ದೀಪಿಕಾ ಪಡುಕೋಣೆಯನ್ನು ಹೊಗಳಿದ ಮಾಜಿ ಪ್ರಿಯಕರ
ದೀಪಿಕಾ ಪಡುಕೋಣೆ ಈಗ ಹ್ಯಾಪಿಲಿ ಮ್ಯಾರಿಡ್ ನಟಿ. ರಣ್ವೀರ್ ಸಿಂಗ್ ಜೊತೆ 2018ರಲ್ಲಿ ವಿವಾಹವಾದ ದೀಪಿಕಾ, ದಾಂಪತ್ಯ ಹಾಗೂ ನಟನೆ ಎರಡನ್ನೂ ಆರಾಮವಾಗಿ ಸಂಭಾಳಿಸುತ್ತಾ ಸಾಗುತ್ತಿದ್ದಾರೆ.
ಮದುವೆಗೆ ಮುನ್ನ ಕೆಲವು ಬಾರಿ ಹೃದಯ ಒಡೆದುಕೊಂಡಿದ್ದ ದೀಪಿಕಾ ಕೊನೆಗೆ ಹಸೆಮಣೆ ಏರಿದ್ದು ರಣ್ವೀರ್ ಸಿಂಗ್ ಜೊತೆಗೆ. ಮದುವೆಗೆ ಮುನ್ನಾ ದೀಪಿಕಾ ಪಡುಕೋಣೆ ಹೆಸರು ಕೆಲವರೊಟ್ಟಿಗೆ ಕೇಳಿಬಂದಿತ್ತು. ಆದರೆ ಅಂತಿಮವಾಗಿ ದೀಪಿಕಾ ಕೈ ಹಿಡಿದಿದ್ದು ರಣ್ವೀರ್ ಸಿಂಗ್ರನ್ನು.
ಆರಂಭದಲ್ಲಿ ದೀಪಿಕಾ ಪಡುಕೋಣೆ ಹೆಸರು ಯುವರಾಜ್ ಸಿಂಗ್ ಜೊತೆಗೆ ಕೇಳಿಬಂತು. ಆ ನಂತರ ಎಂ.ಎಸ್.ಧೋನಿ ಜೊತೆಗೂ ಕೇಳಿಬಂದಿತ್ತು. ನಟ ರಣ್ವೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪ್ರೇಮ ಕತೆ ಸರಣಿ ಮಾದರಿಯಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ದೀಪಿಕಾ ಪಡುಕೋಣೆ ಕೆಲ ಕಾಲ ಖ್ಯಾತ ಉದ್ಯಮಿ ವಿಜಯ್ ಮಲ್ಯರ ಪುತ್ರ ಸಿದ್ಧಾರ್ಥ್ ಮಲ್ಯರೊಟ್ಟಿಗೂ ಪ್ರೀತಿಯಲ್ಲಿದ್ದರು. ಇವರಿಬ್ಬರು ಬಹಿರಂಗವಾಗಿ ಪರಸ್ಪರ ಚುಂಬಿಸುತ್ತಿರುವ ವಿಡಿಯೋ ಇಂದಿಗೂ ಯೂಟ್ಯೂಬ್ನಲ್ಲಿದೆ. ಈಗ ಅಚಾನಕ್ಕಾಗಿ ಸಿದ್ಧಾರ್ಥ್ ಮಲ್ಯ ಮಾಜಿ ಗೆಳತಿ ದೀಪಿಕಾ ಪಡುಕೋಣೆಯನ್ನು ಮನಸಾರೆ ಹೊಗಳಿದ್ದಾರೆ.
ವಿದೇಶಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಿದ್ಧಾರ್ಥ್ ಮಲ್ಯ ಮಾಜಿ ಗೆಳೆತಿಯನ್ನು ಹೊಗಳಿದ್ದಾರೆ. 'ದೀಪಿಕಾ ಪಡುಕೋಣೆ ಮಾಡಿರುವ ಕಾರ್ಯ ಸ್ಪೂರ್ತಿದಾಯಕ' ಎಂದಿದ್ದಾರೆ ಸಿದ್ಧಾರ್ಥ್ ಮಲ್ಯ. ಈ ಹೊಗಳಿಕೆಯನ್ನು ದೀಪಿಕಾ ಪಡುಕೋಣೆ ಮಾಡುತ್ತಿರುವ ಸಾಮಾಜಿಕ ಸೇವೆಯ ಕುರಿತಾಗಿ ಹೇಳಿದ್ದಾರೆ ಸಿದ್ಧಾರ್ಥ್.
ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯದ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಮಾನಸಿಕ ಆರೋಗ್ಯ ಕುರಿತಂತೆ ಕೆಲಸ ಮಾಡುವ ಎನ್ಜಿಓಗಳ ಜೊತೆ ಕೈಜೋಡಿಸಿದ್ದಾರೆ. ಹಾಗೂ 'ಲಿವ್ ಲವ್ ಲಾಫ್' ಹೆಸರಿನ ತಮ್ಮದೇ ಎನ್ಜಿಓ ಸಹ ತೆರೆದಿರುವ ದೀಪಿಕಾ ಪಡುಕೋಣೆ ಮಾನಸಿಕ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತಿದ್ದಾರೆ. ಸ್ವತಃ ಖಿನ್ನತೆಗೆ ಒಳಗಾಗಿ ಸಾಕಷ್ಟು ಸಮಸ್ಯೆ ಅನುಭವಿಸಿ ಅದರಿಂದ ಹೊರಗೆ ಬಂದ ದೀಪಿಕಾ ಈಗ ಮಾನಸಿಕ ಆರೋಗ್ಯ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆಯ ಹೊಗಳಿದ ಸಿದ್ಧಾರ್ಥ್ ಮಲ್ಯ
ದೀಪಿಕಾ ಮಾಡುತ್ತಿರುವ ಕಾರ್ಯಗಳ ಬಗ್ಗೆ ಮಾತನಾಡಿರುವ ಸಿದ್ಧಾರ್ಥ್, ''ದೀಪಿಕಾ ಪಡುಕೋಣೆ ಮಾಡುತ್ತಿರುವ ಕೆಲಸ ಅದ್ಭುತವಾದುದು. ಆಕೆಯ ಜೊತೆಗೆ ಇನ್ನೂ ಕೆಲವರು ಭಾರತದಲ್ಲಿ ಮಾನಸಿಕ ಆರೋಗ್ಯದ ಕುರಿತು ಕೆಲಸ ಮಾಡುತ್ತಿದ್ದಾರೆ. ದೀಪಿಕಾ ತನ್ನ ವೇದಿಕೆಗಳನ್ನು ಬಳಸಿಕೊಂಡು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವ ಜನಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪುಸ್ತಕಗಳ ರಚನೆ, ಸಿನಿಮಾಗಳ ನಿರ್ಮಾಣ ಅಥವಾ ಅದರ ಬಗ್ಗೆ ಪಠ್ಯ ಮಾಡಿ ಮಕ್ಕಳಿಗೆ ಬೋಧಿಸುವುದು ಇಂಥಹಾ ಕಾರ್ಯಗಳು ಆಗಬೇಕಿದೆ'' ಎಂದಿದ್ದಾರೆ ಸಿದ್ಧಾರ್ಥ್.

2013-14 ಮಾನಸಿಕ ಸಮಸ್ಯೆಗೆ ಈಡಾಗಿದ್ದೆ: ಸಿದ್ಧಾರ್ಥ್ ಮಲ್ಯ
ತಾವು ಎದುರಿಸಿದ ಮಾನಸಿಕ ಸಮಸ್ಯೆ ಬಗ್ಗೆ ಮಾತನಾಡಿದ ಸಿದ್ಧಾರ್ಥ್ ಮಲ್ಯ, ''ನಾನು 2013-14 ರ ಸಮಯದಲ್ಲಿ ಮಾನಸಿಕ ಸಮಸ್ಯೆ ಎದುರಿಸಿದೆ. ಆಗ ನನಗೆ ಈ ಬಗ್ಗೆ ತುಸುವೂ ಮಾಹಿತಿ ಇರಲಿಲ್ಲ. ನನಗೆ ಸಮಸ್ಯೆ ಇದೆ ಎಂಬುದೇ ನನ್ನ ಅರಿವಿಗೆ ಬಂದಿರಲಿಲ್ಲ. ನಾನು ದೀಪಿಕಾ ಪಡುಕೋಣೆ ಜೊತೆಗಾಗಲಿ, ಇನ್ಯಾರದೇ ಜೊತೆಗಾಗಲಿ ನನ್ನ ಮಾನಸಿಕ ಸಮಸ್ಯೆ ಬಗ್ಗೆ ಮಾತನ್ನಾಡಿರಲಿಲ್ಲ'' ಎಂದಿದ್ದಾರೆ ಸಿದ್ಧಾರ್ಥ್ ಮಲ್ಯ. ಇದರ ಜೊತೆಗೆ, ಪ್ರಿಯಾಂಕಾ ಚೋಪ್ರಾ ನಟಿಸಿದ್ದ ಹಾಲಿವುಡ್ ಟಿವಿ ಶೋ 'ಕ್ವಾಂಟಿಕೊ'ಗೆ ತಾವು ಆಡಿಷನ್ ನೀಡಿದ್ದಾಗಿ ಆದರೆ ಆಯ್ಕೆ ಆಗದೇ ಇದ್ದ ಬಗ್ಗೆಯೂ ಸಿದ್ಧಾರ್ಥ್ ಮಲ್ಯ ಇದೇ ಸಂದರ್ಶನಲ್ಲಿ ಮಾತನಾಡಿದ್ದಾರೆ.

ಬಹಿರಂಗವಾಗಿ ಮುತ್ತು ಕೊಟ್ಟಿದ್ದ ಸಿದ್ಧಾರ್ಥ್ ಮಲ್ಯ
ಸಿದ್ಧಾರ್ಥ್ ಮಲ್ಯ ಹಾಗೂ ದೀಪಿಕಾ ಪಡುಕೋಣೆ 2011 ರಲ್ಲಿ ಪರಸ್ಪರ ಪ್ರೀತಿಯಲ್ಲಿದ್ದರು. ಆರ್ಸಿಬಿ ಪಂದ್ಯಗಳನ್ನು ನೋಡಲು ದೀಪಿಕಾ ಪಡುಕೋಣೆ, ಸಿದ್ಧಾರ್ಥ್ ಮಲ್ಯ ಜೊತೆಗೆ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಒಮ್ಮೆಯಂತೂ ಕ್ರೀಡಾಂಗಣದಲ್ಲಿ ಮ್ಯಾಚ್ ನೋಡುವ ಸಂದರ್ಭ ಆರ್ಸಿಬಿ ಗೆದ್ದ ಕೂಡಲೇ ಸಿದ್ಧಾರ್ಥ್ ಮಲ್ಯ ಎಲ್ಲರೂ ನೋಡುತ್ತಿರುವಂತೆಯೇ ದೀಪಿಕಾ ಪಡುಕೋಣೆಯನ್ನು ಎಳೆದುಕೊಂಡು ತುಟಿಗೆ ಚುಂಬಿಸಿದ್ದರು, ಈ ದೃಶ್ಯ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಇದು ವಿವಾದಕ್ಕೂ ಕಾರಣವಾಯ್ತು. ಆದರೆ ಸಿದ್ಧಾರ್ಥ್ ಹಾಗೂ ದೀಪಿಕಾರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಆ ನಂತರ ದೀಪಿಕಾ ಪಡುಕೋಣೆ ರಣ್ಬೀರ್ ಕಪೂರ್ ಅನ್ನು ಪ್ರೀತಿಸಲು ಆರಂಭಿಸಿದರು.

ಖಿನ್ನತೆಗೆ ಒಳಗಾಗಿದ್ದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಸಹ ಖಿನ್ನತೆಗೆ ಒಳಗಾಗಿದ್ದರು. ರಣ್ಬೀರ್ ಕಪೂರ್ ಜೊತೆಗೆ ಗಾಢ ಪ್ರೀತಿಯಲ್ಲಿದ್ದ ದೀಪಿಕಾ ಬ್ರೇಕ್ಅಪ್ ಬಳಿಕ ಖಿನ್ನತೆಗೆ ಒಳಗಾದರು. ಆ ನಂತರ ಚಿಕಿತ್ಸೆ ಬಳಿಕ ಮತ್ತೆ ಚೇತರಿಸಿಕೊಂಡರು. ಆಗಿನಿಂದಲೂ ದೀಪಿಕಾ, ಮಾನಸಿಕ ಆರೋಗ್ಯದ ಬಗ್ಗೆ ಖಿನ್ನತೆ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈಗ ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಕಪೂರ್ ಸ್ನೇಹಿತರಾಗಿದ್ದಾರೆ. ರಣ್ಬೀರ್ ಕಪೂರ್, ಆಲಿಯಾ ಭಟ್ ಅನ್ನು ವಿವಾಹವಾಗುತ್ತಿದ್ದು, ಕೆಲವು ತಿಂಗಳ ಹಿಂದೆ ದೀಪಿಕಾ-ರಣ್ವೀರ್ ಹಾಗೂ ರಣ್ಬೀರ್ ಕಪೂರ್-ಆಲಿಯಾ ಭಟ್ ಒಟ್ಟಾಗಿ ಪಾರ್ಟಿಗಳನ್ನು ಸಹ ಮಾಡಿದ್ದರು.


Click it and Unblock the Notifications











