ಕೊಲೆ ಬೆದರಿಕೆ: ಯಾರ ಮೇಲೂ ಅನುಮಾನವಿಲ್ಲ ಎಂದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಪತ್ರ ಬಂದಿರುವ ಪ್ರಕರಣ ಗಂಭೀರವಾಗಿದ್ದು, ಮುಂಬೈ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಕೊಲೆ ಬೆದರಿಕೆ ಪತ್ರವು ಮುಂಬೈನ ಬ್ಯಾಂಡ್ರಾ ಸ್ಟಾಂಡ್ ಬಳಿಯ ಪಾರ್ಕ್ನಲ್ಲಿ ದೊರಕಿದೆ. ಸಲ್ಮಾನ್ ಖಾಣ್ರ ತಂದೆ ಸಲೀಂ ಖಾನ್, ಪ್ರತಿದಿನವೂ ಬ್ಯಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಒಂದು ಕಲ್ಲು ಬೇಂಚಿನ ಮೇಲೆ ಕೂರುತ್ತಾರೆ. ಭಾನುವಾರ ಎಂದಿನಂತೆ ಜಾಗಿಂಗ್ ಮುಗಿಸಿ ಅದೇ ಕಲ್ಲು ಬೇಂಚಿನ ಮೇಲೆ ಕೂತಾಗ ಪಕ್ಕದಲ್ಲಿಯೇ ಇದ್ದ ಈ ಪತ್ರ ಸಿಕ್ಕಿದೆ. ಪತ್ರದ ಮೇಲೆ ಸಲ್ಮಾನ್ ಖಾನ್ ಎಂದು ಬರೆದಿದ್ದ ಕಾರಣ ಸಲೀಂ ಖಾನ್ ಆ ಪತ್ರವನ್ನು ತೆಗೆದು ಓದಿದ್ದಾರೆ. ಪತ್ರದಲ್ಲಿ, ''ಸಲ್ಮಾನ್ ಖಾನ್ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆಯಲಾಗಿತ್ತು. ಪತ್ರದಲ್ಲಿ 'ಎಲ್.ಬಿ' ಹಾಗೂ 'ಜಿ.ಬಿ' ಎಂಬ ಅಕ್ಷರಗಳನ್ನು ಸಹ ಬರೆಯಲಾಗಿತ್ತು. ಎಲ್.ಬಿ ಎಂದರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಜಿಬಿ ಎಂದರೆ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಗ್ಯಾಂಗ್ಸ್ಟರ್ಗಳಾಗಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರವ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರಿಗೆ ಹೇಳಿಕೆ ನೀಡಿರುವ ಸಲ್ಮಾನ್ ಖಾನ್, ''ನನಗೆ ಯಾರೂ ವೈಯಕ್ತಿಕವಾಗಿ ಬೆದರಿಕೆ ಹಾಕಿಲ್ಲ. ಆ ಪತ್ರ ಸಹ ನನ್ನ ತಂದೆಯವರಿಗೆ ಸಿಕ್ಕಿದೆ, ನನಗಲ್ಲ. ನನಗೆ ಯಾರೊಂದಿಗೂ ವೈರತ್ವ ಇಲ್ಲ. ಅಲ್ಲದೆ, ನನಗೆ ಆರ ಮೇಲೂ ಅನುಮಾನ ಸಹ ಇಲ್ಲ'' ಎಂದಿದ್ದಾರೆ.

ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಬೆದರಿಕೆ ಪತ್ರ ದೊರಕಿದ ದಿನ ಸಲೀಂ ಖಾನ್ ಜೊತೆಗಿದ್ದ ಇಬ್ಬರು ಬಾಡಿಗಾರ್ಡ್ಗಳನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿ, ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಜೊತೆಗೆ, ಒಂದು ದಶಕದಿಂದಲೂ ಸಲ್ಮಾನ್ ಖಾನ್ ವಿರುದ್ಧ ಹಗೆತನ ಸಾಧಿಸುತ್ತಿರುವ ಲಾರೆನ್ಸ್ ಬಿಷ್ಣೋಯಿಯನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆದರಿಕೆ ಪತ್ರದಲ್ಲಿ ಎಲ್ಬಿ ಎಂದಿದ್ದ ಕಾರಣ ಈ ಕೃತ್ಯ ಲಾರೆನ್ಸ್ ಬಿಷ್ಣೋಯಿ ಸಹಚರರದ್ದೇ ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಬೆದರಿಕೆ ಪತ್ರ ದೊರೆತ ಪ್ರದೇಶದ ಸುತ್ತ ಮುತ್ತ ಇರುವ ಸುಮಾರು 200 ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆಯ ಹತ್ಯೆ ನಡೆದಿತ್ತು. ಆ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಕೈವಾಡ ಇದೆ ಎನ್ನಲಾಗುತ್ತಿದೆ. ಗೋಲ್ಡಿ ಬ್ರಾರ್ ತಾವೇ ಸಿಧು ಮೂಸೆಯನ್ನು ಕೊಲ್ಲಿಸಿರುವುದಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಲಾರೆನ್ಸ್ ಬಿಷ್ಣೋಯಿಯ ಸಹೋದರ ಸಚಿನ್ ಬಿಷ್ಣೋಯಿ, ತಾನೇ ತನ್ನ ಕೈಯಾರೆ ಸಿಧು ಮೂಸೆಯನ್ನು ಕೊಂದಿರುವುದಾಗಿ ಮಾಧ್ಯಮಗಳ ಬಳಿ ಹೇಳಿದ್ದಾನೆ.


Click it and Unblock the Notifications











