ಇರ್ಫಾನ್ ಖಾನ್ ಅಂತರಂಗ ಅನಾವರಣ ಮಾಡಿದ ಮಾಜಿ ರೂಂಮೇಟ್ ಸುರೇಶ್ ಆನಗಳ್ಳಿ
ಖ್ಯಾತ ನಟ ಇರ್ಫಾನ್ ಖಾನ್ ಇಂದು ನಿಧನ ಹೊಂದಿದ್ದಾರೆ. ಇರ್ಫಾನ್ ಖಾನ್ ಅಗಲಿಕೆಗೆ ಸಿನಿಮಾರಂಗ ಮಾತ್ರವಲ್ಲದೆ, ರಂಗಭೂಮಿ ಸಹ ಶೋಕ ವ್ಯಕ್ತಪಡಿಸಿದೆ.
Recommended Video
ಬಾಲಿವುಡ್, ಹಾಲಿವುಡ್ಗಳಲ್ಲಿ ಖ್ಯಾತಿಯ ಶಿಖರವೇರಿದರೂ ಸಹ ಇರ್ಫಾನ್ ಖಾನ್ ಬೇರುಗಳಿದ್ದಿದ್ದು ರಂಗಭೂಮಿಯಲ್ಲಿ. ರಂಗಭೂಮಿಯಿಂದಲೇ ನಟನಾ ಪಯಣ ಆರಂಭಿಸಿದ ಅವರು ಹೋಗಿ ತಲುಪಿದ ಗಮ್ಯ, ಏರಿದ ಎತ್ತರಗಳು ಸ್ಮರಣೀಯ.
ಎರಡೆರಡು ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾಗಳಲ್ಲಿ ನಟಿಸಿದ್ದ ಇರ್ಫಾನ್ ಖಾನ್, ನಟನೆ ಕಲಿಯುವ ಹೊತ್ತಿನಲ್ಲಿ ಅವರಿಗೆ ನೆರವಾಗಿದ್ದು ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ಅವರ ನಟನೆಗೆ ಆಕಾರ ನೀಡಿದ ಶ್ರೇಯ ಪ್ರಸನ್ನ ಹೆಗ್ಗೋಡು ಅವರಿಗೆ ಸಂದರೆ, ಅವರ ಬೆಳವಣಿಗೆಯನ್ನು ಹತ್ತಿರಕಂಡು ಪ್ರೋತ್ಸಾಹಿಸಿದವರು ರಂಗಭೂಮಿ ಪ್ರಮುಖರಲ್ಲೊಬ್ಬರಾದ ಸುರೇಶ್ ಆನಗಳ್ಳಿ ಅವರು.
ಸುರೇಶ್ ಆನಗಳ್ಳಿ ಅವರು ಇರ್ಫಾನ್ ಖಾನ್ ಬಗ್ಗೆ ಹಲವರಿಗೆ ಗೊತ್ತಿಲ್ಲದ ವಿಷಯಗಳನ್ನು 'ಕನ್ನಡ ಫಿಲ್ಮೀಬೀಟ್' ಜೊತೆಗೆ ಹಂಚಿಕೊಂಡಿದ್ದಾರೆ. ಮುಂದಿನ ಮಾತುಗಳು ಸುರೇಶ್ ಆನಗಳ್ಳಿ ಅವರದ್ದು.

ನಮ್ಮೊಟ್ಟಿಗೆ ಒಂದು ಸಣ್ಣ ರೂಂ ನಲ್ಲಿದ್ದರು ಇರ್ಫಾನ್ ಖಾನ್
'ನಾನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ) ಸೇರಿದ ಎರಡು ವರ್ಷಗಳ ನಂತರ ಅಲ್ಲಿಗೆ ಬಂದವರು ಇರ್ಫಾನ್ ಖಾನ್. ಬಹುಷಃ 1983 ರಲ್ಲಿರಬೇಕು, ಎನ್ಎಸ್ಡಿ ಗೆ ಅವರಿಗೆ ಅಡ್ಮೀಶನ್ ಸಿಕ್ಕರಲಿಲ್ಲ, ಆದರೆ ಅವರು ತಮ್ಮ ಊರಾದ ಜೈಪುರಕ್ಕೆ ಹಿಂದುರಿಗಲಿಲ್ಲ. ಬದಲಿಗೆ ನಮ್ಮೊಟ್ಟಿಗೆ ಬಂದು ನಮ್ಮ ಸಣ್ಣ ರೂಂ ನಲ್ಲಿ ನಮ್ಮ ಜೊತೆಗೇ ಇದ್ದರು, ಅಲ್ಲಿಯೇ ಇದ್ದು ನಾಟಕಗಳನ್ನು ಮಾಡುತ್ತಿದ್ದರು. ಮುಂದಿನ ವರ್ಷ ಅವರಿಗೆ ಅಡ್ಮೀಷನ್ ದೊರಕಿತು.

ಇರ್ಫಾನ್ ಖಾನ್ಗೆ ಕೆಲವು ದೈಹಿಕ ನ್ಯೂನ್ಯತೆಗಳಿದ್ದವು
ವಿದ್ಯಾರ್ಥಿ ದೆಸೆಯಿಂದಲೇ ಅವರದ್ದು ಸೂಕ್ಷ್ಮ ಮನೋಭಾವ, ಗಮನಿಸುವ ಪ್ರವೃತ್ತಿ. ಕಲಿಕೆಯಲ್ಲೂ ಅಷ್ಟೆ, ಅದ್ಭುತವಾತ ಏಕಾಗ್ರತೆ. ಸಾಧಿಸುವ ಹಠ ಇತ್ತು. ಇರ್ಫಾನ್ ಗೆ ಸುಲಲಿತವಾಗಿ ಮಾತನಾಡಲು ಸಮಸ್ಯೆಯಿತ್ತು, ಉಗ್ಗು ಅವರ ಮಾತುಗಳನ್ನು ನುಂಗುತ್ತಿತ್ತು. ಜೊತೆಗೆ ಅವರ ಒಂದು ಕೈ ಚಿಕ್ಕದು, ಆದರೆ ಅದೆಲ್ಲವನ್ನೂ ಅವರು ಮೆಟ್ಟಿನಿಂತರು, ನಟನಾಗಬೇಕೆಂಬ ಹಠಕ್ಕೆ ಅದಾವುದೂ ಅಡ್ಡಿ ಬರಲಿಲ್ಲ.

ನಾಟಕಗಳಲ್ಲಿ ಪ್ರಮುಖ ಪಾತ್ರಗಳು ಅವರಿಗೆ ಸಿಗುತ್ತಿರಲಿಲ್ಲ
ಎನ್ಎಸ್ಡಿ ಯಲ್ಲಿದ್ದಾಗ ನಾನು ನಿರ್ದೇಶಿಸಿದ್ದ ಹಿಂದಿ ನಾಟಕ 'ದಿ ಮೆಶರ್ಸ್ ಟೇಕನ್' ನಲ್ಲಿ ಅವರು ನಟಿಸಿದ್ದರು. ಎನ್ಎಸ್ಡಿಯಲ್ಲಿದ್ದಾಗಲೂ ಅವರು ಕೃಷ ದೇಹದ ವ್ಯಕ್ತಿ ಹೆಚ್ಚಿನ ಆರೋಗ್ಯ ಆಗಲೂ ಅವರಿಗೆ ಇರಲಿಲ್ಲ. ಆದರೆ ಅದ್ಭುತವಾದ ಸ್ಥೈರ್ಯವಿತ್ತು, ಆತ್ಮವಿಶ್ವಾಸವಿತ್ತು. ಎನ್ಎಸ್ಡಿಯಲ್ಲಿ ನಾಟಕಗಳಲ್ಲಿ ಬಹಳ ಪ್ರಮುಖ ಪಾತ್ರಗಳೇನೂ ಅವರಿಗೆ ಸಿಗುತ್ತಿರಲಿಲ್ಲ, ಆದರೆ ಸಿಕ್ಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು.

ಎನ್ಎಸ್ಡಿ ನಂತರ ಪ್ರಸನ್ನ ಅವರೊಡನೆ ನಾಟಕಗಳನ್ನು ಮಾಡಿದರು
ನಂತರ 87 ರಲ್ಲಿ ಬಹುಷಃ ಅವರು ಎನ್ಎಸ್ಡಿ ಮುಗಿಸಿದರು. ನಂತರ ಅವರು ಪ್ರಸನ್ನ ಅವರ ಕೆಲವು ನಾಟಗಳಲ್ಲಿ ನಟಿಸಿದರು. ಅವಕಾಶಗಳನ್ನರಸಿ ನಂತರ ಮುಂಬೈ ಗೆ ಸ್ಥಳಾಂತರವಾದರು. ಆಗಲೂ ನನ್ನ ಅವರ ಸಂಪರ್ಕ ಇತ್ತು. ಚಂದ್ರಕಾಂತಾ ಧಾರವಾಹಿಯಲ್ಲಿ ನಟಿಸುತ್ತಿದ್ದಾಗ ನಾನು ಮುಂಬೈ ಗೆ ಹೋಗಿದ್ದೆ, ಅವರ ಮನೆಯಲ್ಲಿಯೇ ಉಳಿದಿದ್ದೆ. ಆಗ ನಾವು ಚಂದ್ರಕಾಂತಾ ಧಾರವಾಹಿ ಸೆಟ್ಗೂ ಹೋಗಿದ್ದೆವು.

''ಅವರ ಅಂತರಂಗ ಚೈತನ್ಯ ಅದ್ಭುತವಾದುದು''
ನಟನೆಯಲ್ಲಿ ಅವರು ಮಾಸ್ಟರ್ ಆಗಿಬಿಟ್ಟಿದ್ದರು. ತಮ್ಮ ಕಣ್ಣುಗಳನ್ನು ಬಳಸಿ ಪಾತ್ರಕ್ಕೆ ಹೊಸ ಚೈತನ್ಯ ತುಂಬಿಬಿಡುತ್ತಿದ್ದರು. ಅವರ ಅಂತರಂಗದ ಚೈತನ್ಯ ಅದ್ಭುತವಾಗಿತ್ತು ಅದು ಅವರ ಪಾತ್ರಗಳ ಮೇಲೂ ಪ್ರಭಾವ ಬೀರುತ್ತಿತ್ತು, ಇರ್ಫಾನ್ ಖಾನ್ ಬಹಳ ಶಿಸ್ತಿನ ಮನುಷ್ಯ. ಅವರೊಬ್ಬ ಸಫಲ ನಟನರಾದ ಹಿಂದೆ ಅದೂ ಒಂದು ಕಾರಣ.

ರಂಗಭೂಮಿಯೊಂದಿಗೆ ನಂಟು ಕಡಿದುಕೊಂಡಿರಲಿಲ್ಲ
ಇರ್ಫಾನ್ ಅವರು ಎತ್ತರಕ್ಕೆ ಏರಿದರೂ ರಂಗಭೂಮಿಯೊಂದಿಗೆ ನಂಟು ಕಳೆದುಕೊಂಡಿರಲಿಲ್ಲ. ಪ್ರಸನ್ನ ಅವರೊಂದಿಗೆ ಚಳವಳಿಗಳಲ್ಲೂ ಭಾಗವಹಿಸಿದ್ದರು. ಬಹಳ ಸರಳ ಜೀವಿ ಅವರಾಗಿದ್ದರು. ಬಾಲಿವುಡ್ ಗೆ ತಕ್ಕಂತೆ ವೇಷಭೂಷಗಳು ಇದ್ದರೂ ಸಹ ರಂಗಭೂಮಿಯಿಂದ ಬಂದವರಂತೆ ಅವರು ನೆಲವನ್ನು ಎಂದೂ ಮರೆತವರಲ್ಲ, ಎಲ್ಲರೊಟ್ಟಿಗೆ ಎಲ್ಲರೊಳಗೆ ಒಂದಾಗಿ ಅತ್ಯಂತ ಸರಳವಾಗಿ ಇರುತ್ತಿದ್ದರು. ಬಾಲಿವುಡ್ ಸ್ಟಾರ್ಗಳ ಅಹಂ ಅವರಲ್ಲಿರಲಿಲ್ಲ.

ಬಾಲಿವುಡ್ಗೆ ನಟನೆಯ ಮಾದರಿ ಹಾಕಿಕೊಟ್ಟವರು
ಇರ್ಫಾನ್ ಖಾನ್, ನಾಸಿರುದ್ಧೀನ್ ಶಾ, ಓಂ ಪುರಿ, ನವಾಜುದ್ದೀನ್ ಸಿದ್ಧಿಕಿ ಇವರೆಲ್ಲಾ ನಟನೆಗೆ ಹೊಸ ಭಾಷ್ಯ ಬರೆದವರು, ನಟನಾಗಲು ಸುಂದರತೆ ಅವಶ್ಯಕವಲ್ಲ, ನಟನಾದವನು ಯಾವ ಪಾತ್ರಕ್ಕೂ ಸಲ್ಲಬಹುದು ಎಂದು ಹೇಳಿಕೊಟ್ಟವರು. ಬಾಲಿವುಡ್ಗೆ ನಟನೆಯ ಮಾದರಿ ಹಾಕಿಕೊಟ್ಟವರು. ರಂಗಭೂಮಿಯಿಂದ ಹೋಗಿ ಭಾರತೀಯ ಸಿನಿಮಾಕ್ಕೆ ಕೊಡುಗೆ ಕೊಟ್ಟವರು ಎಂದು ಸುರೇಶ್ ಆನಗಳ್ಳಿ ಹೇಳಿದರು.


Click it and Unblock the Notifications











