'ಕೆಜಿಎಫ್' ಸಿನಿಮಾದಲ್ಲಿ ಕೆಜಿಎಫ್ ಬಗ್ಗೆ ತೋರಿಸಿದ್ದು ಸತ್ಯವೇ? ಇಲ್ಲಿದೆ ನಿಜ
'ಕೆಜಿಎಫ್' ಸಿನಿಮಾದ ಎರಡೂ ಭಾಗಗಳು ಬಹುದೊಡ್ಡ ಹಿಟ್ ಆಗಿವೆ. ಸಿನಿಮಾದ ಮೂಲಕ ಕರ್ನಾಟಕದ ಕೆಜಿಎಫ್ ಎಂಬ ಊರು ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಸಿನಿಮಾದಿಂದಾಗಿ ಕೆಜಿಎಫ್ ಊರಿಗೆ ದೊಡ್ಡ ಮಟ್ಟದ ಗುರುತು ಪ್ರಾಪ್ತಿಯಾಗಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ (ಕೋಲಾರ ಗೋಲ್ಡ್ ಫೀಲ್ಡ್ಸ್)ಗೆ ಸಿನಿಮಾ 'ಕೆಜಿಎಫ್' ನಿಂದಾಗಿ ದೊಡ್ಡ ಮಟ್ಟದ ಹೆಸರೇನೋ ಬಂದಿದೆ. ಊರಿನ ಹೆಸರಿಟ್ಟುಕೊಂಡಿರುವ ಈ ಸಿನಿಮಾ ನಿಜವಾಗಿಯೂ ಕೆಜಿಎಫ್ನ ಅಥವಾ ಅಲ್ಲಿನ ಜನಗಳ ಜೀವನದ ಪ್ರತಿಫಲನವಾ ಎಂದರೆ ಖಂಡಿತ ಅಲ್ಲ ಎಂದೇ ಹೇಳಬೇಕು.
'ಕೆಜಿಎಫ್' ಸಿನಿಮಾ ಸೆಟ್ಟೇರಿದಾಗ ಇದು ಕೆಜಿಎಫ್ ಅನ್ನು ಆಳಿದ ರೌಡಿಗಳ ಕತೆ ಎನ್ನಲಾಯಿತು. ಬಳಿಕ ಅಲ್ಲ ಇದು, ಕೆಜಿಎಫ್ನ ಚಿನ್ನದ ಗಣಿಗಳಲ್ಲಿ ಕೆಲಸ ಮಾಡಿದ ಜೀತದಾಳುಗಳ ಧಾರುಣ ಕತೆ ಎನ್ನಲಾಯಿತು. ಸಿನಿಮಾ ಬಿಡುಗಡೆ ಆದ ಬಳಿಕ ಗೊತ್ತಾಗಿದ್ದು, ಇದು ಒಂದು 'ಕಮರ್ಶಿಯಲ್ ಸಿನಿಮಾ' ಎಂದು.

ಗಣಿಗಾರಿಕೆ ಆರಂಭವಾಗಿದ್ದು ಯಾವಾಗ?
ಸಿನಿಮಾದ ಮೊದಲ ಭಾಗದ ಆರಂಭದಲ್ಲಿ ಹೇಳಲಾಗುತ್ತದೆ ರಾಕಿಭಾಯ್ 1951 ರಲ್ಲಿ ಹುಟ್ಟುತ್ತಾನೆ ಅಂದೇ ಸರ್ಕಾರದವರಿಗೆ ಕೆಜಿಎಫ್ನಲ್ಲಿ ಚಿನ್ನ ಸಿಗುತ್ತದೆ ಎಂದು ಆದರೆ ಅಸಲಿಗೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಒಂದು ಮಾಹಿತಿಯ ಪ್ರಕಾರ ಸಾವಿರಾರು ವರ್ಷಗಳಿಂದಲೂ ಕೆಜಿಎಫ್ ನಲ್ಲಿ ಚಿನ್ನ ಗಣಿಗಾರಿಕೆ ಮಾಡುವ ಯತ್ನ ಸಾಗುತ್ತಲೇ ಇತ್ತಂತೆ. ಆದರೆ ಮೊದಲಿಗೆ ಕೆಜಿಎಫ್ನಲ್ಲಿ ಅಧಿಕೃತವಾಗಿ ಚಿನ್ನದ ಗಣಿಗಾರಿಕೆ ಆರಂಭವಾಗಿದ್ದು 1880 ರಲ್ಲಿ ಬ್ರಿಟೀಷ್ ವ್ಯಕ್ತಿ ಮೂರನೇ ಜಾನ್ ಟೇಲರ್ನಿಂದ. ಆತ ಅಲ್ಲಿ ಹಲವು ಗಣಿಗಳನ್ನು ಸುಪರ್ಧಿಗೆ ತೆಗೆದುಕೊಂಡು ಗಣಿಗಾರಿಕೆ ಆರಂಭಿಸಿ ಟನ್ಗಟ್ಟಲೆ ಚಿನ್ನ ಹೊರತೆಗೆಯಲಾರಂಭಿಸಿದ.

ಜೈಲು ವಾಸಿಗಳನ್ನು ದುಡಿಯಲು ಕರೆತರಲಾಗಿತ್ತು
ಗಣಿಯಲ್ಲಿ ಕೂಲಿ ಮಾಡಲು ಆರಂಭದಲ್ಲಿ ಜೈಲುವಾಸಿಗಳನ್ನು ಕರೆತರಲಾಗಿತ್ತು. ಬಳಿಕ ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಸೇಲಂ, ಉತ್ತರ ತಮಿಳುನಾಡಿನ ಕೆಲವು ಜಿಲ್ಲೆಗಳು ಹಾಗೂ ಆಂಧ್ರದಿಂದಲೂ ಜನರನ್ನು ಕರೆತರಲಾಯ್ತು. ಕೆಜಿಎಫ್ ಏಷ್ಯಾದ ಎರಡನೇ ಅತಿ ಆಳದ ಗಣಿ. ಇಲ್ಲಿನ ಗಣಿಗಳು 3000 ಅಡಿ ಆಳದಷ್ಟಿವೆ. ಚಿನ್ನದ ಗಣಿಗಾರಿಕೆಗೆ ಸಹಾಯವಾಗಲೆಂದು ಶೀವನಸಮುದ್ರದಿಂದ 1902 ರಲ್ಲಿ ವಿದ್ಯುತ್ ನೀಡಲಾಯ್ತು. ನೀರಿನ ಕೊರತೆ ಆಗದಿರಲೆಂದು ಬ್ರಿಟೀಷರು ಕೆರೆಗಳನ್ನು ಅಲ್ಲಿ ಕಟ್ಟಿಸಿದರು. ಆ ಸಮಯದಲ್ಲಿ ಕೋಲಾರವನ್ನು ಮಿನಿ ಇಂಗ್ಲೆಂಡ್ ಎಂದೇ ಕರೆಯಲಾಗುತ್ತಿತ್ತು. ಕೆಜಿಎಫ್ನಲ್ಲಿ ಮೈಸೂರು ಗೋಲ್ಡ್ ಮೈನ್, ಚಾಂಪಿಯನ್ ರೀಫ್ ಮೈನ್, ನ್ಯೂಡಿಡ್ರೂಗ್ ಮೈನ್, ಊರೆಗಮ್ ಮೈನ್, ಟ್ಯಾಂಕ್ ಬ್ಲಾಕ್ ಮೈನ್, ಕೋರಮಂಡಲ್ ಮೈನ್, ಬಾಲಾಘಾಟ್ ಮೈನ್, ನೈನ್ ರೀಫ್ಸ್ ಮೈನ್ಗಳಲ್ಲಿ ಕೆಲಸ ನಡೆಯುತ್ತಿತ್ತು.

ರೌಡಿಗಳ ಹಿಡಿತದಲ್ಲಿರಲಿಲ್ಲ ಚಿನ್ನದ ಗಣಿ
'ಕೆಜಿಎಫ್' ಸಿನಿಮಾದಲ್ಲಿ ತೋರಿಸಿದಂತೆ ಚಿನ್ನದ ಗಣಿ ರೌಡಿಗಳ ಹಿಡಿತದಲ್ಲಿರಲಿಲ್ಲ. ಗಣಿಯ ಸುತ್ತ ಸಾಕಷ್ಟು ರೌಡಿಸಂ, ಗ್ಯಾಂಗ್ಸ್ಟರ್ಗಳ ಹಾವಳಿ ಇತ್ತಾದರೂ ರೌಡಿಗಳು, ಗ್ಯಾಂಗ್ಸ್ಟರ್ಗಳು ಚಿನ್ನದ ಗಣಿಯ ಮಾಲೀಕರಾಗಿರಲಿಲ್ಲ. ಭಾರತ ಸ್ವಾತಂತ್ರ್ಯವಾದ ಬಳಿಕವೂ ಕೆಲ ಕಾಲ ಬ್ರಿಟೀಷರೇ ಗಣಿಗಾರಿಕೆ ನಡೆಸುತ್ತಿದ್ದರು. ಬಳಿಕ 1956 ರಲ್ಲಿ ಆ ಗಣಿಯನ್ನು ರಾಷ್ಟ್ರೀಯಕರಣಗೊಳಿಸಲಾಯ್ತು. ಬಳಿಕ ಭಾರತ ಸರ್ಕಾರದ ಬಿಜಿಎಂಎಲ್ ಸಂಸ್ಥೆ ಅಲ್ಲಿ ಮೈನಿಂಗ್ ನಡೆಸಲಾರಂಭಿಸಿತು. ಗಣಿಗಾರಿಕೆ ನಿಲ್ಲಿಸುವವರೆಗೆ ಬಿಜಿಎಂಎಲ್ ಸಂಸ್ಥೆಯೇ ಕೆಜಿಎಫ್ನಲ್ಲಿ ಗಣಿಗಾರಿಕೆ ನಡೆಸುತ್ತಿತ್ತು.

ಗಣಿ ಕಾರ್ಮಿಕರ ಬದುಕು ಹೇಗಿತ್ತು?
'ಕೆಜಿಎಫ್' ಸಿನಿಮಾದಲ್ಲಿ ಗಣಿ ಕಾರ್ಮಿಕರ ದುಸ್ತಿಯ ಮೇಲೆ ಬೆಳಕು ಚೆಲ್ಲಲಾಗಿದೆ. ಆದರೆ ಆ ಕಾರ್ಮಿಕರು ದುಷ್ಟರಿಂದ ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆಯಷ್ಟೆ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಕಾರ್ಮಿಕರಿಗೆ ಅಲ್ಲಿ ಕೆಲಸ ಮಾಡಲು ನಿಜವಾದ ಸವಾಲು ಇದ್ದುದು ಸಾವಿರಾರು ಅಡಿ ಆಳದ ಗಣಿಗಳಲ್ಲಿ. ಈವರೆಗೆ ಹಲವು ಕಾರ್ಮಿಕರ ಜೀವಗಳು ಕೆಜಿಎಫ್ನ ಆಳ ಗಣಿಗಳಲ್ಲಿ ಮಣ್ಣಾಗಿವೆ. ಸದಾ ಧೂಳು, ಮಣ್ಣು, ಬಾಂಬ್ಗಳ ಸಿಡಿತಗಳ ನಡುವೆಯೇ ಕೆಲಸ ಮಾಡಿದ್ದಾರೆ ಅಲ್ಲಿನ ಕಾರ್ಮಿಕರು. ಬ್ರಿಟೀಷರು ಕೆಜಿಎಫ್ನಲ್ಲಿ ಕಾರ್ಮಿಕರಿಗೆ ಆಸ್ಪತ್ರೆ, ಕಾರ್ಮಿಕರ ಮಕ್ಕಳಿಗಾಗಿ ಶಾಲೆ ತೆರೆದು ಕೈತೊಳೆದುಕೊಂಡರೆ ಹೊರತು ಅವರಿಗಾಗಿ ಹೆಚ್ಚಿನದ್ದೇನೂ ಮಾಡಲಿಲ್ಲ. ಆ ನಂತರ ಬಂದ ಸರ್ಕಾರಿ ಸಂಸ್ಥೆ ಸಹ ಕಾರ್ಮಿಕರನ್ನು ವಿಪರೀತ ದುಡಿಸಿಕೊಂಡಿತು. ಚಿನ್ನ ತೆಗೆದ ಕೈಗಳಿಗೆ ಮಣ್ಣು ಬಿಟ್ಟರೆ ಹೆಚ್ಚಿನದ್ದೇನೂ ಸಿಗಲಿಲ್ಲ.

ಎಷ್ಟು ಚಿನ್ನ ಹೊರತೆಗೆಯಲಾಗಿದೆ
ಇನ್ನು 'ಕೆಜಿಎಫ್ 2' ಸಿನಿಮಾದ ಅಂತ್ಯದಲ್ಲಿ ರಾಕಿಭಾಯ್ ತಾವು ಬಗೆದ ಚಿನ್ನವನ್ನೆಲ್ಲ ತೆಗೆದುಕೊಂಡು ಹಡುಗೊಂದರಲ್ಲಿ ಹೋಗುತ್ತಿರುವ ದೃಶ್ಯವಿದೆ. ಸಿನಿಮಾದಲ್ಲಿ ಸಹ ಆಗಾಗ್ಗೆ ದೊಡ್ಡ ರೂಮಿನ ತುಂಬ ಚಿನ್ನದ ಗಟ್ಟಿಗಳನ್ನು ತುಂಬಿರುವ ದೃಶ್ಯ ತೋರಿಸಲಾಗುತ್ತದೆ. ಹಾಗಿದ್ದರೆ ಕೆಜಿಎಫ್ನಿಂದ ಗಣಿಕಾರಿಗೆ ಮಾಡಿ ಪಡೆದ ಚಿನ್ನ ಎಷ್ಟು? ಎಂಬ ಕುತೂಹಲ ಹುಟ್ಟುವುದು ಸಹಜ. ಕೆಜಿಎಫ್ ನಲ್ಲಿ ಗಣಿಗಾರಿಕೆ ಪ್ರಾರಂಭವಾದ 121 ವರ್ಷಗಳಲ್ಲಿ ಈವರೆಗೆ 3000 ಟನ್ಗೂ ಹೆಚ್ಚು ಚಿನ್ನವನ್ನು ಕೆಜಿಎಫ್ನಿಂದ ಗಣಿಗಾರಿಕೆ ಮಾಡಿ ಹೊರತೆಗೆಯಲಾಗಿದೆ ಎನ್ನಲಾಗುತ್ತದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನ ತೆಗೆದ ಗಣಿಗಳಲ್ಲಿ ಒಂದು ಕೆಜಿಎಫ್.

ಇನ್ನು ಕೆಜಿಎಫ್ ಗಣಿಯನ್ನು ಅನ್ನು ಬಂದ್ ಮಾಡಿದ್ದೇಕೆ?
ಇನ್ನು ಕೆಜಿಎಫ್ ಅನ್ನು ಬಂದ್ ಮಾಡಿದ್ದೇಕೆ? ಎಂಬ ಅನುಮಾನವೂ ಸಹಜ. 'ಕೆಜಿಎಫ್ 2' ಸಿನಿಮಾದಲ್ಲಿರುವಂತೆ ಕೆಜಿಎಫ್ ಮೇಲೆ ಬಾಂಬ್ ದಾಳಿ ಅಂತೂ ಆಗಿಲ್ಲ. ಕೆಜಿಎಫ್ ಇನ್ನೂ ಹಾಗೆಯೇ ಇದೆ. ಅಲ್ಲಿನ ಗಣಿಗಳು ಸಹ ಹಾಗೆಯೇ ಇದೆ. ಆದರೆ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. 2001 ರ ಫೆಬ್ರವರಿ ತಿಂಗಳಿನಲ್ಲಿ ಕೆಜಿಎಫ್ನಲ್ಲಿ ಗಣಿಗಾರಿಕೆ ನಿಲ್ಲಿಸಲಾಯ್ತು. ಗಣಿಗಾರಿಕೆ ಮಾಡಿ ಮಾಡಿ ಚಿನ್ನವೆಲ್ಲ ಬರಿದಾಯ್ತು, ಅಲ್ಲಿ ದೊರಕುತ್ತಿದ್ದ ಚಿನ್ನದ ಪ್ರಮಾಣ ಕಡಿಮೆಯಾಯ್ತು. ಮಾಡಲು ಆಗುತ್ತಿದ್ದ ಖರ್ಚಿಗೂ ಸಿಗುತ್ತಿದ್ದ ಚಿನ್ನದ ಪ್ರಮಾಣಕ್ಕೂ ಭಾರಿ ಅಂತರ ಉಂಟಾದ ಕಾರಣ ನಷ್ಟ ಭರಿಸಲಾಗಿದೆ ಸರ್ಕಾರವು ಗಣಿಕಾರಿಕೆ ನಿಲ್ಲಿಸಿತು.

ಅನಾಥರನ್ನಾಗಿ ಮಾಡಿದ ಸರ್ಕಾರ
ಗಣಿಗಾರಿಕೆ ನಡೆಯುತ್ತಿದ್ದ ಸಮಯದಲ್ಲಿ ಕೆಜಿಎಫ್ ಜನ ನೀರಿನ ಕೊರತೆಯನ್ನಾಗಲಿ, ವಿದ್ಯುತ್ ಕೊರತೆಯನ್ನಾಗಲಿ ನೋಡಿದ್ದೇ ಇಲ್ಲ. ಆದರೆ ಗಣಿ ಮುಚ್ಚಿದ ಕೂಡಲೆ ವಿದ್ಯುತ್ ಕೊರತೆ, ನೀರಿನ ಕೊರತೆ ಆರಂಭಾಯ್ತು. ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ದಿಕ್ಕು ತೋಚದಂತಾದರು. ಗಣಿ ಮುಚ್ಚಿದ ಮೇಲೆ ಕೆಲಸಗಳಿಗಾಗಿ ಹಲವರು ಬೆಂಗಳೂರು ಸೇರಿದರೆ, ಇನ್ನು ಕೆಲವರು ಕ್ರೈಂ ಪ್ರಾರಂಭಿಸಿದರು. ಕೆಜಿಎಫ್ ಒಡಲಲ್ಲಿ ಚಿನ್ನ ಇದ್ದಷ್ಟು ದಿನ ಸರ್ಕಾರ, ಅಲ್ಲಿನ ಸ್ಥಳೀಯರ ಜೀವ ಹಿಂಡಿ ಚಿನ್ನ ತೆಗೆಸಿಕೊಂಡಿತು, ಚಿನ್ನ ಖಾಲಿಯಾದ ಮೇಲೆ ಎಲ್ಲರನ್ನೂ ಅನಾಥರನ್ನಾಗಿ ಮಾಡಿ ಹೊರಟುಬಿಟ್ಟಿತು. ಈಗ 'ಕೆಜಿಎಫ್' ಸಿನಿಮಾದಿಂದಾಗಿ ಆ ಊರಿಗೆ ಮತ್ತೆ ಮಾನ್ಯತೆ ದೊರಕುತ್ತಿದೆ. ಆದರೆ 'ಕೆಜಿಎಫ್' ಸಿನಿಮಾ ನೋಡಿದರೆ ಅದರ ಕತೆಯೇ ನಿಜವಾದ ಕೆಜಿಎಫ್ ಕತೆ ಎಂದು ನಂಬುವ ಅಪಾಯವೂ ಇದೆ.


Click it and Unblock the Notifications











