ದೀದಿ ಆಪ್ತ, ನಟ ಮಿಥುನ್ ಚಕ್ರವರ್ತಿಯನ್ನು ತನ್ನೆಡೆ ಸೆಳೆಯುತ್ತಿದೆಯೇ ಬಿಜೆಪಿ?
ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆ ಚುನಾವಣೆ ದಿನೇ-ದಿನೇ ರಂಗೇರುತ್ತಿದೆ. ಹಾಲಿ ಸಿಎಂ ಮಮತಾ ಬ್ಯಾನರ್ಜಿಗೆ ಖಡಕ್ ಠಕ್ಕರ್ ಕೊಡುತ್ತಿದೆ ಬಿಜೆಪಿ. ದೀದಿಯನ್ನು ಸೋಲಿಸಲೇಬೇಕೆಂಬ ಪಣ ತೊಟ್ಟಿದ್ದು, ಶತಾಯಗತಾಯ ಪ್ರಯತ್ನಗಳನ್ನು ಮಾಡುತ್ತಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಸ್ಟಾರ್ ಪ್ರಚಾರಕರ ತುಸು ಕೊರತೆ ಇದೆ. ಅದರಲ್ಲಿಯೂ ಬಂಗಾಳ ಸಿನಿಮಾ ಉದ್ಯಮದ ಹಲವಾರು ಮಂದಿ ಪ್ರಮುಖರು ದೀದಿಗೆ ಬೆಂಬಲ ಸೂಚಿಸಿದ್ದಾರೆ. ಇದು ಬಿಜೆಪಿಗೆ ತುಸು ಹಿನ್ನಡೆ ತಂದಿದೆ.
ಈ ನಡುವೆ ಬಿಜೆಪಿಯು ದೊಡ್ಡ ದಾಳವನ್ನು ಚಲಾಯಿಸಿದ್ದು, ಪಶ್ಚಿಮ ಬಂಗಾಳದವರೇ ಆದ, ಬಾಲಿವುಡ್ ಹಿರಿಯ ನಟ, ಮಮತಾ ಬ್ಯಾನರ್ಜಿ ಅವರಿಗೆ ಆಪ್ತರೂ ಆಗಿರುವ ಮಿಥುನ್ ಚಕ್ರವರ್ತಿ ಅವರನ್ನು ತಮ್ಮ ಕ್ಯಾಂಪ್ ಗೆ ಎಳೆತರುವ ಪ್ರಯತ್ನ ಆರಂಭಿಸಿದಂತೆ ಕಾಣುತ್ತಿದೆ.

ನಿನ್ನೆ ಆಕಸ್ಮಿಕವಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಿಥುನ್ ಚಕ್ರವರ್ತಿ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಭಾಗವತ್ ಅವರು ಮಿಥಿನ್ ದಾ ಮನೆಯಲ್ಲಿಯೇ ಇದ್ದು ಚರ್ಚೆ ನಡೆಸಿದ್ದಾರೆ.
ಆದರೆ ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಮಿಥುನ್ ಚಕ್ರವರ್ತಿ, 'ಮೋಹನ್ ಭಾಗವತ್ ರ ಜೊತೆಗೆ ನನ್ನದು ಆಧ್ಯಾತ್ಮಿಕ ಸಂಬಂಧ. ಅವರನ್ನು ಲಖನೌನಲ್ಲಿ ಭೇಟಿಯಾದಾಗ, ಮುಂಬೈನಲ್ಲಿ ಮನೆಗೆ ಬರುವಂತೆ ಮನವಿ ಮಾಡಿದ್ದೆ, ಅಂತೆಯೇ ಅವರು ಬಂದಿದ್ದಾರೆ, ರಾಜಕೀಯ ಚರ್ಚಿಸಿಲ್ಲ' ಎಂದಿದ್ದಾರೆ ಮಿಥುನ್ ಚಕ್ರವರ್ತಿ.
Recommended Video
ನಟ ಮಿಥುನ್ ಚಕ್ರವರ್ತಿ, ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿದ್ದರು. ಈ ಹಿಂದೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಯಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆದರೆ 2016 ರಲ್ಲಿ ಆರೋಗ್ಯ ಸಮಸ್ಯೆಯ ಕಾರಣದಿಂದ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು.


Click it and Unblock the Notifications











