ಸಿನಿಮಾ ದುಡ್ಡು ಬಾಚ್ಕೊಂಡ ಮೇಲೆ ಸತ್ಯಬಿಚ್ಚಿಟ್ಟ ರಾಜಮೌಳಿ ತಂದೆ
ಕನ್ನಡದ ಸ್ವಮೇಕ್ ಚಿತ್ರವೆಂದು ಒಂದು ವೇಳೆ ಸೂಪರ್ ಹಿಟ್ ಆದ್ರೆ, ಆ ಚಿತ್ರದ ಕಥೆ ಬೇರೆ ಚಿತ್ರದಿಂದ ಸ್ಪೂರ್ತಿ ಪಡೆದಿತ್ತಾ, ಚಿತ್ರದ ಸನ್ನಿವೇಶ ಬೇರೆ ಚಿತ್ರದಿಂದ ಕಾಪಿ ಮಾಡಲಾಗಿತ್ತಾ, ಹಾಡಿನ ಟ್ಯೂನ್ ಅನ್ನು ಬೇರೆ ಚಿತ್ರದಿಂದ ಕದಿಯಲಾಗಿತ್ತಾ ಅನ್ನೋ 'ಸಂಶೋಧನೆ' ಕನ್ನಡ ಸಿನಿಪ್ರೇಮಿಗಳಿಂದಲೇ ನಡೆಯುತ್ತಿರುತ್ತದೆ.
ಸ್ವಮೇಕ್, ರಿಮೇಕ್ ಚಿತ್ರವೆಂದು ಕನ್ನಡದ ಪ್ರೇಕ್ಷಕರು ತಲೆಕೆಡಿಸಿಕೊಂಡಷ್ಟು ಬೇರೆ ಭಾಷೆಯ ಚಿತ್ರ ಪ್ರೇಮಿಗಳು ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡ ಉದಾಹರಣೆಗಳು ಕಮ್ಮಿ. ಹಾಗಂತ, ರಿಮೇಕ್ ಚಿತ್ರವನ್ನು ಈ ಲೇಖನದಲ್ಲಿ ಸಮರ್ಥಿಸಿಕೊಳ್ಳುವ ಕೆಲಸವೇನೂ ಮಾಡುತ್ತಿಲ್ಲ. (ಬಾಹುಬಲಿ ವಿಮರ್ಶೆ)
ಬಾಲಿವುಡ್ ಬಾಕ್ಸಾಫೀಸ್ ಕಿಂಗ್ ಸಲ್ಮಾನ್ ಖಾನ್ ನಟಿಸಿರುವ ಇತ್ತೀಚಿನ ಹತ್ತು ಚಿತ್ರಗಳಲ್ಲಿ ಬಹುತೇಕ ರಿಮೇಕ್ ಚಿತ್ರಗಳೇ.
ಬಹುತೇಕ ಎಲ್ಲಾ ಚಿತ್ರಗಳೂ ನಿರ್ಮಾಪಕರಿಗೆ ಮತ್ತು ಹಂಚಿಕೆದಾರರಿಗೆ ಭರ್ಜರಿ ಜೋಳಿಗೆ ತುಂಬಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಸಲ್ಮಾನ್ ಖಾನ್ ಮಿನಿಮಮ್ ಗ್ಯಾರಂಟಿ ನಟ ಅನ್ನೋ ವಿಚಾರ ಗೊತ್ತಿದ್ದರೂ ಚಿತ್ರ ಬಿಡುಗಡೆಯಾಗಿ ಇವತ್ತಿನ ವರೆಗೆ ಸುಮಾರು ನೂರೈವೈತ್ತು ಕೋಟಿಗೂ ಹೆಚ್ಚು ಬಾಚಿಕೊಂಡ ನಂತರ ರಮ್ಜಾನಿಗೆ ಬಿಡುಗಡೆಯಾದ 'ಭಜರಂಗಿ ಭಾಯ್ ಜಾನ್' ಚಿತ್ರದ ಕಥೆಯ ಬಗ್ಗೆ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ತಂದೆ ಬಾಯ್ಬಿಟ್ಟಿದ್ದಾರೆ. (ಭಜರಂಗಿ ಭಾಯ್ ಜಾನ್ ವಿಮರ್ಶೆ)

ಬಾಹುಬಲಿ ಚಿತ್ರಕ್ಕೂ ಇವರದ್ದೇ ಕಥೆ
ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ ಚಿತ್ರಕ್ಕೆ ರಾಜಮೌಳಿ ತಂದೆ ವಿ ವಿಜೇಂದ್ರ ಪ್ರಸಾದ್ ಕಥೆ ನೀಡಿದ್ದರು. ಬಾಹುಬಲಿ ಚಿತ್ರದ ಕಥೆ ರಾಜ್ ಅಭಿನಯದ ಮಯೂರ ಚಿತ್ರದಿಂದ ಸ್ಪೂರ್ತಿ ಪಡೆದಿತ್ತೆಂದು ಸುದ್ದಿಯಾಗಿತ್ತು.

ವಿಜೇಂದ್ರ ಪ್ರಸಾದ್ ಸ್ಪಷ್ಟನೆ
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್ ಜಾನ್ ಚಿತ್ರಕ್ಕೂ ಕಥೆ ನೀಡಿದವರು ವಿಜೇಂದ್ರ ಪ್ರಸಾದ್. ತಾನು ಕಥೆ ನೀಡಿದ್ದ ಎರಡೂ ಚಿತ್ರಗಳು ಜನಮನ್ನಣೆ ಗಳಿಸಿತ್ತಿರುವುದಕ್ಕೆ ಪ್ರಸಾದ್ ಸಂತೋಷ ವ್ಯಕ್ತ ಪಡಿಸುವುದರ ಜೊತೆಗೆ ಇನ್ನೊಂದು ವಿಚಾರವನ್ನೂ ಹೇಳಿದ್ದಾರೆ, ಮುಂದಿನ ಸ್ಲೈಡ್ ಕ್ಲಿಕ್ಕಿಸಿ.

ಭಜರಂಗಿ ಭಾಯ್ ಜಾನ್
ರಾಕ್ಲೈನ್ ವೆಂಕಟೇಶ್ ಸಹ ನಿರ್ಮಾಣದ ಭಜರಂಗಿ ಭಾಯ್ ಜಾನ್ ಚಿತ್ರದ ಕಥೆ ಈ ಹಿಂದೆ ಬಿಡುಗಡೆಯಾಗಿದ್ದ ಚಿರಂಜೀವಿ ಅಭಿನಯದ ತೆಲುಗು 'ಪಸಿವಾಡಿ ಪ್ರಾಣಂ' ಚಿತ್ರದಿಂದ ಸ್ಪೂರ್ತಿ ಪಡೆದಿದ್ದು ಎನ್ನುವ ವಿಷಯವನ್ನು ವಿಜೇಂದ್ರ ಪ್ರಸಾದ್ ಹೇಳುವ ಮೂಲಕ ಭಜರಂಗಿ ಭಾಯ್ ಜಾನ್ ಚಿತ್ರದ ಕಥೆಯ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಪಸಿವಾಡಿ ಪ್ರಾಣಂ
ಈ ಚಿತ್ರ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ವೃತ್ತಿ ಜೀವನಕ್ಕೆ ಬಹುದೊಡ್ಡ ಬ್ರೇಕ್ ನೀಡಿದ ಚಿತ್ರ. 1987ರಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಅಂತಿಮ ರೂಪ ನೀಡಿ, ಜೊತೆಗೆ ಪಾಕಿಸ್ತಾನದ ದಂಪತಿಗಳು ಮಗಳ ಹೃದಯ ಶಸ್ತ್ರಚಿಕಿತ್ಸೆಗೆ ಭಾರತಕ್ಕೆ ಬರುವ ನೈಜ ಕಥೆಯ ಟಚ್ ನೀಡಿ ಭಜರಂಗಿ ಭಾಯ್ ಜಾನ್ ಚಿತ್ರಕ್ಕೆ ಕಥೆ ನೀಡಿದ್ದೇನೆಂದು ವಿಜೇಂದ್ರ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ಮಗನ ಬಗ್ಗೆ
ಬಾಹುಬಲಿ ಚಿತ್ರದ ಯಶಸ್ಸು ಬರೀ ಒಂದು ಭಾಷೆಗೆ ಸೀಮಿತವಾಗಿಲ್ಲ. ಇದೊಂದು ಭಾರತೀಯ ಸಿನಿಮಾರಂಗದ ಐತಿಹಾಸಿಕ ಮೈಲಿಗಲ್ಲು. ರಾಜಮೌಳಿ ಚಿತ್ರಕ್ಕೆ ಬಂದ ಸಕ್ಸಸ್ ಅನ್ನು ಎಲ್ಲಾ ಭಾಷೆಯವರು ಆಚರಿಸಬೇಕೆಂದು ವಿಜೇಂದ್ರ ಪ್ರಸಾದ್ ಹೇಳಿದ್ದಾರೆ.


Click it and Unblock the Notifications











