ಎಸ್ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿರದ ಸಂಗತಿಗಳು
ಗಾಯನದೊಂದಿಗೆ ತಮ್ಮ ಸರಳತೆ, ಮಾನವೀಯತೆ, ವಿನಯತೆಯಿಂದ ಅಭಿಮಾನಿಗಳ ಮನಗಳಲ್ಲಿ ನೆಲೆಗೊಂಡಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಇಂದು ನಿಧನಹೊಂದಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಹಿರಿಯ-ಕಿರಿಯ ಗಾಯಕರು, ತಮ್ಮ ಗುರುಗಳು, ಹಾಡು, ಸಂಗೀತ ಹೀಗೆ ಹಲವು ವಿಷಯಗಳ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾರೆ. ಆದರೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ, ಹಿನ್ನೆಲೆ ಬಗ್ಗೆ ತಾವು ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದು ಬಹಳವೇ ಕಡಿಮೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಿರದ ಕಾರಣ, ಅವರ ಬಗ್ಗೆ ಹೆಚ್ಚು ಮಂದಿಗೆ ಹೆಚ್ಚು ತಿಳಿದಿಲ್ಲ. ಹಾಡುಗಾರರಾಗಿದ್ದು ಹೇಗೆ? ಅದಕ್ಕೆ ಎಸ್ಪಿಬಿ ಪಟ್ಟ ಕಷ್ಟಗಳು ಏನು? ಹೀಗೆ ಹಲವು ವಿಷಯಗಳ ಬಗ್ಗೆ ಕಡಿಮೆ ಜನಕ್ಕಷ್ಟೆ ಗೊತ್ತಿದೆ. ಎಸ್ಪಿಬಿ ಬಗ್ಗೆ ಇಲ್ಲಿದೆ ಕೆಲವು ಆಸಕ್ತಿಕರ ಸಂಗತಿಗಳು.
ಬಡಮಧ್ಯಮ ಕುಟುಂಬದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ತಂದೆ ಹರಿಕಥೆ ದಾಸರಾಗಿದ್ದರು. ಊರುಗಳಿಗೆ ತೆರಳಿ ಹರಿಕತೆ ಹೇಳುತ್ತಿದ್ದರು ಎಸ್ಪಿಬಿ ತಂದೆ. ನಾಟಕಗಳಲ್ಲಿ ಪ್ರಾರ್ಥನೆಗಳನ್ನು ಸಹ ಹಾಡುತ್ತಿದ್ದರು. ಎಸ್ಪಿಬಿಗೆ ಇಬ್ಬರು ಸಹೋದರರು, ಐವರು ಸಹೋದರಿಯರು. ಎಸ್ಪಿಬಿ ಹಾಡುಗಾರರಾಗುವುದು ಅವರ ಮನೆಯಲ್ಲಿ ಇಷ್ಟವಿರಲಿಲ್ಲ, ಆದರೆ ಎಸ್ಪಿಬಿ ಬಿಡಲಿಲ್ಲ.

ಟೈಫೈಡ್ ಕಾಯಿಲೆಗೆ ತುತ್ತಾಗಿದ್ದ ಎಸ್ಪಿಬಿ
ಎಸ್ಪಿಬಿ ಎಂಜಿನಿಯರಿಂಗ್ ಓದುವ ಸಂದರ್ಭ ಟೈಫೈಡ್ ಕಾಯಿಲೆಗೆ ತುತ್ತಾಗಿದ್ದರು. ಎಸ್ಪಿಬಿ ಬದುಕುವುದೇ ಕಷ್ಟ ಎನಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹೇಗೋ ಸುಧಾರಿಸಿಕೊಂಡರು. ಆದರೆ ಅವರು ಎಂಜಿನಿಯರ್ ಕಾಲೇಜು ಬಿಡಬೇಕಾಯಿತು. ನಂತರ ಅವರು ಚೆನ್ನೈಗೆ ಹೋಗಿ ಎಂಜಿನಿಯರ್ಸ್ ಇನ್ಸ್ಟಿಟ್ಯೂಷನ್ ಸೇರಿಕೊಂಡರು. ಅಲ್ಲೇ ಅವರಿಗೆ ಐಳಯರಾಜ ಪರಿಚಯವಾಯಿತು.

ಎಸ್.ಜಾನಕಿ ಮೊದಲೇ ಹೇಳಿದ್ದರು ಎಸ್ಪಿಬಿ ಭವಿಷ್ಯ
ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರು 16-17 ವರ್ಷದವರಿದ್ದಾಗ ಸಂಗೀತ ಸ್ಪರ್ಧೆಯಲ್ಲಿ ಹಾಡಿದ್ದರು. ಆ ಸ್ಪರ್ಧೆಯ ತೀರ್ಪುಗಾರರಾಗಿದ್ದವರು ಗಾಯಕಿ ಎಸ್.ಜಾನಕಿ. ಅವರು ಅಂದೇ ಎಸ್ಪಿಬಿ ಗೆ ಹೇಳಿದ್ದರು, ಸಿನಿಮಾಗಳಲ್ಲಿ ಹಾಡು ಎಂದು, ಆಗ ಸುಮ್ಮನೆ ನಕ್ಕಿದ್ದರಂತೆ ಎಸ್ಪಿಬಿ.

ಇಳಯರಾಜ ಅವರೊಟ್ಟಿಗೆ ತಂಡ ಕಟ್ಟಿದ್ದ ಎಸ್ಪಿಬಿ
ಚೆನ್ನೈನಲ್ಲಿ ಸಂಗೀತ ತಂಡವೊಂದನ್ನು ಕಟ್ಟಿದ್ದರು ಎಸ್ಪಿಬಿ ಅದರಲ್ಲಿ ಇಳಯರಾಜ ಸಹ ಇದ್ದರು. ಇಳಯರಾಜ ಹಾಗೂ ಎಸ್ಪಿಬಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಆಗೆಲ್ಲಾ ಸಂಗೀತ ನಿರ್ದೇಶಕ ಎಂಎಸ್ ವಿಶ್ವನಾಥ್ ಅವರ ಕಾರು ನೋಡುವುದೇ ಇಬ್ಬರಿಗೂ ದೊಡ್ಡ ಕುತೂಹಲ ಆಗಿತ್ತಂತೆ.

ಮೊಹಮ್ಮದ್ ರಫಿ ಚಿತ್ರಕ್ಕೆ ದಿನವೂ ಕೈಮುಗಿಯುತ್ತಿದ್ದ ಎಸ್ಪಿಬಿ
ಮೊಹಮ್ಮದ್ ರಫಿ, ಎಸ್ಪಿಬಿ ಬಹುವಾಗಿ ಮೆಚ್ಚುವ ಗಾಯಕ. ರಫಿ ಅವರ ಚಿತ್ರವೊಂದನ್ನು ಸಹ ಅವರು ಮನೆಯಲ್ಲಿಟ್ಟುಕೊಂಡಿದ್ದಾರೆ. ಅದಕ್ಕೆ ಹಾರ ಹಾಕಿ ಕೈಮುಗಿಯುವ ಅಭ್ಯಾಸ ಇಟ್ಟುಕೊಂಡಿದ್ದರು. ಉಳಿದಂತೆ ಎಂ.ಬಾಲಮುರಳಿಕೃಷ್ಣ ಅವರನ್ನು ತಂದೆಸಮಾನರೆಂದು, ಗಾಯಕ ಏಸುದಾಸ್ ಅವರನ್ನು ಸಹೋದರ ಸಮಾನರೆಂದು ಗೌರವಿಸಿ, ಆರಾಧಿಸುತ್ತಾರೆ ಎಸ್ಪಿಬಿ.

ಅವಕಾಶ ಕೊಟ್ಟವರ ಹೆಸರನ್ನೇ ಸ್ಟುಡಿಯೋಕ್ಕೆ ಇಟ್ಟಿದ್ದಾರೆ ಎಸ್ಪಿಬಿ
ಎಸ್ಪಿಬಿಗೆ ಮೊದಲ ಅವಕಾಶ ನೀಡಿದ ಗುರುಗಳಾದ ಕೊದಂಡಪಾಣಿ ಅವರು ಮೊದಲ ಅವಕಾಶ ಕೊಟ್ಟರು. ಅಲ್ಲಿಂದ ಅವರ ಜೀವನ ಬದಲಾಯಿತು. ಹಾಗಾಗಿ ಕೋದಂಡಪಾಣಿ ಅವರ ಹೆಸರನ್ನು ತಮ್ಮ ಸ್ಟುಡಿಯೋಕ್ಕೂ ಇಟ್ಟಿದ್ದಾರೆ ಎಸ್ಪಿ ಬಾಲಸುಬ್ರಹ್ಮಣ್ಯಂ.
Recommended Video

ಗಂಟಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಸ್ಪಿಬಿ
ಎಸ್ಪಿ ಬಾಲಸಸುಬ್ರಹ್ಮಣ್ಯಂ ಅವರು ಕೊರಳಿಗೆ ಒಮ್ಮೆ ಆಪರೇಷನ್ ಮಾಡಿಸಿಕೊಂಡಿದ್ದರು. ಲತಾ ಮಂಗೇಶ್ವರ್, ಎಸ್ ಜಾನಕಿ ಸೇರಿ ಹಲವರು ಬೇಡವೆಂದಿದ್ದರು ಆದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಪುಣ್ಯವಶಾತ್ ಅವರ ದ್ವನಿ ಬದಲಾಗಲಿಲ್ಲ. ತೂಕ ಇಳಿಸಿಕೊಳ್ಳಲು ಸಹ ಒಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು , ಈ ಶಸ್ತ್ರಚಿಕಿತ್ಸೆ ಬಳಿಕ ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಯಿತು ಎನ್ನಲಾಗುತ್ತಿದೆ.


Click it and Unblock the Notifications











