ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿ ಸೋಮವಾರ ಬಹಿರಂಗವಾಗಿದ್ದು, ಅವರು ಆತ್ಮಹತ್ಯೆಯಿಂದಲೇ ಮೃತಪಟ್ಟಿರುವುದು ಖಚಿತವಾಗಿದೆ. ಭಾನುವಾರ ಮಧ್ಯಾಹ್ನ, ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಡಾ. ಆರ್ ಎನ್ ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಭಾನುವಾರ ತಡರಾತ್ರಿ ನಡೆದಿದೆ. ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆ ಎಂದು ದೃಢಪಟ್ಟಿದ್ದರೂ, ಅವರ ದೇಹದಲ್ಲಿ ವಿಷಪ್ರಾಶನದ ಅಂಶಗಳಿರುವ ಸಾಧ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಲು ಅಂಗಗಳನ್ನು ಜೆಜೆ ಆಸ್ಪತ್ರೆಗೆ ರವಾನಿಸಲಾಗಿದೆ.
ಪಟ್ನಾದಲ್ಲಿರುವ ಸುಶಾಂತ್ ಅವರ ತಂದೆ ಹಾಗೂ ಕುಟುಂಬದ ಇತರ ಸದಸ್ಯರು ಮುಂಬೈಗೆ ತಲುಪಲಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ. ಮುಂದೆ ಓದಿ...

ಒಂದು ಗ್ಲಾಸ್ ಜ್ಯೂಸ್ ಕುಡಿದಿದ್ದರು
ಸುಶಾಂತ್ ಅವರ ಕೊರೊನಾ ವೈರಸ್ ಸೋಂಕು ಪರೀಕ್ಷೆ ಕೂಡ ನಡೆಸಲಾಗಿದ್ದು, ಅದರಲ್ಲಿ ನೆಗೆಟಿವ್ ಬಂದಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಬೆಳಿಗ್ಗೆ 10 ಗಂಟೆ ಸುಮಾರಿಗೆ ಒಂದು ಗ್ಲಾಸ್ ಜ್ಯೂಸ್ ಕುಡಿದಿದ್ದರು. ಅದರ ನಂತರ ತಮ್ಮ ಬೆಡ್ ರೂಂ ಒಳಗೆ ತೆರಳಿ ಲಾಕ್ ಮಾಡಿಕೊಂಡಿದ್ದರು.

ಬಾಗಿಲು ಒಡೆದಿದ್ದ ಪೊಲೀಸರು
ಮನೆಗೆಲಸದವರು ಸತತವಾಗಿ ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಅವರು ನೆರೆಹೊರೆಯವರ ಸಹಾಯ ಕೋರಿದ್ದರು. 12.30ರ ಸುಮಾರಿಗೆ ಅಲ್ಲಿಗೆ ಬಂದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿ ನೋಡಿದಾಗ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ
ಕಳೆದ ಆರು ತಿಂಗಳಿನಿಂದ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದ ಸುಶಾಂತ್, ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಖಿನ್ನತೆಯನ್ನು ದೂರ ಮಾಡಲು ವೈದ್ಯರು ಸೂಚಿಸಿದ್ದ ಮಾತ್ರೆಗಳನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಏಕೆ ಖಿನ್ನತೆಗೆ ಒಳಗಾಗಿದ್ದರು ಎನ್ನುವುದು ಕೂಡ ತಿಳಿದಿಲ್ಲ. ಸಾಯುವ ಮುನ್ನ ಅವರು ಡೆತ್ ನೋಟ್ ಬರೆದಿರಲಿಲ್ಲ.

ನಾಲ್ವರು ಜತೆಗೆ ವಾಸಿಸುತ್ತಿದ್ದರು
ಸುಶಾಂತ್ ಅವರೊಟ್ಟಿಗೆ ನಾಲ್ವರು ವಾಸಿಸುತ್ತಿದ್ದರು. ನೀರಜ್ ಮತ್ತು ಕೇಶವ್ ಎಂಬ ಬಿಹಾರ ಮೂಲದ ಅಡುಗೆಯವರು ಕಳೆದ ಮೂರು ವರ್ಷಗಳಿಂದ ಜತೆಯಲ್ಲಿದ್ದರು. ದೀಪಕ್ ಸಾವಂತ್ ಸ್ವಚ್ಛತೆಯ ಕೆಲಸ ಮಾಡುತ್ತಿದ್ದರೆ, ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಪಿಟಾನಿ ಕೂಡ ಅವರೊಂದಿಗೆ ಇದ್ದರು.

ಉಸಿರುಗಟ್ಟುವಿಕೆ ಸಾವಿಗೆ ಕಾರಣ
ಭಾನುವಾರ ರಾತ್ರಿ ಸುಮಾರು ಎರಡು ಗಂಟೆ ಮರಣೋತ್ತರ ಪರೀಕ್ಷೆ ನಡೆದಿತ್ತು. ಮರಣೋತ್ತರ ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸಾವಿಗೆ 'ಆಸ್ಪಿಕ್ಸಿಯಾ' (ಉಸಿರುಗಟ್ಟುವಿಕೆ) ಕಾರಣ ಎಂದು ವರದಿಯಲ್ಲಿ ದಾಖಲಿಸಲಾಗಿದೆ. ಕತ್ತಿನ ಸುತ್ತ ಬಿಗಿದ ಗುರುತುಗಳಿವೆ. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ.

ಅನುಮಾನ ವ್ಯಕ್ತಪಡಿಸಿದ ಸುಶಾಂತ್ ಭಾವ
ಹರಿಯಾಣ ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಶಾಂತ್ ಸಿಂಗ್ ಅವರ ಭಾವ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಓ.ಪಿ. ಸಿಂಗ್ ಈ ಸಾವಿನಲ್ಲಿ ಬೇರೆ ಏನೋ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತು ಆಳವಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಓ.ಪಿ. ಸಿಂಗ್ ಮತ್ತು ಸುಶಾಂತ್ ಅಕ್ಕ ನೀತು ಸಿಂಗ್, ಭಾನುವಾರ ರಾತ್ರಿ ಬಾಂದ್ರಾಕ್ಕೆ ತಲುಪಿದ್ದಾರೆ.

ಮೃತದೇಹದ ಫೋಟೊ ಶೇರ್ ಮಾಡಬೇಡಿ
ಸುಶಾಂತ್ ಅವರ ಮೃತದೇಹದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನು ಶೇರ್ ಮಾಡುವವರ ವಿರುದ್ಧ ಕಾನೂನು ಉಲ್ಲಂಘನೆಯ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











