಾರ್ಯ ಪ್ರವೃತ್ತವಾಗಿದೆ.


Click it and Unblock the Notifications











