ಕಾಂತಾರ 'ತುಳು' ಆವೃತ್ತಿ ಎಡವಿತೇ, ಆದ ತಪ್ಪುಗಳಾದರೂ ಏನು?
ಹೊಂಬಾಳೆ ಫಿಲಂಸ್ ಆಗಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾಕ್ಕೆ ಈ ರೀತಿಯ ರೆಸ್ಪಾನ್ಸ್ ಸಿಗುತ್ತೆ ಎಂದು ಊಹಿಸಿರಲಿಲ್ಲ. ಖುದ್ದು, ರಿಷಬ್ ಅವರೇ ಈ ಮಾತನ್ನು ಹಲವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದುಂಟು.
ಪರಶುರಾಮ ಸೃಷ್ಟಿಯ ಭಾಗದ ಕಥಾಹಂದರವೊಂದನ್ನು ಕನ್ನಡದವರು ಮಾತ್ರ ಅಪ್ಪಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಪ್ರೀಮಿಯರ್ ಶೋ ನಂತರ ಕಂಪ್ಲೀಟ್ ತಲೆಕೆಳಗಾಗಿತ್ತು. ಕನ್ನಡಿಗರ ಮೌತ್ ಟಾಕ್ ಯಾವ ಮಟ್ಟಕ್ಕೆ ಇತ್ತು ಎಂದರೆ, ಹೊಂಬಾಳೆ ಫಿಲಂಸ್ ಇತರ ಭಾಷೆಗಳಿಗೆ ಡಬ್ ಮಾಡಬೇಕಾಯಿತು.
ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾದ ನಂತರ ತುಳುನಾಡು ಭಾಗದ ಕಥೆ ಹೊಂದಿರುವ ಚಿತ್ರವನ್ನು ತುಳು ಭಾಷೆಯಲ್ಲಿ ಯಾಕೆ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಕೂಗು ಜೋರಾಯಿತು. ಅದು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದನ್ನೂ ಮಾಡಿತ್ತು.
ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಚಿತ್ರತಂಡ ಕಾಂತಾರ ಸಿನಿಮಾವನ್ನು ತುಳು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂತು. ಅದಕ್ಕಾಗಿ, ಕೋಸ್ಟಲ್ ವುಡ್ ನ (ತುಳು ಚಿತ್ರರಂಗ) ಹೆಸರಾಂತ ಕಲಾವಿದರನ್ನೂ ಡಬ್ ಮಾಡಿಕೊಂಡಿತು. ಆದರೆ, ಚಿತ್ರಕ್ಕೆ ನಿರೀಕ್ಷಿಸಿದ ಜನಮನ್ನಣೆ ಸಿಗಲಿಲ್ಲ. ಅದಕ್ಕೆ ಕಾರಣವೇನು?

ಕನ್ನಡ ಸಿನಿಮಾವು ತುಳುಗೆ ಡಬ್ ಆದ ಉದಾಹರಣೆಗಳು ಕಮ್ಮಿ
ಕನ್ನಡ ಸಿನಿಮಾವು ತುಳುಗೆ ಡಬ್ ಆದ ಉದಾಹರಣೆಗಳು ಕಮ್ಮಿ. ಕಳೆದ ಏಳು ವರ್ಷಗಳಲ್ಲಿ ಎರಡು ಸಿನಿಮಾಗಳು ತುಳುವಿಗೆ ಡಬ್ ಆಗಿರಬಹುದು. ಆದರೆ, 'ಕಾಂತಾರ' ಚಿತ್ರವನ್ನು ತುಳುವಿನಲ್ಲಿ ಡಬ್ ಮಾಡಬೇಕು ಎನ್ನುವ ಒತ್ತಡ ತುಳು ಭಾಷಿಗರಿಂದ ಹೆಚ್ಚಾದಂತೆ ಚಿತ್ರತಂಡ ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್ ಜೊತೆಗೆ ಮೂಲ ಚಿತ್ರದ ಕಲಾವಿದರನ್ನೇ ಬಳಸಿಕೊಂಡು ತುಳುವಿಗೆ ಡಬ್ ಮಾಡಲಾಯಿತು. ಎಲ್ಲವೂ ತರಾತುರಿಯಲ್ಲಿ ನಡೆಯಿತು ಎನ್ನುವುದು ಗೊತ್ತಿರುವ ವಿಚಾರ.
ತುಳುವನಾಡ ದಂತಕಥೆ
"ತುಳುವನಾಡ ದಂತಕಥೆನ್ ನಮ್ಮ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್. ಲೋಕೊರ್ಮೆ ಜನಕುಲೆನ ಉಡಲ್ ಗೆಂದಿನ "ಕಾಂತಾರ" ದ ತುಳು ಅವತರಣಿಕೆ ನಮ್ಮ ದೇಶೊಡು ಉಂದುವೇ ಬರ್ಪಿನ ಡಿಸೆಂಬರ್ 2, 2022 ದಾನಿ ನಿಕ್ಲೆನ ಮುಟ್ಟದ ಚಿತ್ರಮಂದಿರಲೆಡ್ ಬುಡುಗಡೆ ಆವೆರೆ ಉಂಡು. ಪಿದಯಿ ದೇಶೊಡು ನವೆಂಬರ್ 25 ತಾರೀಖ್ ದಾನಿ ಬುಡುಗಡೆ ಆವೆರೆ ಉಂಡು" ಎಂದು ಹೊಂಬಾಳೆ ಫಿಲಂಸ್ ಟ್ವೀಟ್ ಕೂಡಾ ಮಾಡಿತ್ತು.

ತುಳುವಿನಲ್ಲಿ ಡಬ್ ಮಾಡಬೇಕು ಎನ್ನುವ ಒತ್ತಡ
ತುಳುವಿನಲ್ಲಿ ಡಬ್ ಮಾಡಬೇಕು ಎನ್ನುವ ಒತ್ತಡವಿದ್ದರೂ, ಕರಾವಳಿ ಭಾಗದಲ್ಲಿ 'ಕಾಂತಾರ'ದ ಮೂಲ ಆವೃತ್ತಿ ಭರ್ಜರಿ ಸದ್ದನ್ನು ಮಾಡಿತ್ತು. ಇತ್ತೀಚಿನ ದಿನಗಳಲ್ಲಿ ಯಾವ ಚಿತ್ರಗಳಿಗೂ ಕಂಡು ಕೇಳರಿಯದ ಜನಮನ್ನಣೆ ಮಂಗಳೂರು, ಉಡುಪಿ ಭಾಗದಲ್ಲಿ ಚಿತ್ರಕ್ಕೆ ಸಿಕ್ಕಿತ್ತು. ಚಿತ್ರವನ್ನು ಎರಡ್ಮೂರು ಬಾರಿ ನೋಡಿದವರ ಸಂಖ್ಯೆಯೂ ಸಾಕಷ್ಟು. ಇದರ ಜೊತೆಗೆ, ನವೆಂಬರ್ 24ರಂದು ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಯಿತು. ಹಾಗಾಗಿ, ಕಾಂತಾರ ತುಳು ಆವೃತ್ತಿ ಸದ್ದು ಮಾಡುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ.

ಸಿನಿಮಾ ನೋಡಿ ಬಂದವರು
ಇದರ ಜೊತೆಗೆ ಸಿನಿಮಾ ನೋಡಿ ಬಂದವರು ಮೊದಲು ಅಸಮಾಧಾನ ವ್ಯಕ್ತ ಪಡಿಸಿದ್ದು ಚಿತ್ರದ ಡಬ್ಬಿಂಗ್ ಬಗ್ಗೆ. ಎಷ್ಟೋ ಕಡೆ ಲಿಪ್ ಸಿಂಕ್ ಆಗದೇ ಇದ್ದದ್ದು, ಮೂಲ ಚಿತ್ರದ ತಾಜಾತನವನ್ನು ತುಳು ಆವೃತ್ತಿ ಉಳಿಸಿಕೊಂಡಿಲ್ಲ ಎನ್ನುವ ಕಂಪ್ಲೇಂಟ್ ಕೂಡಾ ಇದೆ. ಇನ್ನೊಂದಷ್ಟು ಕಡೆ, ಕನ್ನಡದಲ್ಲಿ ಬರುವ ಸಂಭಾಷಣೆಗೆ ಸರಿಯಾದ ತುಳು ಪದವನ್ನು ಹುಡುಕುವಲ್ಲೂ ಸರಿಯಾದ ಪ್ರಯತ್ನ ನಡೆಯಲಿಲ್ಲ. ರಾಜನ ಪಾತ್ರಧಾರಿಗೆ (ವಿನಯ್ ಬಿಡ್ಡಪ್ಪ) ಕೊಡಲಾದ ತುಳು ವಾಯ್ಸ್ ಕೂಡಾ ಪಾತ್ರಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎನ್ನುವ ಬೇಸರವೂ ತುಳು ಚಿತ್ರಪ್ರೇಮಿಗಳಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ 'ಕಾಂತಾರ' ಸಿನಿಮಾದ ತುಳು ಆವೃತ್ತಿ ಅಷ್ಟೇನೂ ಸದ್ದು ಮಾಡಿಲ್ಲ ಎನ್ನುವುದು ಸತ್ಯವೇ?


Click it and Unblock the Notifications











