ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಶ್ರೀದೇವಿ ಮತ್ತೊಬ್ಬ ಪುತ್ರಿ
ಜನಪ್ರಿಯ ನಟಿ ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲ ಮಗಳು ಜಾಹ್ನವಿ ಕಪೂರ್ ಈಗಾಗಲೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಮಗಳೂ ಸಹ ಚಿತ್ರರಂಗಕ್ಕೆ ಬರಲು ತಯಾರಾಗಿದ್ದಾರೆ.
ಶ್ರೀದೇವಿ, ಬೋನಿ ಕಪೂರ್ ದಂಪತಿಯ ಎರಡನೇ ಮಗಳು ಖುಷಿ ಕಪೂರ್ ಇದೀಗ ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದು, ಈ ಬಗ್ಗೆ ಖುಷಿಯ ತಂದೆ ಬೋನಿ ಕಪೂರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
''ಅಪ್ಪನಾಗಿ ಮಕ್ಕಳಿಗೆ ಏನು ಮಾಡಬೇಕೊ ಅದನ್ನು ಮಾಡುವುದು ನನ್ನ ಜವಾಬ್ದಾರಿ. ಈ ಹಿಂದೆ ಅರ್ಜುನ್ ಕಪೂರ್ ಹಾಗೂ ಜಾಹ್ನವಿಗಾಗಿ ಮಾಡಿರುವುದನ್ನೇ ಖುಷಿಗಾಗಿಯೂ ಮಾಡಲು ನಾನು ತಯಾರಿದ್ದೇನೆ. ಜಾಹ್ನವಿ ಹಾಗೂ ಅರ್ಜುನ್ ಕಪೂರ್ ಈಗ ಉದ್ಯಮದಲ್ಲಿ ತಮ್ಮ ದಾರಿಯನ್ನು ತಾವು ಕಂಡುಕೊಂಡಿದ್ದಾರೆ. ಈಗ ಖುಷಿಯು ತನ್ನ ದಾರಿ ತಾನು ಕಂಡುಕೊಳ್ಳುವ ಸಮಯ. ಅದಕ್ಕೆ ತಂದೆಯಾಗಿ ಹಾಗೂ ನಿರ್ಮಾಪಕನಾಗಿ ನಾನು ಏನು ಸಹಾಯ ಬೇಕೋ ಅದನ್ನು ಮಾಡುತ್ತೇನೆ'' ಎಂದಿದ್ದಾರೆ ಬೋನಿ ಕಪೂರ್.
Recommended Video

ಖುಷಿ ಕಪೂರ್ ಅನ್ನು ಯಾರು ಲಾಂಚ್ ಮಾಡಲಿದ್ದಾರೆ ಎಂಬುದು ಪಕ್ಕಾ ಆಗಿಲ್ಲ ಆದರೆ ಗಾಳಿ ಸುದ್ದಿಯಂತೆ, ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಖುಷಿ ಕಪೂರ್ ಹಾಗೂ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ಮೂವರು ಒಟ್ಟಿಗೆ ಒಂದೇ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋಯಾ ಅಖ್ತರ್ ಈ ಪ್ರಾಜೆಕ್ಟ್ನ ನಿರ್ದೇಶಕಿ ಆಗಿದ್ದು ಜನಪ್ರಿಯ ಆರ್ಚಿ ಕಾಮಿಕ್ಸ್ ಅನ್ನು ವೆಬ್ ಸರಣಿಯನ್ನಾಗಿ ಮಾಡುತ್ತಿದ್ದಾರೆ ಜೋಯಾ ಅಖ್ತರ್, ಈ ವೆಬ್ ಸರಣಿಯು ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋನಿ ಕಪೂರ್, ''ಖುಷಿ ಕಪೂರ್ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾಳೆ ಎಂಬುದಷ್ಟೆ ನಾನು ಈಗ ನೀಡಬಹುದಾದ ಮಾಹಿತಿ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟವರು ಮುಂದಿನ ದಿನಗಳಲ್ಲಿ ನೀಡುತ್ತಾರೆ'' ಎಂದಿದ್ದಾರೆ ಬೋನಿ.
ಆರ್ಚಿ ಕಾಮಿಕ್ಸ್ನ ಮೂರು ಪ್ರಮುಖ ಪಾತ್ರಗಳಲ್ಲಿ ಖುಷಿ ಕಪೂರ್ ವೆರೋನಿಕಾ ಪಾತ್ರದಲ್ಲಿ ನಟಿಸಲಿದ್ದಾರೆ. ಸುಹಾನಾ ಖಾನ್ ಆರ್ಚಿ ಪಾತ್ರದಲ್ಲಿ ಹಾಗೂ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬೆಟ್ಟಿ ಪಾತ್ರದಲ್ಲಿ ನಟಿಸಲಿದ್ದಾರೆ.
ಬೋನಿ ಕಪೂರ್ ಬಾಲಿವುಡ್ನ ಹಿರಿಯ ನಿರ್ಮಾಪಕ ಆಗಿದ್ದು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಗಮನ ಹರಿಸಿದ್ದಾರೆ. ಅಜಿತ್ ನಟನೆಯ 'ವಲಿಮೈ' ಸಿನಿಮಾವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಫೆಬ್ರವರಿ 24 ರಂದು ಬಿಡುಗಡೆ ಆಗಿದ್ದು ಒಳ್ಳೆಯ ಕಲೆಕ್ಷನ್ ಪಡೆದಿದೆ.
ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಸಹ ದಕ್ಷಿಣ ಭಾರತ ಚಿತ್ರರಂಗದತ್ತ ಬರುತ್ತಾರೆ ಎನ್ನಲಾಗಿತ್ತು, ವಿಜಯ್ ದೇವರಕೊಂಡ ಅಥವಾ ಜೂ ಎನ್ಟಿಆರ್ ಅವರ ಮುಂದಿನ ಸಿನಿಮಾಗಳಲ್ಲಿ ಜಾಹ್ನವಿ ನಟಿಸುತ್ತಾರೆ ಎನ್ನಲಾಗಿತ್ತು ಆದರೆ ಜಾಹ್ನವಿ ಸದ್ಯಕ್ಕೆ ದಕ್ಷಿಣದ ಬರುವ ಸಾಧ್ಯತೆಯಂತೂ ಇಲ್ಲ ಎಂದು ಸ್ವತಃ ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ.
ಜನಪ್ರಿಯ ನಟಿ ಶ್ರೀದೇವಿ 2018 ರ ಫೆಬ್ರವರಿ 24 ರಂದು ದುಬೈನಲ್ಲಿ ನಿಧನ ಹೊಂದಿದರು. ಶ್ರೀದೇವಿ ಅವರು ಹೋಟೆಲ್ ಒಂದರ ಬಾತ್ ಟಬ್ಗೆ ಬಿದ್ದು ಉಸಿರುಗಟ್ಟಿ ನಿಧನ ಹೊಂದಿದರು. ಶ್ರೀದೇವಿ ನಿಧನದ ಬಗ್ಗೆ ಸಾಕಷ್ಟು ಅನುಮಾನುಗಳು ವ್ಯಕ್ತವಾಗಿದ್ದವು. ಮಗಳ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಶ್ರೀದೇವಿ ಕಾಲವಾದರು.


Click it and Unblock the Notifications











