ವಿಡಿಯೋ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ: ಹೇಳಿದ್ದೇನು?
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ.
ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳ 19ರಂದು ಉದ್ಯಮಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇದರಿಂದ ನಟಿ ಶಿಲ್ಪಾ ಶೆಟ್ಟಿ ಮೇಲೂ ಗುಮಾನಿಗಳು ಎದ್ದಿದ್ದವು. ಬಂಧನವಾದ ದಿನದಿಂದ ಶಿಲ್ಪಾ ಶೆಟ್ಟಿ ಪ್ರಕರಣ ಕುರಿತಾಗಿ ಒಂದು ಪೋಸ್ಟ್ ಹಾಕಿದ್ದು ಹೊರತುಪಡಿಸಿದರೆ ಬಹುತೇಕ ಮೌನವಾಗಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಅಭಿಮಾನಿಗಳೊಟ್ಟಿಗೆ ಮಾತನಾಡಿದ್ದಾರೆ.
ಒಂದು ಸದುದ್ದೇಶಕ್ಕಾಗಿಯೇ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಮುಖ ತೋರಿಸಿದ್ದಾರೆ. ಜೊತೆಗೆ ಮಾನಸಿಕ ಆರೋಗ್ಯದ ಕುರಿತು ಕೆಲವು ಸಲಹೆಗಳನ್ನು ಸಹ ಶಿಲ್ಪಾ ಶೆಟ್ಟಿ ಜನರಿಗೆ ನೀಡಿದ್ದಾರೆ.
'ವಿ ಫಾರ್ ಇಂಡಿಯಾ' ಹೆಸರಿನ ಕೋವಿಡ್ 19 ನಿಧಿ ಸಂಗ್ರಹ ಅಭಿಯಾನಕ್ಕೆ ಜೊತೆಯಾಗಿರುವ ಶಿಲ್ಪಾ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆ ದಿನ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಸಕಾರಾತ್ಮಕ ಚಿಂತನೆ ಇತರ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

ಉತ್ತಮ ಉಸಿರಾಟ, ಉತ್ತಮ ಆರೋಗ್ಯಕ್ಕೆ ದಾರಿ: ಶಿಲ್ಪಾ
''ನಾವಿಂದು ಬಹಳ ಕಷ್ಟದ ಸಮಯದಲ್ಲಿ ಬದುಕುತ್ತಿದ್ದೇವೆ. ನಾವು ಹೇಗೆ ಉಸಿರಾಡುತ್ತೇವೆ ಎಂಬುದುರ ಮೇಲೆ ನಮ್ಮ ಆರೋಗ್ಯ ನಿರ್ಭರವಾಗಿದೆ. ಒಳ್ಳೆಯ ಉಸಿರಾಟದಿಂದ ನಾವು ನಮ್ಮ ದೇಹವನ್ನು ರೋಗಾಣುಗಳಿಂದ ಕಾಪಾಡಿಕೊಳ್ಳಬಹುದು. ನಮ್ಮ ಶ್ವಾಸ ವ್ವವಸ್ಥೆ ಸದಾ ಉತ್ತಮವಾಗಿರಬೇಕು. ಇದರಿಂದ ಆಮ್ಲಜನಕ ನಮ್ಮ ಮೆದುಳಿಗೆ ಸೇರುವುದು ಸಾಧ್ಯವಾಗುತ್ತದೆ. ಇದರಿಂದಾಗಿಯೇ ಪ್ರಾಣಾಯಮ ಎಂಬುದು ಬಹಳ ಪರಿಣಾಮಕಾರಿಯಾಗಿದೆ. ಉತ್ತಮ ಆರೋಗ್ಯ ಹಾಗೂ ಧನಾತ್ಮಕ ಚಿಂತನೆಗೆ ಇದು ಸಹಾಯ ಮಾಡುತ್ತದೆ'' ಎಂದಿದ್ದಾರೆ ಶಿಲ್ಪಾ ಶೆಟ್ಟಿ.

ಕೆಟ್ಟ ಆಲೋಚನೆಗಳಿಂದ ದೂರವಿರಲು ಹೀಗೆ ಮಾಡಿ
ಮುಂದುವರೆದು, ''ಕೆಟ್ಟ ಸಮಯದಲ್ಲಿ ಕೆಟ್ಟ ಆಲೋಚನೆಗಳು ಮನದಲ್ಲಿ ಮೂಡುವುದು ಸಹಜ. ಆದರೆ ಆ ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಉತ್ತಮ ಉಚ್ವಾಸ-ನಿಶ್ವಾಸ ಅಷ್ಟೇ ಅವಶ್ಯಕ. ಹಾಗಾಗಿ ಪ್ರಾಣಾಯಾಮವು ನಿಮ್ಮ ಜೀವನದ ಮುಖ್ಯ ಭಾಗವಾಗಿರಲಿ. ಹಾಗಾಗಿಯೇ ಪ್ರಾಣಾಯಮ ಮತ್ತು ಯೋಗ ಜೀವನದ ಮುಖ್ಯ ಭಾಗವನ್ನಾಗಿ ಮಾಡಿಕೊಳ್ಳಬೇಕಿದೆ. ಪ್ರಾಣಾಯಾಮದಿಂದ ನಕಾರಾತ್ಮಕ ಆಲೋಚನೆಗಳು ದೂರವಾಗಿ ಸಕಾರಾತ್ಮಕ ಚಿಂತನೆಗಳು ಬರುತ್ತವೆ'' ಎಂದಿದ್ದಾರೆ ಶಿಲ್ಪಾ ಶೆಟ್ಟಿ.

ಕೋವಿಡ್ ಬಗ್ಗೆ ಜಾಗೃತರಾಗಿರಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ: ಶಿಲ್ಪಾ
ಕೋವಿಡ್ 19 ಬಗ್ಗೆಯೂ ಮಾತನಾಡಿರುವ ಶಿಲ್ಪಾ ಶೆಟ್ಟಿ, ''ಕೋವಿಡ್ ಎಲ್ಲರನ್ನೂ ಕಾಡುತ್ತಿದೆ. ಇದು ಬಹಳ ಕಷ್ಟದ ಸಮಯ. ಎಲ್ಲರೂ ಜಾಗೃತೆಯಾಗಿರಿ, ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕುಟುಂಬದವರಿಗೂ ವ್ಯಾಕ್ಸಿನ್ ಹಾಕಿಸಿ. ಪ್ರಾಣಾಯಾಮ ಮಾಡಿ ಅದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ'' ಎಂದಿದ್ದಾರೆ. ಶಿಲ್ಪಾ ಶೆಟ್ಟಿ ಸ್ವತಃ ಅತ್ಯುತ್ತಮ ಯೋಗ ಪಟು ಆಗಿದ್ದಾರೆ. ಕೆಲ ವರ್ಷಗಳ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅವರು ಆಗಮಿಸಿದ್ದರು.

ಮುಂಬೈ ಪೊಲೀಸರ ಆರೋಪವೇನು?
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಂದ ಜುಲೈ 19ರಂದು ಬಂಧನಕ್ಕೆ ಒಳಪಟ್ಟಿದ್ದರು. ರಾಜ್ ಕುಂದ್ರಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಕುಂದ್ರಾದ ಜಾಮೀನು ಅರ್ಜಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಲಾಗಿದೆ. ರಾಜ್ ಕುಂದ್ರಾ ನಟಿಯರ, ಮಾಡೆಲ್ಗಳ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡು ಹಾಟ್ ಶಾಟ್ಸ್ ಹೆಸರಿನ ಆಪ್ಗೆ ಲಂಡನ್ನಲ್ಲಿನ ತನ್ನ ಸಂಬಂಧಿಯ ಸಂಸ್ಥೆಯಿಂದ ಅಪ್ಲೋಡ್ ಮಾಡಿಸುತ್ತಿದ್ದರು, ಇದರಿಂದ ದಿನಕ್ಕೆ ಲಕ್ಷಾಂತರ ಹಣವನ್ನು ಅವರು ಗಳಿಸುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದಾರೆ. ರಾಜ್ ಕುಂದ್ರಾ ಬಂಧನದ ಬಳಿಕ ಕೆಲವು ನಟಿಯರು ರಾಜ್ ಕುಂದ್ರಾ ವಿರುದ್ಧ ಹಲವು ರೀತಿಯ ಆರೋಪಗಳನ್ನು ಸಹ ಮಾಡಿದ್ದಾರೆ. ರಾಜ್ ಕುಂದ್ರಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದರು ಎಂದು ಸಹ ಕೆಲವರು ಆರೋಪ ಮಾಡಿದ್ದಾರೆ. ಗೆಹನಾ ವಸಿಷ್ಠ ಹಾಗೂ ಇನ್ನು ಕೆಲವು ನಟಿಯರು ರಾಜ್ ಕುಂದ್ರಾಗೆ ಬೆಂಬಲವನ್ನೂ ನೀಡಿದ್ದಾರೆ.


Click it and Unblock the Notifications











