ಬಿಹಾರದಲ್ಲಿ ಕರಣ್, ಸಲ್ಮಾನ್, ಆಲಿಯಾ ಭಟ್ ಸಿನಿಮಾಗಳಿಗೆ ನಿಷೇಧ?
ಮನೆಮಗನ ಹಠಾತ್ ಸಾವಿನಿಂದ ಇಡೀ ಬಿಹಾರವೇ ದುಃಖಿಸುತ್ತಿದೆ. ಅತ್ಯಂತ ಪ್ರತಿಭಾವಂತರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಬಿಹಾರದವರು. ಸಾಗರದಂತಹ ಹಿಂದಿ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ಗಳಿಲ್ಲದೆ ಬೆಳೆಯುತ್ತಿದ್ದ ಸುಶಾಂತ್ ಬಗ್ಗೆ ಬಿಹಾರದ ಜನತೆ ಬಹಳ ಹೆಮ್ಮೆಪಟ್ಟುಕೊಂಡಿದ್ದರು. ಸುಶಾಂತ್ ಬಗ್ಗೆ ಅಪಾರ ಪ್ರೀತಿ ಅವರಲ್ಲಿತ್ತು. ಆದರೆ ಅವರ ಅಗಲಿಕೆ ಅವರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
Recommended Video
ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ಬಿಹಾರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರಣ್ ಜೋಹರ್ ಸೇರಿದಂತೆ ಅನೇಕರ ಪ್ರತಿಕೃತಿಗಳನ್ನು ದಹಿಸಲಾಗಿದೆ. ಇದು ಆತ್ಮಹತ್ಯೆಯಲ್ಲ, ಪೂರ್ವ ನಿಯೋಜಿತ ಕೊಲೆ. ಹಾಗಾಗಿ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ. ಈ ನಡುವೆ ಅಲ್ಲಿ ಬಾಲಿವುಡ್ನ ಕೆಲವು ಕುಟುಂಬಗಳು ಮತ್ತು ಪ್ರಭಾವ ವ್ಯಕ್ತಿಗಳ ಸಿನಿಮಾಗಳನ್ನು ನಿಷೇಧಿಸುವಂತೆ ಒತ್ತಾಯ ಕೇಳಿಬಂದಿದೆ. ಮುಂದೆ ಓದಿ...

ಸುಶಾಂತ್ಗೆ ಅವಮಾನ
ಸುಶಾಂತ್ ಸಾವಿನಿಂದ ತೀವ್ರ ನೋವಿನಲ್ಲಿರುವ ಬಿಹಾರದ ಜನತೆಯಲ್ಲಿ ಬಾಲಿವುಡ್ನ ಸ್ವಜನಪಕ್ಷಪಾತದ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಅದರಲ್ಲಿಯೂ ಸುಶಾಂತ್ ಅವರನ್ನು ಈ ಹಿಂದೆ ಅವಮಾನಿಸಿದ್ದ ಪ್ರಭಾವಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

ನಿಷೇಧಕ್ಕೆ ಆಗ್ರಹ
ಸಲ್ಮಾನ್ ಖಾನ್ ಮತ್ತು ಆಲಿಯಾ ಭಟ್ ನಟಿಸಿರುವ ಸಿನಿಮಾಗಳು ಮತ್ತು ಕರಣ್ ಜೋಹರ್ ನಿರ್ಮಾಣದ ಚಿತ್ರಗಳನ್ನು ನೋಡುವುದಿಲ್ಲ ಎಂದು ಬಿಹಾರದ ಜನತೆ ಪ್ರತಿಜ್ಞೆ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ರಾಜ್ಯದಾದ್ಯಂತ ಅವರ ಚಿತ್ರಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ.

ರಾಜಕೀಯ ಪಕ್ಷಗಳ ಬೆಂಬಲ
ಸಿನಿಮಾ ಅಭಿಮಾನಿಗಳಷ್ಟೇ ಅಲ್ಲದೆ, ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳೂ ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿವೆ. ಸುಶಾಂತ್ ಸಾವು ಆತ್ಮಹತ್ಯೆಯೇ ಆಗಿದ್ದರೂ ಅದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸುಶಾಂತ್ ಅನುಭವಿಸಿದ ನೋವು, ಅವಮಾನಗಳು ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದು. ಇವುಗಳು ಹೊರಬರಬೇಕು ಎಂದು ಒತ್ತಾಯಿಸಲಾಗಿದೆ.

ಸುಶಾಂತ್ ಬೆಳವಣಿಗೆ ಸಹಿಸಲಿಲ್ಲ
ಬಿಹಾರ ಕಾಂಗ್ರೆಸ್ ಘಟಕ ಮಂಗಳವಾರ ಗೃಹದ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಸಿಬಿಐ ತನಿಖೆಗೆ ಮನವಿ ಮಾಡಿದೆ. ಸಣ್ಣ ಅವಧಿಯಲ್ಲಿಯೇ ಸುಶಾಂತ್ ಬಾಲಿವುಡ್ನಲ್ಲಿ ಛಾಪು ಮೂಡಿಸಿದ್ದರು. ಆದರೆ ಸಣ್ಣ ಪಟ್ಟಣದಿಂದ ಬಂದ ಅವರ ಏಳಿಗೆಯನ್ನು ಚಿತ್ರ ಜಗತ್ತಿನ ಕೆಲವು ವರ್ಗಗಳು ಸಹಿಸಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಸಿಬಿಐ ತನಿಖೆಯೊಂದೇ ಇಡೀ ಎಲ್ಲ ಸಂಗತಿಗಳನ್ನು ಸ್ಪಷ್ಟಗೊಳಿಸಬಲ್ಲದು ಎಂದು ಪತ್ರದಲ್ಲಿ ಹೇಳಿದ್ದಾರೆ.

ಪ್ರದರ್ಶಿಸಲು ಬಿಡುವುದಿಲ್ಲ
15 ದಿನಗಳ ಒಳಗಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಬಿಹಾರ ಯೂತ್ ಕಾಂಗ್ರೆಸ್ ಅಧ್ಯಕ್ಷ ಲಲನ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸುಶಾಂತ್ ಅವರಿಗೆ ನ್ಯಾಯ ಸಿಗುವವರೆಗೂ ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಅವರ ಚಿತ್ರಗಳನ್ನು ಬಿಹಾರದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











