ಬೆದರಿಕೆ ಹಿನ್ನೆಲೆ ಕಾರಿನ ಗಾಜು ಬದಲಿಸಿದ ಸಲ್ಮಾನ್ ಖಾನ್!
ನಟ ಸಲ್ಮಾನ್ ಖಾನ್ಗೆ ಭೂಗತ ಲೋಕದ ಪಾತಕಿಗಳು ಬೆದರಿಕೆ ಹಾಕಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ವತಃ ಸಲ್ಮಾನ್ ಖಾನ್ ಸಹ ಈ ಪ್ರಕರಣವನ್ನು ಈ ಬಗ್ಗೆ ಜಾಗೃತೆಯಾಗಿದ್ದಾರೆ.
ಭೂಗತ ಪಾತಕಿಗಳಾದ ಲಾರೆನ್ಸ್ ಬಿಶ್ಣೋಯಿ ಮತ್ತು ಗೋಲ್ಡಿ ಬ್ರಾರ್ ಸಹೋದರರು ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಪೊಲೀಸರು ಈಗಾಗಲೇ ಲಾರೆನ್ಸ್ ಬಿಶ್ಣೋಯಿಯ ವಿಚಾರಣೆ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಬಂದ ಬೆನ್ನಲ್ಲೆ ಸಲ್ಮಾನ್ ನಿವಾಸಕ್ಕೆ, ಕುಟುಂಬಕ್ಕೆ ಹಾಗೂ ಸ್ವತಃ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚು ಮಾಡಲಾಗಿದೆ. ಇದೇ ವಿಷಯವಾಗಿ ಜುಲೈ 23 ರಂದು ಸಲ್ಮಾನ್ ಖಾನ್, ಮುಂಬೈ ಪೊಲೀಸ್ ಜಂಟಿ ಆಯುಕ್ತರನ್ನು ಭೇಟಿಯಾಗಿದ್ದು, ಸ್ವಯಂ ರಕ್ಷಣೆಗೆ ಬಂದೂಕು ಬೇಕೆಂದು ಪರವಾನಗಿಗೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ಸಲ್ಮಾನ್ ಖಾನ್ಗೆ ಬಂದೂಕು ಲೈಸೆನ್ಸ್ ಸಹ ದೊರೆತಿದೆ.

ಬುಲೆಟ್ ಪ್ರೂಫ್ ಗಾಜು
ಬಂದೂಕು ಪರವಾನಗಿ ಪಡೆದಿದ್ದು ಮಾತ್ರವೇ ಅಲ್ಲದೆ ಈಗ ಇನ್ನಷ್ಟು ಭದ್ರತಾ ವಿಷಯಗಳ ಬಗ್ಗೆ ಸಲ್ಮಾನ್ ಖಾನ್ ಗಮನ ವಹಿಸಿದ್ದು, ತಮ್ಮ ಕಾರಿನಲ್ಲೂ ಕೆಲ ಬದಲಾವಣೆ ಮಾಡುತ್ತಿದ್ದಾರೆ. ತಾವು ಹೆಚ್ಚಾಗಿ ಓಡಾಡುವ ಕಾರುಗಳ ಗಾಜುಗಳನ್ನು ತೆಗೆಸಿ ಬುಲೆಟ್ ಪ್ರೂಫ್ ಗಾಜುಗಳನ್ನು ಹಾಕಿಸಿದ್ದಾರೆ. ಅದು ಮಾತ್ರವೇ ಅಲ್ಲದೆ ಇನ್ನಷ್ಟು ಅಪ್ಗ್ರೇಡ್ಗಳನ್ನು ಸಲ್ಮಾನ್ ಖಾನ್ ತಮ್ಮ ಕಾರಿಗೆ ಮಾಡಿಸಿದ್ದಾರೆ.

ಬುಲೆಟ್ ಪ್ರೂಫ್ ಗಾಜು ಹಾಗೂ ಆರ್ಮರ್
ಇಂದು (ಆಗಸ್ಟ್ 02) ರಂದು ಮುಂಬೈ ಎರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಸಲ್ಮಾನ್ ಖಾನ್ ಅಲ್ಲಿಂದ ತಮ್ಮ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಮನೆಗೆ ಹೊರಟರು. ಆ ಕಾರಿನ ಎಲ್ಲ ಕಿಟಕಿಗಳಿಗೆ ಹೊಸದಾದ ಬುಲೆಟ್ ಪ್ರೂಫ್ ಗಾಜುಗಳು ಅಳವಡಿಸಿರುವ ಜೊತೆಗೆ ಆರ್ಮರ್ ಅನ್ನೂ ಸಹ ಅಳವಡಿಸಿದ್ದಾರೆ. ಜೊತೆಗೆ ಒಳಾಂಗಣದಲ್ಲೂ ಕೆಲವು ವಿನ್ಯಾಸಗಳನ್ನು ಮಾಡಿಸಲಾಗಿದೆ. ಈ ಒಂದು ಕಾರಿಗೆ ಮಾತ್ರವೇ ಅಲ್ಲದೆ ಸಲ್ಮಾನ್ ಬಳಸುವ ಇತರ ಕಾರುಗಳಿಗೂ ಈ ರೀತಿ ಭದ್ರತಾ ವಸ್ತಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿಯೇ ಸುಮಾರು 1.50 ಕೋಟಿ ರುಪಾಯಿಯನ್ನು ಸಲ್ಮಾನ್ ಖಾನ್ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ಗೆ ಬಂದೂಕು ಪರವಾನಗಿ
ಸಲ್ಮಾನ್ ಖಾನ್ಗೆ ಬಂದೂಕು ಇರಿಸಿಕೊಳ್ಳಲು ಹಾಗೂ ಅವಶ್ಯಕತೆ ಬಂದಾಗ ಷರತ್ತುಗಳಿಗೊಳಪಟ್ಟು ಬಳಸಲು ಮುಂಬೈ ಪೊಲೀಸರು ಇತ್ತೀಚೆಗಷ್ಟೆ ಪರವಾನಗಿ ನೀಡಿದ್ದಾರೆ. ಜೀವ ಬೆದರಿಕೆ ಬಂದ ಕೆಲವು ದಿನಗಳ ಬಳಿಕ ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಪಾನ್ಸಲ್ಕರ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ಕೆಲವು ಷರತ್ತುಗಳನ್ನು ವಿಧಿಸಿ ಸಲ್ಮಾನ್ ಖಾನ್ಗೆ ಪರವಾನಗಿ ನೀಡಲಾಗಿದೆ. ಈ ಹಿಂದೆಯೂ ಸಲ್ಮಾನ್ ಖಾನ್ ಬಳಿ ಬಂದೂಕಿತ್ತು. ಆದರೆ ಅವರ ವಿರುದ್ಧ ಕುಡಿದು ವಾಹನ ಚಾಲನೆ, ಕೃಷ್ಣಮೃಗ ಭೇಟೆಯಂತಹಾ ಕ್ರಿಮಿನಲ್ ಪ್ರಕರಣಗಳು ದಾಖಲಾದ ಬಳಿಕ ಪರವಾನಗಿ ರದ್ದು ಮಾಡಲಾಗಿತ್ತು.

ಸಲ್ಮಾನ್ ಖಾನ್ ಕೊಲ್ಲಲು ಅತ್ಯಾಧುನಿಕ ಗನ್ ಖರೀದಿ!
ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣದ ಬೆನ್ನತ್ತಿರುವ ಮುಂಬೈ ಪೊಲೀಸರಿಗೆ ಕೆಲವು ಆಘಾತ ಸಂಗತಿಗಳು ಎದುರಾಗಿವೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ವಿಫಲ ಯತ್ನಗಳನ್ನು ಮಾಡಿದ್ದಾಗಿ ಸ್ವತಃ ಆರೋಪಿ ಲಾರೆನ್ಸ್ ಬಿಶ್ಣೋಯಿ ಒಪ್ಪಿಕೊಂಡಿದ್ದಾನೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ನಾಲ್ಕು ಲಕ್ಷ ರುಪಾಯಿ ಬೆಲೆಯ ಅತ್ಯಾಧುನಿಕ ಆರ್ಕೆ ಸ್ಟ್ರಿಂಗ್ ಬಂದೂಕನ್ನು ಖರೀದಿಸಿರುವ ಅಂಶವೂ ಬೆಳಕಿಗೆ ಬಂದಿದೆ. ಜೊತೆಗೆ 2010ರಲ್ಲಿಯೇ 'ರೆಡಿ' ಸಿನಿಮಾದ ಶೂಟಿಂಗ್ ವೇಳೆಯೂ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿ ವಿಫಲವಾಗಿತ್ತಂತೆ ಒಂದು ಗ್ಯಾಂಗ್.


Click it and Unblock the Notifications











