ಶ್ರೀದೇವಿ ಪಾರ್ಥೀವ ಶರೀರದೊಂದಿಗೆ ದುಬೈನಿಂದ ಹೊರಟ ಕುಟುಂಬ: ರಾತ್ರಿ ಮುಂಬೈಗೆ ಆಗಮನ
ಅಂತೂ ಮೂರು ದಿನಗಳ ಬಳಿಕ ಶ್ರೀದೇವಿಯ ಪಾರ್ಥೀವ ಶರೀರದೊಂದಿಗೆ, ಆಕೆಯ ಕುಟುಂಬ ಭಾರತಕ್ಕೆ ಪಯಣ ಆರಂಭಿಸಿದೆ. ದುಬೈನಲ್ಲಿನ ಕಾನೂನು ಪ್ರಕ್ರಿಯೆ, ತನಿಖೆ ಪೂರ್ಣಗೊಂಡ ಬಳಿಕ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಇಂದು ಮಧ್ಯಾಹ್ನ ಕುಟುಂಬಕ್ಕೆ ಶ್ರೀದೇವಿ ಮೃತದೇಹವನ್ನ ಹಸ್ತಾಂತರಿಸಿತು.
ಪಾರ್ಥೀವ ಶರೀರವನ್ನು ಸಂರಕ್ಷಿಸುವ ಪ್ರಕ್ರಿಯೆ (ಎಂಬ್ಲೇಮಿಂಗ್) ಮುಗಿದ ಬಳಿಕ ದುಬೈ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರೈವೇಟ್ ಜೆಟ್ ಮೂಲಕ ಶ್ರೀದೇವಿ ಕುಟುಂಬ ಹೊರಟಿದೆ. ಇಂದು ರಾತ್ರಿ 9.30 ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಮೃತದೇಹದೊಂದಿಗೆ ಶ್ರೀದೇವಿ ಕುಟುಂಬ ಆಗಮಿಸಲಿದೆ.
ಮುಂಬೈ ವಿಮಾನ ನಿಲ್ದಾಣದಿಂದ 'ಗ್ರೀನ್ ಎಕರ್ಸ್ ಹೋಮ್'ನಲ್ಲಿರುವ ಶ್ರೀದೇವಿ ನಿವಾಸಕ್ಕೆ ಪಾರ್ಥೀವ ಶರೀರ ರವಾನಿಸಲಾಗುವುದು. ನಾಳೆ ಬೆಳಗ್ಗೆ 9.30 ರಿಂದ ಸೆಲೆಬ್ರೇಷನ್ಸ್ ಕ್ಲಬ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 4.00 ರ ಸುಮಾರಿಗೆ ವಿಲ್ಲೆ ಪಾರ್ಲೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಸಂಬಂಧಿ ಮೋಹಿತ್ ಮಾರ್ವಾ ಮದುವೆಯಲ್ಲಿ ಪಾಲ್ಗೊಳ್ಳಲು ನಟಿ ಶ್ರೀದೇವಿ ಕುಟುಂಬದ ಸಮೇತ ದುಬೈಗೆ ತೆರಳಿದ್ದರು. ಶನಿವಾರ ರಾತ್ರಿ ಶ್ರೀದೇವಿ ನಿಧನರಾದರು. ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ, ಪ್ರಜ್ಞೆ ತಪ್ಪಿ ಶ್ರೀದೇವಿ ಪ್ರಾಣ ಬಿಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖವಾಗಿದೆ.
ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟಾಗ, ಅನುಸರಿಸಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಶ್ರೀದೇವಿ ಪ್ರಕರಣದಲ್ಲೂ ಅನುಸರಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ, ದುಬೈ ಪೊಲೀಸರ ತನಿಖೆ ಮುಗಿದ್ಮೇಲೆ, ಶ್ರೀದೇವಿ ಸಾವಿನ ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ಲೋಸ್ ಮಾಡಿ, ಕುಟುಂಬಕ್ಕೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಿತು.


Click it and Unblock the Notifications











