"ಸೌಂದರ್ಯ ಬದಲು ಅಂದು ನಾನು ಸತ್ತಿದ್ದರೆ ಚೆನ್ನಾಗಿತ್ತು": ನಟಿ ಆಮನಿ
ಬಹುಭಾಷಾ ನಟಿ ಸೌಂದರ್ಯ ಕೊನೆಯುಸಿರೆಳೆದು 18 ವರ್ಷಗಳೇ ಕಳೆದು ಹೋಗಿದೆ. ಇವತ್ತಿಗೂ ಆಕೆಯನ್ನು ಅಭಿಮಾನಿಗಳು ಮರೆತ್ತಿಲ್ಲ. 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕೆಂದು ತೆರಳುತ್ತಿದ್ದ ವೇಳೆ ಹೆಲೆಕಾಪ್ಟರ್ ಅಪಘಾತಕ್ಕೀಡಾಗಿ ನಟಿ ಸೌಂದರ್ಯ ಬಾರದಲೋಕಕ್ಕೆ ಹೊರಟುಬಿಟ್ಟರು. ಅಂದು ಆಕೆಯ ಬದಲು ಆ ಜಾಗದಲ್ಲಿ ನಾನು ಸತ್ತಿದ್ದರೆ ಚೆನ್ನಾಗಿತ್ತು ಎಂದು ನಟಿ ಆಮನಿ ಹೇಳಿದ್ದಾರೆ.
ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸೌಂದರ್ಯ ದುರಂತ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಸಾವಿಗೀಡಾಗುವ ಕೆಲ ತಿಂಗಳ ಹಿಂದಷ್ಟೇ ಆಕೆ ರಘು ಎಂಬುವವರ ಕೈ ಹಿಡಿದಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಕೆ. ಎಸ್ ಸೌಮ್ಯ ಮುಂದೆ ಸೌಂದರ್ಯ ಆಗಿ ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದರು. ನಾಯಕಿ ಅಂದರೆ ಬರೀ ಗ್ಲಾಮರ್ ಗೊಂಬೆ ಅಲ್ಲ, ಎನ್ನುವುದನ್ನು ಸಾಬೀತು ಮಾಡಿ ತೋರಿಸಿದರು. ಅಮಿತಾಬ್ ಬಚ್ಚನ್, ಚಿರಂಜೀವಿ, ರಜನಿಕಾಂತ್, ವಿಷ್ಣುವರ್ಧನ್ರಂತಹ ಸೂಪರ್ ಸ್ಟಾರ್ಗಳ ಜೊತೆ ನಾಯಕಿಯಾಗಿ ನಟಿಸಿ ಗೆದ್ದರು.
'ಬಾ ನನ್ನ ಪ್ರೀತಿಸು' ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸೌಂದರ್ಯ ನಂತರ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಮನೆಮಾತಾದರು. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದರು. ಸೌಂದರ್ಯ ಆಪ್ತ ಗೆಳತಿ ನಟಿ ಆಮನಿ. ಇಬ್ಬರು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸ್ನೇಹಿತೆಯನ್ನು ನೆನೆದು ಆಮನಿ ಭಾವುಕರಾಗಿದ್ದಾರೆ.

ಆಕೆ ಬದಲು ನಾನು ಸತ್ತಿದ್ದರೆ ಚೆನ್ನಾಗಿತ್ತು- ಆಮನಿ
"ಸೌಂದರ್ಯ ಇನ್ನಿಲ್ಲ ಎಂದು ಗೊತ್ತಾದಾಗ ನನಗೇನು ಗೊತ್ತಾಗಲಿಲ್ಲ. ಸೌಂದರ್ಯ ಬದಲು ಆ ಜಾಗದಲ್ಲಿ ನಾನು ಸತ್ತಿದ್ದರೆ ಚೆನ್ನಾಗಿತ್ತು, ಅವಳನ್ನು ಯಾಕೆ ಕಿತ್ತುಕೊಂಡೆ ದೇವರೇ ಎಂದು ಶಪಿಸಿದ್ದೆ. ಆ ಸಮಯಕ್ ನನಗೆ ಮದುವೆ ಆಗಿ ಒಂದು ವರ್ಷ ಆಗಿತ್ತು. ಮಕ್ಕಳು ಇರಲಿಲ್ಲ. ಜೀವನವನ್ನೆಲ್ಲಾ ನೋಡಿಬಿಟ್ಟಿದ್ದೆ. ನಾನು ಸತ್ತು ಹೋಗಿದ್ದರೂ ಪರವಾಗಿರಲಿಲ್ಲ ಎಂದು ಕೊಂಡಿದ್ದೆ. ನಂತರ ಹೋಗಿ ಸೌಂದರ್ಯ ತಾಯಿಯನ್ನು ಭೇಟಿ ಮಾಡಿದ್ದೆ. ಕೆಲವರು ಹೇಳಿದಂತೆ ಆಕೆ ಕೊನೆಯುಸಿರೆಳೆದಾಗ ಗರ್ಭಿಣಿ ಆಗಿರಲಿಲ್ಲ."

"ಸೌಂದರ್ಯ ಅಣ್ಣನನ್ನು ನಾನು ಮದ್ವೆ ಆಗಬೇಕಿತ್ತು"
ಅಂದು ನಡೆದ ದುರಂತದಲ್ಲಿ ಸೌಂದರ್ಯ ಜೊತೆ ಇದ್ದ ಅಣ್ಣ ಅಮರನಾಥ್ ಕೂಡ ಸುಟ್ಟು ಬೂದಿಯಾಗಿದ್ದರು. ಅಂದಹಾಗೆ ಅಮರ್ನಾಥ್ ಅವರನ್ನು ನಟಿ ಆಮನಿ ಮದುವೆ ಆಗಬೇಕಿತ್ತಂತೆ. "ಇನ್ನು ಸೌಂದರ್ಯ ಮದುವೆಗಿಂತ ಮೊದಲು ನಾನು ಅವರ ಅಣ್ಣ ಅಮರ್ನ ಮದುವೆ ಆಗಬೇಕಿತ್ತು. ಅವರ ತಾಯಿ ಅಮರ್ನ ಮದುವೆ ಆಗ್ತೀಯಾ ಎಂದು ಕೇಳಿದ್ದರು. ಆದರೆ ಆಗ ನಾನು ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸಿದ್ದ ಕಾರಣ ಮದುವೆ ಆಲೋಚನೆ ಇಲ್ಲ ಎಂದಿದ್ದೆ"

"ಅವತ್ತು ನಾನು ಹೋಗಬೇಕಿತ್ತೇನೋ"
"ಒಂದು ವೇಳೆ ನಾನು ಅಮರ್ನ ಮದುವೆ ಆಗಿದ್ದರೆ, ಹೇಗಿದ್ದರೂ ಸೌಂದರ್ಯ ಬರ್ತಿದ್ದಾಳೆ ನಾನು ಬರ್ತೀನಿ ಎಂದು ಹೆಲಿಕಾಪ್ಟರ್ ಏರುತ್ತಿದ್ದೆ ಎನಿಸುತ್ತೆ. ಅಥವಾ ಗಂಡ ಹಾಗೂ ಬೆಸ್ಟ್ ಫ್ರೆಂಡ್ ಸತ್ತು ಹೋದರು ಎಂದು ಅವರ ನೆನಪಿನಲ್ಲೇ ಇವತ್ತಿಗೂ ಅಳುತ್ತಾ ಇರುತ್ತಿದ್ದೆ. ಎಲ್ಲಾ ವಿಧಿಯಾಟ. ಯಾರಿಗೆ ಏನು ಬರೆದಿರುತ್ತದೋ ಅದು ಅವರಿಗೆ ಆಗುತ್ತದೆ"

ಸೌಂದರ್ಯ ಕಂಡ ಕನಸು ನನಸಾಗಲೇ ಇಲ್ಲ
'ಅಮ್ಮ ದೊಂಗ' ಸಿನಿಮಾದಲ್ಲಿ ಸೌಂದರ್ಯ ಹಾಗೂ ಆಮನಿ ಒಟ್ಟಿಗೆ ನಟಿಸಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಆತ್ಮೀಯ ಒಡನಾಟ ಇತ್ತು. "ಸ್ನೇಹಿತರು ಎನ್ನುವುದಕ್ಕಿಂತ ನಾಬವಿಬ್ಬರು ಅಕ್ಕ, ತಂಗಿ ರೀತಿ ಇದ್ವಿ. ಪ್ರತಿ ವಿಚಾರವನ್ನು ನಾವು ಶೇರ್ ಮಾಡಿಕೊಳ್ಳುತ್ತಿದ್ದೆವು. ನಾನು ಚಿತ್ರರಂಗದ ಸ್ನೇಹಿತರ ಒಂದೆರಡು ಮದುವೆ ಹೋಗಿರಬಹುದು ಅಷ್ಟೆ. ಆದರೆ ನಾನು ಸೌಂದರ್ಯ ಮದುವೆಗೆ ಬಹಳ ಇಷ್ಟಪಟ್ಟು ಹೋಗಿದ್ದು. ನಮ್ಮ ತಂದೆ ಅಗಲಿದ್ದು ಕೂಡ ಅಷ್ಟು ನೋವು ತಂದಿಲ್ಲ. ಸೌಂದರ್ಯ ಇಲ್ಲ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾಕಂದರೆ ಆಕೆ ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ಆ ರೀತಿ ಇರಬೇಕು, ಈ ರೀತಿ ಬದುಕಬೇಕು ಎಂದುಕೊಂಡಿದ್ದರು. ಆದರೆ ಅದ್ಯಾವುದು ನೆರವೇರಲೇ ಇಲ್ಲ ಎನ್ನುವುದು ಬೇಸರ ತರಿಸುತ್ತದೆ" ಎಂದು ಆಮನಿ ಹೇಳಿದ್ದಾರೆ.


Click it and Unblock the Notifications











