ಸೋನು ಸೂದ್ಗೆ ಮತ್ತೊಂದು ಗೌರವ: ಪಂಜಾಬ್ ಚುನಾವಣಾ ರಾಯಭಾರಿಯಾಗಿ ಘೋಷಣೆ
ಕೊರೊನಾ ಲಾಕ್ಡೌನ್ ಕಾಲದಲ್ಲಿ ವಲಸೆ ಕಾರ್ಮಿಕರಿಗೆ ನೆರವಿನ ಮಹಾಪೂರವೇ ಹರಿಸಿದ ನಟ ಸೋನು ಸೂದ್ ಗೆ ವಲಸೆ ಕಾರ್ಮಿಕರ ಪಾಲಿನ ದೇವರು ಎಂದೇ ಕರೆಯಲಾಗುತ್ತಿದೆ.
ಕೊರೊನಾ ಕಾಲದಲ್ಲಿ ಸೋನು ಸೂದ್ ಮಾಡಿದ ಸಹಾಯ ಇಡೀ ದೇಶವನ್ನೇ ಸೆಳೆದಿತ್ತು. ಸೋನು ಸೂದ್ ಮಾಡಿದ ಸಹಾಯಕ್ಕೆ ಹಲವಾರು ಗೌರವಗಳು ಅವರನ್ನು ಅರಸಿ ಬಂದವು. ಅವರ ಪುತ್ಥಳಿಗಳನ್ನು ಸ್ಥಾಪಿಸಲಾಯಿತು, ಅವರ ಹೆಸರಲ್ಲಿ ಗಣೇಶ ಮೂರ್ತಿಗಳನ್ನು ಮಾಡಲಾಯಿತು. ಪಶ್ಚಿಮ ಬಂಗಾಳ ದುರ್ಗಾ ಪೂಜೆಯಲ್ಲಿ ಸೋನು ಸೂದ್ ಬೊಂಬೆಗಳು ರಾರಾಜಿಸಿದವು. ಸೋನು ರಿಂದ ಸಹಾಯ ಪಡೆದವರು ತಮ್ಮ ಮಕ್ಕಳಿಗೆ ಸೋನು ಸೂದ್ ಹೆಸರಿಟ್ಟರು.
ಹಲವಾರು ಗೌರವಗಳು ಸೋನು ಸೂದ್ ಅನ್ನು ಹುಡುಕಿ ಬಂದವು. ಈಗ ಪಂಜಾಬ್ ರಾಜ್ಯ ಚುನಾವಣಾ ಆಯೋಗವು ಸೋನು ಸೂದ್ಗೆ ವಿಶಿಷ್ಟ ಗೌರವ ನೀಡುತ್ತಿದ್ದು, ಪಂಜಾಬ್ ಚುನಾವಣೆಗೆ ಸೋನು ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ.

ಪಂಜಾಬ್ ಚುನಾವಣೆ ರಾಯಭಾರಿಯಾಗಿ ಸೋನು ಸೂದ್
ಹೌದು, ಪಂಜಾಬ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೋನು ಸೂದ್ ಅನ್ನು ಪಂಜಾಬ್ ಚುನಾವಣಾ ರಾಯಭಾರಿಯನ್ನಾಗಿ ಚುನಾವಣಾ ಆಯೋಗವು ಘೋಷಿಸಿದೆ.

ಚುನಾವಣೆ ಬಗ್ಗೆ ಜಾಗೃತಿ
ಜನರಿಗೆ ಮತ ಹಾಕುವಂತೆ ಪ್ರೇರೇಪಿಸುವುದು, ಚುನಾವಣಾ ಅಪರಾಧಗಳನ್ನು ಮಾಡದಿರುವಂತೆ ಮನವಿ ಮಾಡುವುದು, ಸ್ವಚ್ಛ, ನ್ಯಾಯಯುತ ಚುನಾವಣೆ ನಡೆಸುವಂತೆ ಪ್ರೇರೇಪಿಸುವುದು, ಚುನಾವಣೆ ಮಹತ್ವ ಅರಿವು ಮಾಡಿಸುವುದು ಇನ್ನಿತರೆ ಕಾರ್ಯಗಳನ್ನು ಸೋನು ಸೂದ್ ಅವರು ಜಾಹೀರಾತುಗಳ ಮೂಲಕ ಮಾಡಬೇಕಾಗಿರುತ್ತದೆ.

ಪಂಜಾಬ್ ನ ಮೋಗಾ ಜಿಲ್ಲೆಯವರಾದ ಸೋನು ಸೂದ್
ಸೋನು ಸೂದ್ ಅವರು ಮುಂಬೈ ನಲ್ಲಿ ನೆಲೆಸಿದ್ದರೂ ಸಹ ಪಂಜಾಬ್ ನ ಮೋಗಾ ಜಿಲ್ಲೆಯವರಾಗಿದ್ದಾರೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗದ ಸಿಇಒ ಕರುಣಾ ರಾಜು ಅವರು ಸೋನು ಸೂದ್ ಅನ್ನು ಚುನಾವಣಾ ರಾಯಭಾರಿಯನ್ನಾಗಿ ಘೋಷಿಸಿದ್ದಾರೆ.

ಪುಸ್ತಕ ಬರೆಯುತ್ತಿದ್ದಾರೆ ಸೋನು ಸೂದ್
ಇನ್ನುಳಿದಂತೆ, ಸೋನು ಸೂದ್ ಅವರು ತಮ್ಮ ಬಾಲ್ಯ, ಸಿನಿ ಪಯಣ ಹಾಗೂ ಕೊರೊನಾ ಕಾಲದಲ್ಲಿ ಪಡೆದ ಅನುಭವವಗಳನ್ನೆಲ್ಲಾ ಒಟ್ಟು ಮಾಡಿ ಪುಸ್ತಕ ಬರೆಯುತ್ತಿದ್ದು, ಪುಸ್ತಕಕ್ಕೆ 'ಐ ಆಮ್ ನಾಟ್ ಮಸೀಯಾ' (ನಾನು ದೇವರಲ್ಲ) ಎಂದು ಹೆಸರಿಡಲಾಗಿದೆ.


Click it and Unblock the Notifications











