ದುಬೈ ಜನರ ಪರ ಶಾರುಖ್ ಖಾನ್ ಕಾಳಜಿ: ವಿವಾದ ಎಬ್ಬಿಸಿದ ವಿಡಿಯೋ
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ವಿಡಿಯೋ ಒಂದು ಸಣ್ಣಗೆ ವಿವಾದ ಎಬ್ಬಿಸುತ್ತಿದೆ. ಕೊರೊನಾ ಸಮಯದಲ್ಲಿ ಅನಗತ್ಯ ವಿವಾದವೊಂದು ಶಾರುಖ್ ಬೆನ್ನಿಗೆ ಬಿದ್ದಂತೆ ತೋರುತ್ತಿದೆ.
ಕೊರೊನಾ ಸಮಯದಲ್ಲಿ ಬಹುತೇಕ ಸಿನಿ ನಟರು ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಿದ್ದಾರೆ. ಸಣ್ಣ-ಪುಟ್ಟ ನಟರೂ ಸಹ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಜನರು ಎಚ್ಚರಿಕೆಯಿಂದಿರುವಂತೆ ಮನವಿ ಮಾಡುತ್ತಿದ್ದಾರೆ.
ಬಾಲಿವುಡ್ ಬಾದ್ಶಾ, ವಿದೇಶಗಳಲ್ಲೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಸಹ ಜನರಿಗೆ ಕೊರೊನಾದಿಂದ ಸುರಕ್ಷತೆಯಿಂದ ಇರುವಂತೆ ಹೇಳಿದ್ದಾರೆ. ಆದರೆ ದುಬೈ ನಲ್ಲಿರುವ ಜನರಿಗೆ!

ದುಬೈ ಜನರಿಗಾಗಿ ವಿಡಿಯೋ ಮಾಡಿರುವ ಶಾರುಖ್
ಹೌದು, ಶಾರುಖ್ ಖಾನ್ ಅವರು ವಿಡಿಯೋ ಒಂದನ್ನು ಮಾಡಿದ್ದು, ಅದರಲ್ಲಿ ದುಬೈ ನಲ್ಲಿರುವ ಜನರು ಸುರಕ್ಷಿತವಾಗಿರಿ, ಮನೆಗಳಲ್ಲೇ ಇರು, ಬೀಚ್ ಗೆ ಹೋಗಬೇಡಿ, ಪಕ್ಕದ ಮನೆಯವರೊಂದಿಗೂ ಬೆರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋ ವಿವಾದ ಎಬ್ಬಿಸಿದೆ.

''ಭಾರತೀಯರನ್ನುದ್ದೇಶಿಸಿ ಒಂದೂ ವಿಡಿಯೋ ಹಾಕಿಲ್ಲ''
ಭಾರತದಲ್ಲಿ ವಾಸವಿರುವ ಶಾರುಖ್ ಖಾನ್ ಭಾರತದ ಜನರ ಸುರಕ್ಷತೆ ಕುರಿತು ಒಂದೂ ವಿಡಿಯೋ ಹಾಕಿಲ್ಲ. ಕೋವಿಡ್ 19 ವಿರುದ್ಧ ಹೋರಾಡಲು ಹಣಕಾಸಿನ ನೆರವು ಸಹ ನೀಡಿಲ್ಲ, ಆದರೆ ದುಬೈ ಜನಗಳ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮದ ನಂಟು ಸಹ ಸೇರಿಬಿಟ್ಟಿದೆ
ಇನ್ನು ಕೆಲವರು ಇದಕ್ಕೆ ಧರ್ಮದ ನಂಟು ಸಹ ಕಲ್ಪಿಸಿದ್ದು, ''ಮುಸ್ಲಿಂ ಧರ್ಮದವರಾದ ಶಾರುಖ್ ಖಾನ್, ಮುಸ್ಲಿಂ ರಾಷ್ಟ್ರ ದುಬೈ ಜನರ ಬಗ್ಗೆ ಕಾಳಜಿ ತೋರಿದ್ದಾರೆ. ಹಿಂದೂ ರಾಷ್ಟ್ರ ಭಾರತದ ಬಗ್ಗೆ ಅವರಿಗೆ ಪ್ರೀತಿ ಇಲ್ಲ'' ಎಂದು ಧರ್ಮವನ್ನು ಎಳೆದು ತಂದಿದ್ದಾರೆ.

ಇನ್ನೂ ಹಣ ಸಹಾಯ ಮಾಡಿಲ್ಲ ಶಾರುಖ್ ಖಾನ್
ಬಾಲಿವುಡ್ನ ಹಲವು ನಟರು ಲಕ್ಷಾಂತರ, ಕೋಟ್ಯಂತರ ಹಣವನ್ನು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ನೀಡುತ್ತಿದ್ದಾರೆ. ಆದರೆ ಶಾರುಖ್ ಖಾನ್ ಈ ವರೆಗೆ ಯಾವುದೇ ಹಣ ಸಹಾಯ ನೀಡಿಲ್ಲ, ಹಾಗೂ ಕೊರೊನಾ ಬಗ್ಗೆ ಈ ವರೆಗೆ ಮಾತನಾಡಿಲ್ಲ. ಇದು ಸಹ ಈಗ ಎದ್ದಿರುವ ವಿವಾದಕ್ಕೆ ತುಪ್ಪ ಸುರಿಯುತ್ತಿದೆ.

ಆಗಾಗ್ಗೆ ಇಂಥಹಾ ಆಪಾದನೆಗಳು ಸುತ್ತಿಕೊಳ್ಳುತ್ತಲೇ ಇರುತ್ತವೆ
ಶಾರುಖ್ ಖಾನ್ ಅವರನ್ನು ಇಂಥಹಾ ಆಪಾದನೆಗಳು ಸುತ್ತುವರೆಯುತ್ತಲೇ ಇರುತ್ತವೆ. ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತವೆ, ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ಶಾರುಖ್ ಖಾನ್ ಅವರು ತಮ್ಮನ್ನು ತಾವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











